ದಸರಾ ದೀಪಾಲಂಕಾರಕ್ಕೆ ಎಲ್ಇಡಿ ಬಲ್ಪ್
ಮೈಸೂರು, ಅ.3 : ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಚೆಸ್ಕಾಂ ಸಜ್ಜಾಗಿದೆ. ಈ ಬಾರಿಯ ದಸರಾದಲ್ಲಿ ಎಲ್ಇಡಿ ಬಲ್ಪ್ ಗಳನ್ನು ನಗರದಲ್ಲಿ ಅಳವಡಿಸಿ ವಿದ್ಯುತ್ ಉಳಿತಾಯ ಮಾಡಲು ನಿಗಮ ಯೋಜನೆ ರೂಪಿಸಿದೆ.
ನಗರದ ದೀಪಾಲಂಕಾರದ ಕುರಿತು ಗುರುವಾರ ಪರಿಶೀಲನೆ ನಡೆಸಿದ ಚೆಸ್ಕಾಂ ವ್ಯವಸ್ಥಾಪಕ ಇಬ್ರಾಹಿಂ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ದಸರಾ ಸಂದರ್ಭದಲ್ಲಿ 10 ದಿನಗಳ ಕಾಲವೂ ನಗರದ ಪ್ರಮುಖ ರಸ್ತೆಗಳು, ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ.
ಅಲಂಕಾರಕ್ಕಾಗಿ ಈ ಬಾರಿ ಎಲ್ಇಡಿ ಬಲ್ಪ್ ಗಳನ್ನು ಅಳವಡಿಸಲಾಗುತ್ತಿದೆ. ಕಳೆದ ಬಾರಿ ಅಲಂಕಾರಗಳಿಗೆ 1.70 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ಬಾರಿ ಎಲ್ಇಡಿ ಬಲ್ಪ್ ಆಳವಡಿಸುವುದರಿಂದ ಕೇವಲ 40 ಸಾವಿರ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ ಎಂದರು.
ನಗರದ 40 ವೃತ್ತಗಳು ಹಾಗೂ 30 ಕಿ.ಮೀ ರಸ್ತೆಗಳಲ್ಲಿ ದೀಪಾಲಂಕಾರವನ್ನು ಮಾಡಲಾಗಿದೆ. ಒಟ್ಟು 45 ಲಕ್ಷ ರೂ. ಈ ದೀಪಾಲಂಕಾರಕ್ಕಾಗಿ ವೆಚ್ಚಗಲಿದೆ. ಸಾರ್ವಜನಿಕರಿಗೆ ವಿದ್ಯುತ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಎಲ್ಇಡಿ ಬಳಕೆ ಕುರಿತು ಅರಿವು ಮೂಡಿಸಲು ಮೇಳದಲ್ಲಿ ಮಳಿಗೆಗಳನ್ನು ತೆರೆಯಲಾಗುವುದು ಎಂದು ಹೇಳಿದರು. ಕರ್ನಾಟಕದ ಇತರ ಜಿಲ್ಲಾಸುದ್ದಿಗಳು

ದೀಪಾಲಂಕಾರಕ್ಕೆ ಎಲ್ಇಡಿ ಬಲ್ಪ್
ಮೈಸೂರಿನ 40 ವೃತ್ತಗಳು ಹಾಗೂ 30 ಕಿ.ಮೀ ರಸ್ತೆಗಳಲ್ಲಿ ದೀಪಾಲಂಕಾರವನ್ನು ಮಾಡಲಾಗುತ್ತದೆ. ಇದಕ್ಕಾಗಿ ಎಲ್ಇಡಿ ಬಲ್ಪ್ ಗಳನ್ನು ಅಳವಡಿಸಲಾಗುತ್ತದೆ ಎಂದು ಚೆಸ್ಕಾಂ ವ್ಯವಸ್ಥಾಪಕ ಇಬ್ರಾಹಿಂ ಹೇಳಿದ್ದಾರೆ. ಒಟ್ಟು 45 ಲಕ್ಷ ರೂ. ವೆಚ್ಚದಲ್ಲಿ ನಗರದಲ್ಲಿ ದೀಪಾಲಂಕಾರ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ.

ರಸ್ತೆ ಬದಿ ತಾಯಿ-ಮಗಳ ಸುಟ್ಟ ಶವ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿಎಸ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಬ್ಬನ ಕುಪ್ಪೆ ಗ್ರಾಮದ ರಸ್ತೆ ಬದಿ ಗುರುವಾರ ಬೆಳಗ್ಗೆ ಸುಟ್ಟ ಸ್ಥಿತಿಯಲ್ಲಿದ್ದ ತಾಯಿ ಮಗು ಶವ ಪತ್ತೆಯಾಗಿದೆ. ಸುಮಾರು 22 ವರ್ಷದ ಮಹಿಳೆ ಮತ್ತು 1 ವರ್ಷದ ಮಗುವಿನ ಶವ ಎಂದು ಪೊಲೀಸರು ಹೇಳಿದ್ದಾರೆ. ಶವಗಳು ಅರೆಸುಟ್ಟ ಸ್ಥಿತಿಯಲ್ಲಿದ್ದು, ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಎಸ್ಪಿ ಲಕ್ಷ್ಮಣ್, ಡಿವೈಎಸ್ಪಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈದ್ಗಾ ಮೈದಾನ ವಿವಾದಕ್ಕೆ ತೆರೆ
ರಾಮನಗರದ ಜಿಲ್ಲೆ ಚನ್ನಪಟ್ಟಣದಲ್ಲಿ ವಿವಾದಕ್ಕೆ ಕಾರಣವಾಗಿರುವ ಮಂಗಳವಾರಪೇಟೆ ಸ್ಪನ್ ಸ್ಕಿಲ್ ಗಿರಣಿ ಬಳಿ ಇರುವ ಈದ್ಗಾ ಮೈದಾನದ ಕುರಿತ ದಾಖಲೆಗಳನ್ನು ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೌರಾಡಳಿತ ಹಾಗೂ ವಕ್ಫ್ ಖಾತೆ ಸಚಿವ ಖಮರುಲ್ಲಾ ಇಸ್ಲಾಂ ಹೇಳಿದ್ದಾರೆ. ಗುರುವಾರ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಸಚಿವರಿಗೆ ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನ ಒತ್ತುವರಿಯಾಗುತ್ತಿದೆ ಎಂದು ದೂರು ಸಲ್ಲಿಸಿದರು.

ಅನಂತಮೂರ್ತಿ ವಿರುದ್ಧ ಅಂಚೆ ಕಾರ್ಡ್ ಚಳವಳಿ
ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ವಿರುದ್ಧ ಅಂಚೆಕಾರ್ಡ್ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಚಿಕ್ಕಮಗಳೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ಶ್ರೀಧರ್ ಹೇಳಿದ್ದಾರೆ. ಸಮಾಜದ ಎಲ್ಲ ವರ್ಗಗಳು ಸೌಹಾರ್ದತೆಯಿಂದ ಬಾಳಬೇಕೆಂಬುದು ಸಂವಿಧಾನದ ಆಶಯ. ಆದರೆ, ಅನಂತಮೂರ್ತಿಯವರು ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದರ ಮೂಲಕ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದಾರೆ. (ಅನಂತಮೂರ್ತಿ ಗೋಮಾಂಸ ಹೇಳಿಕೆಗೆ ಬ್ರಾಹ್ಮಣರ ಖಂಡನೆ)

ಸಚಿವ ಜಯಚಂದ್ರಗೆ ಘೇರಾವ್
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಗಲಭೆ ನಡೆಯುತ್ತಿದ್ದರೂ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಶಿರಾ ಪಟ್ಟಣದ ಮಹಿಳೆಯರು ಗುರುವಾರ ಘೇರಾವ್ ಹಾಕಿದರು. ಒಂದು ವರ್ಗದ ಸ್ಥಳಕ್ಕೆ ಮಾತ್ರ ಭೇಟಿ ನೀಡುತ್ತಿದ್ದೀರಿ. ನಾವೆಲ್ಲರೂ ನಿಮಗೆ ವೋಟು ಹಾಕಿದ್ದೇವೆ. ನಮ್ಮ ಬಡಾವಣೆಗೆ ಏಕೆ ಬಂದಿಲ್ಲ ಎಂದು ಸಚಿವರನ್ನು ಮಹಿಳೆಯರು ಪ್ರಶ್ನಿಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಸಚಿವರನ್ನು ವಾಪಸ್ ಕಳುಹಿಸಿದರು. ಕೆಲವು ಮಹಿಳೆಯರು ಸಚಿವರತ್ತ ಕಲ್ಲು ತೂರಾಟವನ್ನು ನಡೆಸಿದರು.

ಗುಂಡ್ಲುಪೇಟೆಯಲ್ಲಿ ಗಣೇಶನ ಗಲಾಟೆ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಮಡು ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದ್ದು, ಘಟನೆಗೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬುಧವಾರ ರಾತ್ರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿತ್ತು. ರಾತ್ರಿ ಗ್ರಾಮಸ್ಥರು ಪಂಚಾಯಿತಿ ನಡೆಸಿದರೂ, ಕೆಲವು ಕಿಡಿಗೇಡಿಗಳು ಮನೆಗಳಿಗೆ ಕಲ್ಲುತೂರಿ, ವಾಹನಗಳನ್ನು ಜಖಂಗೊಳಿಸಿದ್ದರು.

ಉಪ್ಪಿನಂಗಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಪಿ
ಉಪ್ಪಿನಂಗಡಿ ಸಮೀಪದ ಬೆದ್ರೊಡಿ ಬಳಿ ಗುರುವಾರ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನೊಂದು ಲಾರಿಗೆ ಗ್ಯಾಸ್ ತುಂಬಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಅ.15ರಂದು ಮೊದಲ ಸಭೆ
ಕಾಂಗ್ರೆಸ್ ಸಮನ್ವಯ ಸಮಿತಿಯ ಮೊದಲ ಸಭೆ ಅ.15ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮತ್ತು ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications