ಡಿಕೆಶಿ ಬಿಜೆಪಿಗೆ : ಸುಳ್ಳು, ಹಾಸ್ಯಾಸ್ಪದ ಎಂದ ಬಿಜೆಪಿ
Recommended Video
ಬೆಂಗಳೂರು, ನವೆಂಬರ್ 9 : 'ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದಲೇ ಬಿಜೆಪಿ ಸೇರುವಂತೆ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹಾಕಲಾಗಿದೆ' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಬುಧವಾರ ನೋಟು ನಿಷೇಧ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. 'ಅಧಿಕಾರಿಗಳಿಂದಲೇ ಬಿಜೆಪಿ ಸೇರುವಂತೆ ಆಹ್ವಾನವನ್ನೂ ನೀಡಲಾಗಿದೆ. ಬಿಜೆಪಿ ಯಾವ ಮಟ್ಟಕ್ಕೆ ಕೇಸರೀಕರಣ ಮಾಡುತ್ತಿದೆ ಎಂಬುದು ಈ ಮೂಲಕ ಗೊತ್ತಾಗುತ್ತಿದೆ' ಎಂದು ಹೇಳಿದ್ದರು.
ಡಿಕೆಶಿ ಮನೆ ಮೇಲೆ ಐಟಿ ದಾಳಿ: ಸಿಎಂ ಸಿದ್ದರಾಮಯ್ಯ ಗಂಭೀರ ಹೇಳಿಕೆ
ವಿವಿಧ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇದು ಸಿದ್ದರಾಮಯ್ಯ ಅವರ ರಾಜಕೀಯ ಡೊಂಬರಾಟದ ಭಾಗ. ರಾಜಕೀಯ ಗೊಂದಲಗಳನ್ನು ಸೃಷ್ಟಿ ಮಾಡಲು ಈ ಹೇಳಿಕೆ ನೀಡಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ
'ಮೋದಿ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ತಮಗೆ ಆಗದವರ ವಿರುದ್ಧ ದಾಳಿ ನಡೆಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಮನೆಗೆ ಬಂದ ಅಧಿಕಾರಿಗಳೇ ಬಿಜೆಪಿ ಸೇರುವಂತೆ ಅವರಿಗೆ ಒತ್ತಡ ಹಾಕಿದ್ದರು' ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು.
ಬಿಜೆಪಿ ಸೇರುವ ವಿಚಾರ ಸುಳ್ಳು
ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸೇರುವ ಯಾವುದೇ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿಗಳ ರಾಜಕೀಯ ದೊಂಬರಾಟದ ಭಾಗವಾಗಿ ಗೊಂದಲ ಸೃಷ್ಟಿಸಲು ಈ ಹೇಳಿಕೆ ನೀಡಿದ್ದಾರೆ' ಎಂದರು.
ಅಂತಹ ಅಧೋಗತಿ ಬಂದಿಲ್ಲ
ಮಂಗಳೂರಿನಲ್ಲಿ ಕೋರ್ ಕಮಿಟಿ ಸಭೆಗೂ ಮೊದಲು ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು, 'ಬೆದರಿಕೆಯೊಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳುವಂತಹ ಅಧೋಗತಿ ಬಿಜೆಪಿಗೆ ಬಂದಿಲ್ಲ. ದೇಶದ ತುಂಬಾ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಬಿಜೆಪಿಗೆ ಸೇರುತ್ತಿದ್ದಾರೆ' ಎಂದರು.
ಹಾಸ್ಯಾಸ್ಪದ ಸಂಗತಿ
'ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸೇರಲು ಐಟಿ ಅಧಿಕಾರಿಗಳು ಹೇಳಿದ್ದಾರೆ ಎಂಬುದು ಹಾಸ್ಯಾಸ್ಪದ ಸಂಗತಿ. ಮುಖ್ಯಮಂತ್ರಿಗಳು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಅಷ್ಟು ದುರ್ಬಲರು ಎಂದು ಅನ್ನಿಸುವುದಿಲ್ಲ. ಇತಹ ಹೇಳಿಕೆಗಳು ರಾಜಕೀಯ ಗಿಮಿಕ್ ಎಂದು' ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.