ಶುಕ್ರವಾರದಿಂದ ಧಾರವಾಡದಲ್ಲಿ ಶರಣ ಸಾಹಿತ್ಯ ಸಮ್ಮೇಳನ
ಧಾರವಾಡ, ಡಿ.26 : ಅಖಿಲ ಭಾರತ 11ನೇ ಶರಣ ಸಾಹಿತ್ಯ ಸಮ್ಮೇಳನ ಡಿ.27, 28 ಹಾಗೂ 29 ರಂದು ಧಾರವಾಡದ ಮುರುಘಾಮಠದ ಆವರಣದಲ್ಲಿ ನಡೆಯಲಿದೆ. ಮಾಜಿ ಡಿಜಿಪಿ, ಸಾಹಿತಿ ಡಾ.ಅಜಯಕುಮಾರ್ ಸಿಂಗ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.27ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಾಸಕ ವಿನಯ ಕುಲಕರ್ಣಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]
ಶುಕ್ರವಾರದಿಂದ ಶರಣ ಸಾಹಿತ್ಯ ಸಮ್ಮೇಳನ
ಮೂರು ದಿನಗಳ ಅಖಿಲ ಭಾರತ 11ನೇ ಶರಣ ಸಾಹಿತ್ಯ ಸಮ್ಮೇಳನ ಡಿ.27, 28 ಹಾಗೂ 29 ರಂದು ಧಾರವಾಡದ ಮುರುಘಾಮಠದ ಆವರಣದಲ್ಲಿ ನಡೆಯಲಿದೆ. ಮಾಜಿ ಡಿಜಿಪಿ, ಸಾಹಿತಿ ಡಾ.ಅಜಯಕುಮಾರ್ ಸಿಂಗ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.27ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಾಸಕ ವಿನಯ ಕುಲಕರ್ಣಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ.
ಇನಾಂ ವಿವಾದಕ್ಕೆ ಗುರುವಾರ ತೆರೆ
ಚಿಕ್ಕಮಗಳೂರು ಜಿಲ್ಲೆಯ ಕಳಸದ ಇನಾಂ ಭೂಮಿಯಲ್ಲಿರುವ 600 ಕುಟುಂಬಗಳ ಭವಿಷ್ಯ ಗುರುವಾರ ತೀರ್ಮಾನವಾಗಲಿದೆ. ಕಳಸ ಗ್ರಾಮದ ಕಳಸೇಶ್ವರ ದೇವಾಲಯದ ಇನಾಂ ಜಮೀನುಗಳ ವಿವಾದದ ಬಗ್ಗೆ ಚರ್ಚಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಕಂದಾಯ, ಅರಣ್ಯ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೆಪಿಎಸ್ ಸಿ ಕಚೇರಿ ಮುಂದೆ ಪ್ರತಿಭಟನೆ
ಪಂಚಾಯತ್ ರಾಜ್ ಇಲಾಖೆಯ 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದೂಡುತ್ತಾ ಬಂದ ಸರ್ಕಾರದ ಕ್ರಮವನ್ನು ಖಂಡಿಸಿ ಡಿ.30ರಂದು ಬೆಂಗಳೂರಿನ ಕೆಪಿಎಸ್ಸಿ ಕೇಂದ್ರ ಕಚೇರಿ ಎದುರು ರಾಜ್ಯ ಎಸ್ಡಿಎಎ ಉದ್ಯೋಗಾಕಾಂಕ್ಷಿಗಳ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಈ ಕುರಿತು ಮಾಹಿತಿ ನೀಡಿದ, ವೇದಿಕೆಯ ರಾಜ್ಯ ಸಂಚಾಲಕ ರಂಗನಾಥ ಸ್ವಾಮಿ, ಲೋಕಸಭೆ ಚುನಾವಣೆ ಶೀಘ್ರವೇ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿಗೊಳ್ಳಲಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ತಕ್ಷಣ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿದರು.
ಆರ್ ಎನ್ ನಾಯಕ್ ಹತ್ಯೆ ರಿವಾಲ್ವರ್ ಪತ್ತೆ
ಅಂಕೋಲಾದಲ್ಲಿ ಉದ್ಯಮಿ ಆರ್.ಎನ್. ನಾಯಕ್ ಹತ್ಯೆಗೆ ಬಳಸಿದ್ದ ರಿವಾಲ್ವರ್ ಮತ್ತು ಬುಲೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿದ್ದ ದುಷ್ಕರ್ಮಿ ಪಟ್ಟಣದ ತಂಪು ಪಾನೀಯ ಮಳಿಗೆಯೊಂದರಲ್ಲಿ ಅಡಗಿ ಕುಳಿತ್ತಿದ್ದ. ನಂತರ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿ ಸತೀಶ ಅಡಗಿ ಕುಳಿತಿದ್ದ ಅಮಿತ್ ಕೋಲ್ಡ್ಡ್ರಿಂಕ್ಸ್ ಅಂಗಡಿಯಲ್ಲಿ ಕಸದ ಡಬ್ಬಿಯಲ್ಲಿ ರಿವಾಲ್ವರ್ ಹಾಗೂ 6 ಗುಂಡುಗಳನ್ನು ಅಡಗಿಸಿಟ್ಟಿದ್ದ. ಅಂಗಡಿ ಮಾಲೀಕರು ನೀಡಿದ ಮಾಹಿತಿ ಅನ್ವಯ ಪೊಲೀಸರು ರಿವಾಲ್ವರ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
17 ಸದಸ್ಯರ ವಿರುದ್ಧ ಪ್ರಕರಣ
ಹುಬ್ಬಳ್ಳಿಯ ದೇಶಪಾಂಡೆ ನಗರದ ಜಮಖಾನಾ ಮೈದಾನದಲ್ಲಿ ಕ್ಲಬ್ ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಗ್ರೌಂಡ್ ಬಚಾವೋ ಸಮಿತಿಯ 17 ಸದಸ್ಯರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಎಲ್ಲರೂ ತಹಸೀಲ್ದಾರರ ಎದುರು ಹಾಜರಾಗಬೇಕಾಗಿದೆ. ಗ್ರೌಂಡ್ ಮುಕ್ತಗೊಳಿಸಿ ಎಂದು ಆಗಸ್ಟ್ನಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಇವರ ವಿರುದ್ಧ ಶಾಂತತಾ ಭಂಗ ಪ್ರಕರಣ ದಾಖಲಿಸಲಾಗಿದೆ, ಅವರು ಘಟನೆಗೆ ಸಂಬಂಧಿಸಿದಂತೆ ವಿವರಣೆ ನೀಡಬೇಕಾಗಿದೆ.
ಅಡಕೆ ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶ
ಸುಪ್ರೀಂಕೋರ್ಟ್ನಲ್ಲಿ ಅಡಕೆ ಬೆಳೆ ನಿಷೇಧದ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಹಾಗೂ ಅಡಕೆ ಬೆಳೆಗಾರರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ರಾಜ್ಯ ಅಡಕೆ ಬೆಳೆಗಾರ ಒಕ್ಕೂಟ ಡಿ.30ರಂದು ಶಿವಮೊಗ್ಗದಲ್ಲಿ ಅಡಕೆ ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ನಗರದ ಎನ್ಡಿವಿ ಹಾಸ್ಟೆಲ್ ಆವರಣದಲ್ಲಿ ಬೆಳಗ್ಗೆ 11ಕ್ಕೆ ಸಮಾವೇಶ ಉದ್ಘಾಟನೆಗೊಳ್ಳಲಿದೆ.
ಕನ್ನಡಿಗರನ್ನು ನೇಮಿಸಿ
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಿವೃತ್ತ ನ್ಯಾಯಮೂರ್ತಿ ಮುರುಗೇಶನರವರ ಬದಲಿಗೆ ಕನ್ನಡ ಬರುವ ರಾಜ್ಯದ ನಿವೃತ್ತ ನ್ಯಾಯಧೀಶರೊಬ್ಬರನ್ನು ಸರ್ಕಾರ ನೇಮಕ ಮಾಡುವಂತೆ ಆಗ್ರಹಿಸಿ ಬೀದರ್ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಕನ್ನಡ ಭಾಷೆ ಬರದ ತಮಿಳುನಾಡು ಮೂಲಕ ನಿವೃತ್ತ ನ್ಯಾ. ಮುರುಗೇಶನ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸೂಕ್ತವಲ್ಲ ಎಂದು ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದ್ದಾರೆ.