ಡಿಕೆ ರವಿ ಪ್ರಕರಣ : ಸೋಮವಾರ ಬೆಳಗ್ಗೆ ಮಹತ್ವದ ಸಭೆ
ಬೆಂಗಳೂರು, ಮಾ. 22 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣದಲ್ಲಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸೋಮವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಸಭೆ ನಡೆಯಲಿದೆ. ಡಿಕೆ ರವಿ ಪ್ರಕರಣದ ಮಧ್ಯಂತರ ವರದಿ ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. [ಡಿಕೆ ರವಿ ಸಾವು : ಸಿದ್ದರಾಮಯ್ಯಗೆ ಬಿಜೆಪಿ ಕೊನೆಯ ಗಡುವು]

ದಕ್ಷ ಅಧಿಕಾರಿ ಡಿಕೆ ರವಿ ಸಾವಿನ ತನಿಖೆಯನ್ನು ಸಿಬಿಐಗೆ ನೀಡುವ ಬಗ್ಗೆ ಸಂಪುಟ ದರ್ಜೆ, ರಾಜ್ಯಸ್ಥಾನಮಾನದ ಸಚಿವರುಗಳ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಆರಂಭವಾಗುವ ಅಧಿವೇಶನದಲ್ಲಿ ತನಿಖೆಯನ್ನು ಸಿಬಿಐಗೆ ನೀಡುವ ಕುರಿತು ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ. [ಯಾರನ್ನೂ ರಕ್ಷಿಸುವುದಿಲ್ಲ : ಕಡೆಗೂ ಬಾಯಿಬಿಟ್ಟ ಸಿದ್ದು]
ಪ್ರತಿಪಕ್ಷಗಳ ಗಡುವು : ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮತ್ತು ಡಿಕೆ ರವಿ ಕುಟುಂಬದವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸೋಮವಾರದ ಗಡುವು ನೀಡಿದ್ದಾರೆ. ಅತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂಬುದು ಸುದ್ದಿ. ಆದ್ದರಿಂದ ಸೋಮವಾರ ನಡೆಯುವ ಸಭೆ ಮಹತ್ವದ್ದಾಗಿದೆ.
ಮಧ್ಯಂತರ ವರದಿ ಬರಲಿದೆ : ಡಿಕೆ ರವಿ ಅವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿ ಸೋಮವಾರಕ್ಕೆ ಒಂದು ವಾರವಾಗಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಸರ್ಕಾರಕ್ಕೆ ನಾಳೆ ಮಧ್ಯಂತರ ವರದಿ ಸಲ್ಲಿಕೆ ಮಾಡಲಿದ್ದಾರೆ. ಸರ್ಕಾರ ವರದಿ ನೋಡಿದ ಬಳಿಕ ಸಿಬಿಐ ತನಿಖೆ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ಎಚ್ಚರಿಕೆ : ಸೋಮವಾರ ಡಿಕೆ ರವಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ಸದನದವೊಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications