ಆಪರೇಷನ್ ಹಸ್ತ: ನವೆಂಬರ್ 15ರಂದು ಮುಹೂರ್ತ ಎಂದ ಡಿಕೆಶಿ
ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶೀಘ್ರದಲ್ಲೇ ಶುರುವಾಗುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪರೇಷನ್ ಹಸ್ತದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು, ನವೆಂಬರ್ 15ರಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಹಾಸನದಲ್ಲಿ ಹಾಸನಾಂಭ ದೇವಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ನವೆಂಬರ್ 15ರಂದು ಕಾಂಗ್ರೆಸ್ಗೆ ಹಲವು ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಅಪಾಯಿಂಟ್ಮೆಂಟ್ ಕಾರ್ಡ್ ನನ್ನ ಬಳಿ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ವಾರದ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ಗೆ ಹಲವರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದರು, "ಸಿದ್ದರಾಮಯ್ಯ ಹೇಳಿದ್ದು ನಿಜ, ನಾನು ಅದನ್ನು ನಿರಾಕರಿಸುವುದಿಲ್ಲ, ನ. 15ರಂದು ಹಲವರು ಕಾಂಗ್ರೆಸ್ಗೆ ಬರಲಿದ್ದಾರೆ" ಎಂದು ಹೇಳಿದರು.

ಆದರೆ ಯಾರೆಲ್ಲಾ ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ತಿಳಿಸಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ. ನವೆಂಬರ್ 14ರ ಸಂಜೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ಹೇಳಿಕೆ ಸುಳ್ಳು ಎಂದ ಡಿಕೆಶಿ
ಹೆಚ್ಡಿ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರ ಜೊತೆ ಹಾಸನಾಂಬ ದೇವಿ ದರ್ಶನ ಪಡೆದರು, 19 ಜೆಡಿಎಸ್ ಶಾಸಕರ ಪೈಕಿ 18 ಶಾಸಕರು ಹಾಜರಿದ್ದರು. ಜೆಡಿಎಸ್ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸಿದ್ದು, ಪಕ್ಷಾಂತರ ತಡೆಯಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.
ಹಲವು ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ ನೀಡುವ ಸಾಧ್ಯತೆಯಿದೆ ಮತ್ತು ಹಲವು ಶಾಸಕರು ಮಹಾರಾಷ್ಟ್ರ ಮತ್ತು ಇತರ ಸ್ಥಳಗಳಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ಬಿಜೆಪಿ ಸದಸ್ಯರ ಹೇಳಿಕೆಗಳನ್ನು ಡಿಕೆಶಿ ನಿರಾಕರಿಸಿದರು.
ಬಿಜೆಪಿಯೇ ಕೆಟ್ಟ ಪರಿಸ್ಥಿತಿಯಲ್ಲಿದೆ, ಇದುವರೆಗೂ ಅವರಿಗೆ ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಲೇ ಸಾಧ್ಯವಾಗಿಲ್ಲ ಎಂದರು. ಕೆಲವು ಮಾಜಿ ಶಾಸಕರು ಗಮನ ಸೆಳೆಯಲು ಗಲಾಟೆ ಮಾಡುತ್ತಿದ್ದಾರೆ, ಯಾವೊಬ್ಬ ಕಾಂಗ್ರೆಸ್ ಶಾಸಕ ಕೂಡ ಕಾಂಗ್ರೆಸ್ ತೊರೆಯುವುದಿಲ್ಲ, ಅವರನ್ನು ಸೆಳೆಯುವ ಶಕ್ತಿ ಬಿಜೆಪಿಗೆ ಇಲ್ಲ ಎಂದರು. ಕರ್ನಾಟಕ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದರು.
ನವೆಂಬರ್ 15ರಂದು ನೋಡಿಕೊಳ್ಳೊಣ ಎಂದ ಹೆಚ್ಡಿಕೆ
ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ, 'ನಮ್ಮ ಶಾಸಕರು ಕಾಂಗ್ರೆಸ್ಗೆ ಹೋಗುತ್ತಾರೋ ಅಥವಾ ಕಾಂಗ್ರೆಸ್ನ ಒಂದು ಭಾಗ ತೊರೆಯುತ್ತಾರೋ ಎಂಬುದನ್ನು ನವೆಂಬರ್ 15 ರಂದು ನೋಡೋಣ, ಗುರ್ ಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್ ಅವರು ದೇವಸ್ಥಾನದ ಭೇಟಿಗೆ ಗೈರುಹಾಜರಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು "ದೊಡ್ಡ ಸಮಸ್ಯೆ" ಅಲ್ಲ ಎಂದು ಹೇಳಿದರು.
ಶರಣಗೌಡ ಕಂದಕೂರ್ ನಮ್ಮ ಮನೆಯ ಮಗನಿದ್ದಂತೆ. ಅವರು ಸ್ವಲ್ಪ ಗೊಂದಲದಲ್ಲಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಬೆಂಬಲ ನೀಡದ ಈ ಸರ್ಕಾರದ ದ್ವೇಷದ ರಾಜಕಾರಣದ ಹೊರತಾಗಿಯೂ ನಮ್ಮ ಯಾವೊಬ್ಬ ಶಾಸಕರೂ ಕೈ ಬಿಡುವುದಿಲ್ಲ ಎಂದರು.












Click it and Unblock the Notifications