ಬೀದರ್ ಜಿಲ್ಲೆಗೆ ಜನವರಿಯಲ್ಲಿ ಎಫ್ಎಂ : ಧರಂಸಿಂಗ್
ಬೀದರ್, ನ. 28 : ಬೀದರ್ ಜಿಲ್ಲೆಯ ಜನರಿಗೆ ಸಂಸದ ಧರಂಸಿಂಗ್ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆ. ಹೌದು ಜನವರಿ ತಿಂಗಳಿನಲ್ಲಿ ಬೀದರ್ ಜಿಲ್ಲೆಯಲ್ಲಿ ಎಫ್ಎಂ ಕೇಂದ್ರ ಆರಂಭವಾಗಲಿಗೆ ಎಂದು ಸಂಸದ ಧರಂಸಿಂಗ್ ಹೇಳಿದ್ದಾರೆ.
ಗುರುವಾರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಧರಂಸಿಂಗ್, ಬೀದರ್ ಜಿಲ್ಲೆಗೆ ಎಫ್ಎಂ ಕೇಂದ್ರಬೇಕೆಂಬುದು ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇನೆ ಎಂದರು.
ಕೆಲವು ದಿನಗಳ ಹಿಂದೆ ಕೇಂದ್ರ ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಅವರನ್ನು ಭೇಟಿಯಾದಾಗ ಬೀದರ್ ಜಿಲ್ಲೆಯಲ್ಲಿ ಎಫ್ಎಂ ಕೇಂದ್ರ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದೇನೆ. ಜನವರಿಯಲ್ಲಿ ಜಿಲ್ಲೆಯಲ್ಲಿ ಎಫ್ಎಂ ಕೇಂದ್ರ ಆರಂಭಿಸಲಾಗುವುದು ಎಂದು ಧರಂಸಿಂಗ್ ತಿಳಿಸಿದರು.
ಬೀದರ್ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಿದೆ. ಜಿಲ್ಲೆಯ ಜನರ ಆಶಯದಂತೆ ಕಲಂ 371(ಜೆ) ಜಾರಿಗೆ ಶ್ರಮಿಸಿ ಯಶಸ್ವಿಯಾಗಿದ್ದೇವೆ. ಜನರ ನಿರೀಕ್ಷೆ ಹುಸಿ ಮಾಡದೇ ಬೀದರ್- ಬೆಂಗಳೂರು ರೈಲು ಆರಂಭಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಧರಂಸಿಂಗ್ ಹೇಳಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಬೀದರ್ ಜಿಲ್ಲೆಗೆ ಹೊಸವರ್ಷಕ್ಕೆ ಎಫ್ಎಂ
ಬೀದರ್ ಜಿಲ್ಲೆಯ ಜನರಿಗೆ ಸಂಸದ ಧರಂಸಿಂಗ್ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಬೀದರ್ ಜಿಲ್ಲೆಯಲ್ಲಿ ಎಫ್ಎಂ ಕೇಂದ್ರ ಆರಂಭವಾಗಲಿಗೆ ಎಂದು ಸಂಸದ ಧರಂಸಿಂಗ್ ಹೇಳಿದ್ದಾರೆ. ಬೀದರ್ ಜಿಲ್ಲೆಗೆ ಎಫ್ಎಂ ಕೇಂದ್ರಬೇಕೆಂಬುದು ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಕುರಿತು ಕೇಂದ್ರ ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಅವರನ್ನು ಭೇಟಿಯಾದಾಗ ಚರ್ಚೆ ನಡೆಸಿದ್ದು, ಜನವರಿಯಲ್ಲಿ ಎಫ್ಎಂ ಕೇಂದ್ರ ಆರಂಭಿಸಲಾಗುವುದು ಎಂದರು.

ಪ್ರತಿಭಾ ಕಾರಂಜಿಯಲ್ಲಿ ತುಳುಭಾಷೆಯಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ತುಳು ಭಾಷೆಗೆ ನಿರ್ಭಂದ ಹೇರಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಲ್ಲಿ ತುಳು ಗೀತೆಗಳನ್ನು ಹಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮದಡಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಇಲಾಖೆ ಪಟ್ಟಿ ಮಾಡಿರುವ 29 ಸ್ಪರ್ಧೆಗಳಲ್ಲಿ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ಜನಪದ ಗೀತೆ ಹಾಗೂ ಜನಪದ ನೃತ್ಯಗಳಿಗೆ ಕನ್ನಡ ಭಾಷೆಯನ್ನು ಮಾತ್ರ ಆಯ್ದುಕೊಳ್ಳಲು ಸೂಚನೆ ನೀಡಿದೆ.

ಮೈಸೂರಿನಲ್ಲಿ ರಫ್ತು ಕೇಂದ್ರ
ಮೈಸೂರು ನಗರದಲ್ಲಿ ರಫ್ತು ಕೇಂದ್ರ ಸ್ಥಾಪನೆ ಬಗ್ಗೆ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅದನ್ನು ಆದಷ್ಟು ಬೇಗ ಸ್ಥಾಪಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ. ಗುರುವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಅದರ ಒಂದು ಭಾಗವಾಗಿ ರಾಜ್ಯ ಸರ್ಕಾರ ರಫ್ತು ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದೆ. ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚಿಸಲು ಡಿ. 13 ರಂದು ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ.

ಹಂಪಿ ಉತ್ಸವದಲ್ಲಿ ಆಲ್ ಟೆರೈನ್ ಪ್ರದರ್ಶನ
ಜನವರಿಯಲ್ಲಿ ನಡೆಯಲಿರುವ ಹಂಪಿ ಉತ್ಸವದಲ್ಲಿ `ಆಲ್ ಟೆರೈನ್' ವಾಹನಗಳ ಚಾಲನಾ ಕೌಶಲ್ಯ ಹಾಗೂ ಸಾಹಸ ಪ್ರದರ್ಶನ ಏರ್ಪಡಿಸಲಾಗಿದೆ. ಗುಡ್ಡಗಾಡು ಪ್ರದೇಶ, ಕೆಸರಿನಿಂದ ಕೂಡಿದ ರಸ್ತೆಗಳಲ್ಲಿ ಮಾತ್ರ ಉತ್ತಮವಾಗಿ ಚಲಿಸುವುದು `ಆಲ್ ಟೆರೈನ್' ವಾಹನದ ವಿಶೇಷ. ಪೋಲಾರಿಸ್ ವರ್ಲ್ಡ್ ನಂ.1 ಎಂದು ಈ ವಾಹನಕ್ಕೆ ಹೆಸರಿಡಲಾಗಿದೆ. 90 ಸಿಸಿ, 400 ಸಿಸಿ ಹಾಗೂ 800 ಸಿಸಿ.ಯ 3 ವಾಹನಗಳನ್ನು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಬೆಂಗಳೂರಿನ ಅಡ್ವೆಂಚರ್ ಕ್ಲಬ್ ಸದಸ್ಯ ರಿತೇಶ್ ಶೆಟ್ಟಿ ಮತ್ತು ಜೆರ್ರಿ ಫರ್ನಾಂಡೀಸ್ ಅವರು ಸಾಹಸ ಪ್ರದರ್ಶನ ನೀಡಲಿದ್ದಾರೆ. ಬಳ್ಳಾರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ `ಆಲ್ ಟೆರೈನ್' ವಾಹನದ ಸಾಹಸ ಪ್ರದರ್ಶನ ದ ಪ್ರಯೋಗ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆಲ್ ಟೆರೈನ್ ಚಾಲನೆ ಮಾಡಿದರು.

ಕೈದಿಗೆ ಆಶ್ರಯ ನೀಡಿದವರು ಜೈಲಿಗೆ
ನ.1ರಂದು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ರೇಬಣ್ಣ ಮತ್ತು ಅಯ್ಯಪ್ಪ ಎಂಬ ಇಬ್ಬರು ಕೈದಿಗಳು ಪರಾರಿಯಾಗಿದ್ದರು. ಬುಧವಾರ ಸಂಜೆ ಬಿಜಾಪುರದ ಬಸನವ ಬಾಗೇವಾಡಿ ತಾಲೂಕಿನ ದಿಂಡಾವರ ಗ್ರಾಮದಲ್ಲಿ ಜೈಲಿನಿಂದ ಪರಾರಿಯಾಗಿದ್ದ ರೇಬಣ್ಣ ಮತ್ತು ಅವರಿಗೆ ಆಶ್ರಯ ನೀಡಿದ್ದ ಶಿವಪ್ಪ (35) ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಕೈದಿಗಾಗಿ ಹುಡುಕಾಟ ಮುಂದುವರೆದಿದೆ. (ಚಿತ್ರ ವರದಿ :ಜಿ.ಎಂ. ರೋಹಿಣಿ, ಬಳ್ಳಾರಿ)

8 ವರ್ಷದ ಮಗು ಜೀತಕ್ಕೆ
ಹಣದ ಆಸೆಗಾಗಿ 8 ವರ್ಷದ ಮಗಳನ್ನು ಪೋಷಕರು ಜೀತಕ್ಕೆ ಇಟ್ಟಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೀತಕ್ಕಿದ್ದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಜಾತ್ಯಾತೀತ ಸಮಾಜ ಟ್ರಸ್ಟ್ ಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಗೌಸಿಯಾ ನಗರದ ಅನೀಫ್ ಮತ್ತು ನಗೀನಬಾನು ದಂಪತಿ ಹನುಮಂತನಗರದ ಸುಮಾಯಾ ಎಂಬುವವರಿಂದ ಎಂಟು ಸಾವಿರ ಹಣ ಪಡೆದು ಮಗುವನ್ನು ಜೀತಕ್ಕೆ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಎನ್.ಆರ್.ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.











Click it and Unblock the Notifications