ಕೆಪಿಸಿಸಿ ಕಚೇರಿಯಲ್ಲಿ 8 ಬಗೆಯ ಹೋಮ; ಡಿಕೆಶಿ ಭಾಗಿ
ಬೆಂಗಳೂರು, ಜೂನ್ 14 : ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮುಂಜಾನೆಯಿಂದ ವಿವಿಧ ಪೂಜೆ, ಹೋಮ ನಡೆಯುತ್ತಿದೆ. ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬೆಳಗ್ಗೆ 5 ಗಂಟೆಯಿಂದಲೇ ಹೋಮದಲ್ಲಿ ಪಾಲ್ಗೊಂಡಿದ್ದಾರೆ.
Recommended Video
ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಪಿಸಿಸಿಯ ನೂತನ ಕಚೇರಿ ಆಡಿಟೋರಿಯಂನಲ್ಲಿ ಹೋಮ ನಡೆಯುತ್ತಿದೆ. ಒಟ್ಟು 8 ಬಗೆಯ ಹೋಮ ನಡೆಯಲಿದ್ದು, ಅರ್ಚಕ ಮಹಾಂತೇಶ್ ಭಟ್ ನೇತೃತ್ವದಲ್ಲಿ ಹೋಮಗಳು ಆರಂಭವಾಗಿವೆ.
ವಾಸ್ತು ಹೋಮ, ಗಣಪತಿ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಅಷ್ಟ ಲಕ್ಷ್ಮೀ ಹೋಮ ಸೇರಿದಂತೆ ಒಟ್ಟು 8 ಬಗೆಯ ಹೋಮಗಳು ನೂತನ ಕಚೇರಿಯಲ್ಲಿ ನಡೆಯಲಿದೆ. ಈ ಪೂಜೆಗಳ ಬಳಿಕ ಅರುಣಾಚಲೇಶ್ವರನ ದರ್ಶನಕ್ಕಾಗಿ ಡಿ. ಕೆ. ಶಿವಕುಮಾರ್ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ನೂತನ ಆಡಿಟೋರಿಯಂ ಉದ್ಘಾಟನೆ ಮತ್ತು ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಹಿನ್ನಲೆಯಲ್ಲಿ ವಿವಿಧ ಪೂಜೆಗಳನ್ನು ನಡೆಸಲಾಗುತ್ತಿದೆ. ಮುಂಜಾನೆ 5 ಗಂಟೆಯಿಂದ ಡಿ. ಕೆ. ಶಿವಕುಮಾರ್ ಹೋಮದಲ್ಲಿ ಪಾಲ್ಗೊಂಡಿದ್ದಾರೆ.

ಎಲ್ಲರ ಒಳಿತಿಗಾಗಿ ಹೋಮ
ಮಾಧ್ಯಮಗಳ ಜೊತೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಎಲ್ಲಾ ವಿಘ್ನಗಳು ನಿವಾರಣೆಯಾಗಲಿ ಎಂದು ಶುಭ ಮುಹೂರ್ತದಲ್ಲಿ ಪೂಜೆ ಆರಂಭಿಸಿದ್ದೇವೆ. ಎಲ್ಲರ ಒಳಿತಿಗಾಗಿ ನಡೆಯುತ್ತಿರುವ ಹೋಮವಿದು. ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೇವೆ" ಎಂದರು.

ದಿನಾಂಕ ನಿಗದಿ ಮಾಡುತ್ತೇವೆ
"ಪದಗ್ರಹಣ ಕಾರ್ಯಕ್ರಮಕ್ಕೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡುತ್ತೇವೆ. ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಮಾಡುವೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು. ಜುಲೈ 2ರಂದು ಪದಗ್ರಹಣ ಸಮಾರಂಭ ನಡೆಯಲಿದೆ ಎಂಬ ಸುದ್ದಿಗಳು ಹಬ್ಬಿವೆ.

ಕೆಪಿಸಿಸಿ ಹೊಸ ಕಚೇರಿ
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಕೇಂದ್ರ ಕಚೇರಿ ಪಕ್ಕದಲ್ಲಿಯೇ ಹೊಸ ಕಚೇರಿ ನಿರ್ಮಾಣವಾಗುತ್ತಿದೆ. 2014ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಎರಡು ವರ್ಷಗಳಿಂದ ಕಟ್ಟಡದ ಕಾಮವಾರಿ ನಿಂತು ಹೋಗಿತ್ತು. ಈಗ ಕಚೇರಿಯ ಆಡಿಟೋರಿಯಂ ಉದ್ಘಾಟನೆಗೆ ಸಿದ್ದವಾಗಿದೆ. ಕಚೇರಿಯೂ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಆಡಿಟೋರಿಯಂ ಸಮಸ್ಯೆ
ಕ್ವೀನ್ಸ್ ರಸ್ತೆ, ರೇಸ್ ಕೋರ್ಸ್ ರಸ್ತೆಯಲ್ಲಿ ಕೆಪಿಸಿಸಿ ಎರಡು ಕಚೇರಿಗಳನ್ನು ಹೊಂದಿದೆ. ಆದರೆ, ದೊಡ್ಡ ಆಡಿಟೋರಿಯಂ ಇಲ್ಲ. ಆದ್ದರಿಂದ, 12 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ಕ್ವೀನ್ಸ್ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications