ಬುಧವಾರದಿಂದ ಸಂಭಾಜಿ ಪಾಟೀಲ್ ಶವಯಾತ್ರೆ!
ಬೆಂಗಳೂರು, ಡಿ.3 : ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವರ "ನಾಲ್ಕು ಜನ ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು" ಎಂಬ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಬೆಂಗಳೂರಿನಿಂದ ಬೆಳಗಾವಿವರೆಗೆ ಸಂಭಾಜಿ ಪಾಟೀಲ್ ಶವಯಾತ್ರೆ ಮಾಡಲು ನಿರ್ಧರಿಸಿವೆ.ಬುಧವಾರ ಬೆಂಗಳೂರಿನಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ.
ಬೆಂಗಳೂರಿಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಒಕ್ಕೂಟದವರು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಶಾಸಕ ಸಂಭಾಜಿ ಪಾಟೀಲ್ ಅಣಕು ಶವಯಾತ್ರೆ ಹಮ್ಮಿಕೊಂಡಿರುವ ಕುರಿತು ಮಾಹಿತಿ ನೀಡಿದರು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಅಧ್ಯಕ್ಷ ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕರ್ನಾಟಕದ ಶವಯಾತ್ರೆ ಮಾಡುತ್ತೇನೆ : ಸಂಭಾಜಿ)
ಶವಯಾತ್ರೆ ಕುರಿತು ಮಾಹಿತಿ ನೀಡಿದ ವಾಟಾಳ್ ಜಾಗರಾಜ್, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಯಾವ ಶಾಸಕರೂ ಎಂಇಎಸ್ ಶಾಸಕರ ಹೇಳಿಕೆಯನ್ನು ಖಂಡಿಸಿಲ್ಲ. ಸರ್ಕಾರ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಸರ್ಕಾರದ ಶವಯಾತ್ರೆ ಮಾಡುವುದಾಗಿ ಹೇಳಿದ ಪಾಟೀಲ್ ಶವಯಾತ್ರೆಯನ್ನು ನಾವೇ ಮಾಡುತ್ತಿದ್ದೇವೆ ಎಂದರು. (ಎಂಇಎಸ್ ಶವಯಾತ್ರೆ ವಾಟಾಳ್ ಘೋಷಣೆ)
ಬುಧವಾರ ಬೆಂಗಳೂರಿನಿಂದ ಸಂಭಾಜಿ ಪಾಟೀಲ್ ಶವಯಾತ್ರ ಆರಂಭವಾಗಲಿದ್ದು, ತುಮಕೂರು, ಹೊಸಪೇಟೆ, ಹುಬ್ಬಳಿ, ಧಾರವಾಡ ಮೂಲಕ ಬೆಳಗಾವಿ ತಲುಪಲಿದೆ. ಕನ್ನಡಿಗರ ಶಕ್ತಿ ಏನೆಂದು ಬೆಳಗಾವಿಯ ನೆಲದಲ್ಲೇ ಸಂಭಾಜಿ ಪಾಟೀಲ್ ಅವರಿಗೆ ತೋರಿಸುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಸಂಭಾಜಿ ಪಾಟೀಲ್ ಶವಯಾತ್ರೆ
ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವರ "ನಾಲ್ಕು ಜನ ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು" ಎಂಬ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಬೆಂಗಳೂರಿನಿಂದ ಬೆಳಗಾವಿವರೆಗೆ ಸಂಭಾಜಿ ಪಾಟೀಲ್ ಶವಯಾತ್ರೆ ನಡೆಸುತ್ತಿವೆ. ಬುಧವಾರ ಬೆಂಗಳೂರಿನಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷ, ಡಾ.ರಾಜ್ ಅಭಿಮಾನಿಗಳ ಸಂಘ, ಕನ್ನಡ ಸೇನೆ ಈ ಶವಯಾತ್ರೆ ಹಮ್ಮಿಕೊಂಡಿವೆ.

ಮರು ಮರಣೋತ್ತರ ಪರೀಕ್ಷೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಗು ಶಾರಿಕಾಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮರು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಹೂತಿದ್ದ ಮಗುವಿನ ಶವ ಹೊರತೆಗೆದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ತಾಲೂಕಿನ ನಾಲ್ಕೂರು ಗ್ರಾಮದ ಶಾರಿಕಾ ಎಂಬ ಮಗು ಆ.11 ರಂದು ಕಾಣೆಯಾಗಿದ್ದು, ನಂತರ ಆ.23ರಂದು ರುಂಡ, ಎಡಗೈ ಇಲ್ಲದೆ ಶವವಾಗಿ ಪತ್ತೆಯಾಗಿತ್ತು. ಮಗು ಮಳೆನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದೆ ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಮಗುವನ್ನು ನಿಧಿಗಾಗಿ ಬಲಿ ಕೊಡಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದೆ. ಈ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ಮೃತ ರೈತನ ಕುಟುಂಬಕ್ಕೆ ಪರಿಹಾರ
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ 10 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದ್ದಾರೆ. ರಾಯಭಾಗ ತಾಲೂಕಿನಲ್ಲಿರುವ ಕಂಕಣವಾಡಿಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಅವರು, ಪರಿಹಾರದ ಚೆಕ್ ವಿತರಣೆ ಮಾಡಿದರು.

ವಹಿವಾಟಿಗೆ ಸಮಯ ನಿಗದಿ
ರೈತರು ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಜನವರಿಯಿಂದ ಚಿಕ್ಕಮಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟಿಗೆ ಸಮಯ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೆ. ನಿಂಗೇಗೌಡ ಹೇಳಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಎಪಿಎಂಸಿಯಲ್ಲಿ ವಹಿವಾಟು ನಡೆಸಲು ಸಮಯ ನಿಗದಿಪಡಿಸಲಾಗುವುದು. ಪ್ರತಿ ಸೋಮವಾರದಂದು ಮಾರುಕಟ್ಟೆಗೆ ರಜೆ ನೀಡಿ ಅಂದು ಆವರಣವನ್ನು ಸ್ವಚ್ಛತೆಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಚಿವೆ ಉಮಾಶ್ರೀ ವಿರುದ್ಧ ನಿರ್ಣಯ
ಬೀದರ್ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ವಿರುದ್ಧ ಜಿಲ್ಲಾ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉಸ್ತುವಾರಿ ಸಚಿವರ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಂಡಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಖಾಜಿ ಅರ್ಷದ ಅಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಈ ಕುರಿತಂತೆ ಹಿರಿಯ ಮುಖಂಡರು ಚರ್ಚಿಸಿ ಉಮಾಶ್ರೀ ಅವರ ನಿರ್ಲಕ್ಷ್ಯ ಧೋರಣೆಗಳನ್ನು ಖಂಡಿಸಿ ಹೈಕಮಾಂಡ್ಗೆ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಜಿಲ್ಲೆಯ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಜಿಲ್ಲಾ ಕಾಂಗ್ರೆಸ್ ಆರೋಪ.

ಸ್ವಾತಂತ್ರ ಹೋರಾಟಗಾರ ನಿಧನ
ಹಿರಿಯ ಸ್ವಾತಂತ್ರ ಹೋರಾಟಗಾರ ಗುಡಿಸಿವಾರಿಪಲ್ಲಿ ರಾಮರೆಡ್ಡಿ(85) ಸೋಮವಾರ ಶ್ರೀನಿವಾಸಪುರದಲ್ಲಿ ಮೃತಪಟ್ಟಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದ ಅವರು, ಹೋಬಳಿಯಲ್ಲಿ ಪ್ರಮುಖ ಹೋರಾಟಗಾರರಾಗಿದ್ದರು. ಪ್ರಜಾಪ್ರಭುತ್ವದ ರಚನೆಗಾಗಿ ಮೈಸೂರು ಚಳುವಳಿಯಲ್ಲೂ ತೊಡಗಿಸಿಕೊಂಡಿದ್ದ ಅವರು ಕೆ.ಸಿ.ರೆಡ್ಡಿ ಸೇರಿದಂತೆ ಹಲವಾರು ಮುಖಂಡರ ಜೊತೆ ಜೈಲು ವಾಸ ಅನುಭವಿಸಿದ್ದರು. ತಹಶಿಲ್ದಾರ್ ಮುಂತಾದವರು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.












Click it and Unblock the Notifications