ಡಿ.19ರಂದು ಬೆಳಗಾವಿಗೆ ನರೇಂದ್ರ ಮೋದಿ
ಬೆಂಗಳೂರು, ಡಿ.12 : ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಡಿ.19ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಬೆಳಗಾವಿಯ ಕೆಎಲ್ಇ ಸಂಸ್ಥೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಟ್ಟು ಎರಡು ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಒಂದು ದಿನದ ಭೇಟಿಗಾಗಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಲಿದ್ದಾರೆ. ಡಿ.19ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ. ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮೊದಲು ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಡಿ.19ರಂದು ಜೆಎನ್ಎಂಸಿ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅನೇಕ ರಾಜಕಾರಣಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಅಂದು ಸಂಜೆ ಸುವರ್ಣ ಮಹೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಎಲ್ಇ ಸಂಸ್ಥೆ ತಿಳಿಸಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಡಿ.19ರಂದು ಬೆಳಗಾವಿಗೆ ಮೋದಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಡಿ.19ರಂದು ಬೆಳಗಾವಿಗೆ ಆಗಮಿಸಲಿದ್ದು, ಕೆಎಲ್ಇ ಸಂಸ್ಥೆಯ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರೇಮಿಗಳ ಮೇಲೆ ಹಲ್ಲೆ 10 ಜನರ ವಿರುದ್ಧ ಪ್ರಕರಣ
ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಬರುತ್ತಿದ್ದ ಪ್ರೇಮಿಗಳ ಮೇಲೆ ಯುವತಿ ಕುಟುಂಬದವರು ಬುಧವಾರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ತೆಗ್ಗಿ ಗ್ರಾಮದ ಯುವಕ ಮತ್ತು ಸಿದ್ದಾಪುರ ಗ್ರಾಮದ ಯುವತಿ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಮದುವೆಗೆ ಜಾತಿ ಅಡ್ಡಿಯಾಗಿದ್ದರಿಂದ ಯುವತಿಯ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಈ ನಡುವೆ ಪ್ರೇಮಿಗಳು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ವಿಷಯ ತಿಳಿದ ಯುವತಿ ಕುಟುಂಬಸ್ಥರು ಈ ಮದುವೆಗೂ ವಿರೋಧ ವ್ಯಕ್ತಪಡಿಸಿದ್ದರು. ರಕ್ಷಣೆ ಕೋರಲು ಎಸ್ಪಿ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಯುವತಿ ಕುಟುಂಬದವರು ಪ್ರೇಮಿಗಳಿಗೆ ನಡು ರಸ್ತೆಯಲ್ಲಿ ಥಳಿಸಿದ್ದರು.

ಅವ್ಯವಹಾರ ಪ್ರಕರಣ ಕ್ರಿಮಿನಲ್ ಮೊಕದ್ದಮೆ
ಕೊಡಗು ಜಿಲ್ಲೆಯ ಕುಶಾಲನಗರದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಲಕ್ಷಾಂತರ ರುಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪಂಚಾಯಿತಿಯಲ್ಲಿ 37 ಲಕ್ಷ ಅವ್ಯವಹಾರ ಮೇಲ್ನೋಟಕ್ಕೆ ಸಾಬೀತಾಗಿದ್ದು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಮೂಲಕ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾತೆ. ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ವಿರುದ್ಧ ಹಣ ದುರುಪಯೋಗ ನಡೆಸಿರುವುದಾಗಿ ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿಗೆ ದೂರು ನೀಡಿದ್ದರು.

ವಾಲ್ಮೀಕಿ ವಸತಿ ನಿಲಯ ನಿರ್ಮಾಣ
ಕೋಲಾರ ಜಿಲ್ಲೆಯಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ 8 ಕೋಟಿ ರು. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ವಸತಿ ನಿಲಯವನ್ನು ನಿರ್ಮಾಣ ಮಾಡಲು ಸರ್ಕಾರ ಸಿದ್ಧವಿದ್ದು ಜಿಲ್ಲಾಡಳಿತ ಅಗತ್ಯವಿರುವ ಸ್ಥಳವನ್ನು ನೀಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಸರ್ಕಾರ ವಾಲ್ಮೀಕಿ ವಸತಿ ನಿಲಯ ನಿರ್ಮಾಣ ಮಾಡಲು ಸಿದ್ಧವಾಗಿದೆ. ಆದರೆ, ಅದಕ್ಕೆ ಅಗತ್ಯವಿರುವ ಭೂಮಿಯನ್ನು ಜಿಲ್ಲಾಡಳಿತ ನೀಡಬೇಕು. ತ್ವರಿತವಾಗಿ ಜಿಲ್ಲಾಡಳಿತ ಸ್ಥಳವನ್ನು ಗುರುತಿಸಬೇಕು ಎಂದು ತಿಳಿಸಿದರು.

ಮಗನನ್ನು ಹುಡುಕಿಕೊಡಿ ಪ್ಲೀಸ್
"ನನ್ನ ಮಗನ ಅಪಹರಣವಾಗಿದೆ. ಅವನನ್ನು ಹುಡುಕಿಕೊಡಿ ಕರ್ನಾಟಕ ಸರ್ಕಾರ ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು" ಎಂದು ನಿಗೂಢವಾಗಿ ನಾಪತ್ತೆಯಾಗಿರುವ ಐಬಿಎಂ ಅಧಿಕಾರಿ ಇಬ್ರಾಹಿಂ ಷರೀಫ್ ತಂದೆ ಗಿಡ್ಡೂ ಸಾಬ್ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನನ್ನ ಮಗ ಓಡಿಶಾದಲ್ಲಿ ಮನೆಯಿಂದ ಕಛೇರಿಗೆ ತೆರಳಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ನ.25ರಂದು ಅಪಹರಣವಾದ ಇಬ್ರಾಹಿಂ ಷರೀಫ್ ಸುಳಿವು ಈವರೆಗೆ ಸಿಕ್ಕಿಲ್ಲ. ಆದ್ದರಿಂದ ಸರ್ಕಾರ ಮಗನನ್ನು ಹುಡುಕಿಕೊಡಬೇಕು ಎಂದು ಮನವಿ ಮಾಡಿದರು.

ಜೆಟ್ ಏರ್ ವೇಸ್ ವಿಮಾನದಲ್ಲಿ ಹೆಜ್ಜೇನು
ಜೆಟ್ ಏರ್ ವೇಸ್ ವಿಮಾನಕ್ಕೆ ಹೆಜ್ಜೇನು ಮುತ್ತಿಗೆ ಹಾಕಿದ್ದರಿಂದ ಪ್ರಯಾಣಿಕರು ಸುಮಾರು ಒಂದು ಗಂಟೆ ವಿಮಾನದೊಳಗೆ ಪರದಾಡಿದ ಪ್ರಸಂಗ ಗುರುವಾರ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿಮಾನ 12.5ಕ್ಕೆ ಲ್ಯಾಂಡ್ ಆಗಿದೆ. ತಕ್ಷಣ ಆಗಮಿಸಿದ ಹೆಜ್ಜೇನುಗಳು ವಿಮಾನದ ರೆಕ್ಕೆಯಲ್ಲಿ ಕುಳಿತು ಕೊಂಡವು. ಹಲವಾರು ಜೇನುಗಳು ವಿಮಾನದ ಸುತ್ತ ಹಾರಾಡಲು ಆರಂಭಿಸಿದವು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಹೆಜ್ಜೇನಿಗೆ ನೀರು ಸಿಂಪಡಿಸಿ ಓಡಿಸಲು ಯತ್ನಿಸಿದರು. ಅವರ ಕಾರ್ಯಾಚರಣೆ ಮುಗಿದು ಹಜ್ಜೇನು ಅಲ್ಲಿಂದ ಪಲಾಯನ ಮಾಡುವ ತನಕ ಪ್ರಯಾಣಿಕರು ವಿಮಾನದಲ್ಲೇ ಇದ್ದರು.

ಡಾ.ಸುಬ್ರಮಣ್ಯನ್ ಸ್ವಾಮಿ ಉಪನ್ಯಾಸ
ಡಿ.17 ರಂದು ಮಂಗಳೂರಿನ ಎ.ಬಿ.ಶೆಟ್ಟಿ ಮೆಮೊರಿಯಲ್ ಹಾಲ್ನಲ್ಲಿ ವಿದ್ವಾಂಸ ಮತ್ತು ಸಕ್ರೀಯ ರಾಜಕಾರಣಿಯಾದ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ‘ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಮೋದಿ ನಾಯಕತ್ವದ ಪ್ರಸ್ತುತತೆ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 6ಗಂಟೆಯಿಂದ 8ರವರೆಗೆ ಉಪನ್ಯಾಸ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜು ಅಧ್ಯಕ್ಷ ಎ.ರಾಘವೇಂದ್ರ ರಾವ್, ನಮೋ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ಕಾರ್ಯಕ್ರಮವು ನಮ್ಮ ಕುಡ್ಲ ವಾಹಿನಿ ಮತ್ತು www.namobrigade.in ನಲ್ಲಿ ನೇರಪ್ರಸಾರಗೊಳ್ಳಲಿದೆ.












Click it and Unblock the Notifications