ಆನೆಗಳ ಜೂಟಾಟಕ್ಕೆ ಅಧಿಕಾರಿಗಳು ಹೈರಾಣ!
ತುಮಕೂರು, ಫೆ.4 : ತುಮಕೂರು ನಗರಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ ಮೂರು ಕಾಡಾನೆಗಳನ್ನು ಬನ್ನೇರುಘಟ್ಟ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ, ಮಲ್ಲಸಂದ್ರ ಕೆರೆಯಲ್ಲಿರುವ 6 ಆನೆಗಳು ಸಿಬ್ಬಂದಿಯೊಂದಿಗೆ ಜೂಟಾಟವಾಡುತ್ತಿದ್ದು, ಅಧಿಕಾರಿಗಳು ಹೈರಾಣಾಗಿದ್ದಾರೆ.
ಗುಳೂರು ಕೆರೆಯಲ್ಲಿದ್ದ ಮೂರು ಆನೆಗಳನ್ನು ಸೋಮವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಬನ್ನೇರುಘಟ್ಟ ಕಾಡಿಗೆ ಅಟ್ಟಲಾಗಿದೆ. ಆದರೆ. ಮಲ್ಲಸಂದ್ರ ಕೆರೆಯಲ್ಲಿರುವ ಆರು ಆನೆಗಳು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಾಕಾನೆಗಳೊಂದಿಗೆ ಜೂಟಾಟ ವಾಡುತ್ತಿದ್ದು, ಅಧಿಕಾರಿಗಳನ್ನು ಹೈರಾಣಾಗಿಸಿವೆ.
ಆರು ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರ್ಷ, ಪ್ರಶಾಂತ, ವಿಕ್ರಮ ಎಂಬ ಮೂರು ಸಾಕಾನೆಗಳನ್ನು ದುಬಾರೆ ಶಿಬಿರದಿಂದ ಕರೆಸಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ಈ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ, ಸಾಕಾನೆಗಳನ್ನು ಕಂಡ ಆನೆಗಳು ನೀರಿನಿಂದ ಹೊರಬರಲೇ ಇಲ್ಲ. ಕೆರೆಯ ಸುತ್ತಲೂ ನೂರಾರು ಜನರು ಸೇರಿದ್ದು, ಕಾರ್ಯಾಚರಣೆಗೆ ಅಡಚಣೆ ಉಂಟುಮಾಡಿದ್ದು, ಅವು ಕರೆಯಲ್ಲಿಯೇ ಬೀಡು ಬಿಟ್ಟಿವೆ.
ತಡರಾತ್ರಿ ಜನ ಸಂಚಾರ ಕಡಿಮೆ ಆದ ನಂತ ಕೆರೆಯಿಂದ ಹೊರಬಂದ ಕಾಡಾನೆಗಳು ಕೊಂತಿಹಳ್ಳಿ, ದೊಡ್ಡಸಾರಂಗಿ, ಚಿಕ್ಕಸಾರಂಗಿ, ರಂಗನಹಳ್ಳಿ ಮೂಲಕ ಕುಣಿಗಲ್ ರಸ್ತೆಗೆ ಬಂದು ಅಲ್ಲಿಂದ ಲಕ್ಷ್ಮಣಸಂದ್ರಕೆರೆಗೆ ಆಗಮಿಸಿವೆ. ಆನೆಗಳ ಈ ಕಣ್ಣು ಮುಚ್ಚಾಲೆ ಆಟದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು, ಪೊಲೀಸರು ಕಂಗೆಟ್ಟಿದ್ದಾರೆ. ಮಂಗಳವಾರ ಸಂಜೆ ಮತ್ತೆ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]
ಆರು ಆನೆಗಳ ಜೂಟಾಟಕ್ಕೆ ಅಧಿಕಾರಿಗಳು ಸುಸ್ತು
ತುಮಕೂರಿನ ಮಲ್ಲಸಂದ್ರ ಕೆರೆಯಲ್ಲಿರುವ 6 ಕಾಡಾನೆಗಳು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಜೂಟಾಟವಾಡುತ್ತಿದ್ದು, ಆನೆಗಳ ಕಾಟದಿಂದ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. 6 ಆನೆಗಳನ್ನು ಕಾಡಿಗಟ್ಟಲು ಸೋಮವಾರ ನಡೆದ ಕಾರ್ಯಾಚರಣೆ ವಿಫಲವಾಗಿದ್ದು, ಮಲ್ಲಸಂದ್ರ ಕೆರೆಯಿಂದ ಲಕ್ಷಣ ಸಂದ್ರ ಕೆರೆಗೆ ಬಂದು ಆನೆಗಳು ಬಿಡಾರ ಹೂಡಿವೆ. ಮಂಗಳವಾರ ಸಂಜೆ ಪುನಃ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಆರಂಭವಾಗಲಿದೆ.
ಪುನಃ ವೀರಪ್ಪನ್ ಬದುಕಿ ಬಂದನೆ?
ಕಾಡುಗಳ್ಳ ವೀರಪ್ಪನ್ ಹತ್ಯೆ ನಂತರ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆನೆ ಹತ್ಯೆ ಮತ್ತು ದಂತ ಕಳವು ಪ್ರಕರಣ ದಾಖಲಾಗಿದ್ದು, ವೀರಪ್ಪನ್ ಪುನಃ ಹುಟ್ಟಿಬಂದನೆ ಎಂಬ ಅನುಮಾನ ಹುಟ್ಟುಹಾಕಿದೆ. ಚಾಮರಾಜನಗರ ತಾಲೂಕಿನ ಪೂಣಜನೂರು ವನ್ಯಜೀವಿ ವಲಯದ ಬೂದಿಪಡಗ ಶಾಖೆಯ ಕೋಳಿಪಾಳ್ಯ ಪ್ರದೇಶದಲ್ಲಿ ಆನೆಯೊಂದನ್ನು ಹತ್ಯೆ ಮಾಡಿ, ದಂತವನ್ನು ಕಳವು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಹೇಳಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಉಚಿತ ಕ್ಯಾನ್ಸರ್ ಮತ್ತು ಹೃದಯ ತಪಾಸಣಾ ಶಿಬಿರ
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಬೀದರ್ ನಗರದಲ್ಲಿ ಫೆ.12ರಿಂದ ನಡೆಯಲಿರುವ ವಚನ ವಿಜಯೋತ್ಸವ ಸಮಾರಂಭದ ಅಂಗವಾಗಿ ಭಾಲ್ಕಿ ನಗರದಲ್ಲಿ ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಫೆ. 6ರಂದು ಮಹಿಳೆ ಮತ್ತು ಪುರುಷರಿಗಾಗಿ ಮತ್ತು 7ರಂದು ಕೇವಲ ಮಹಿಳೆಯರಿಗಾಗಿ ತಪಾಸಣಾ ಶಿಬಿರ ನಡೆಯುತ್ತದೆ. ಬಸವ ಸೇವ ಪ್ರತಿಷ್ಠಾನ, ಬೆಂಗಳೂರಿನ ಕೇಸರಿಚಂದ್ ಪೂನಂಚಂದ್ ಸೇಠಿ ಚಾರಿಟೆಬಲ್ ಟ್ರಸ್ಟ್, ಕ್ಯಾನ್ಸರ್ ಕೇರ್ ಆಫ್ ಇಂಡಿಯಾ, ಆರ್ಯನ್ ಆಸ್ಪತ್ರೆಗಳ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ.
ಕುಡಿಯುವ ನೀರಿಗಾಗಿ ಗ್ರಾ.ಪಂ ಮುತ್ತಿಗೆ
ಚಿಕ್ಕಮಗಳೂರಿನ ಆಲ್ದೂರು ಪುರದ ದಲಿತರು ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಡಾ. ಅಂಬೇಡ್ಕರ್ ಯುವಕ ಸಂಘ ಹಾಗೂ ಪುರದ ಸ್ತ್ರೀಶಕ್ತಿ ಸಂಘಗಳ ಆಶ್ರಯದಲ್ಲಿ ಮಹಿಳೆಯರು ಸೇರಿದಂತೆ ಜನರು ಕಚೇರಿಗೆ ಮುತ್ತಿಗೆ ಹಾಕಿದರು. ವಾರ್ಡ್ ನಂ. 4ರ ವ್ಯಾಪ್ತಿಯಲ್ಲಿ ಆಲ್ದೂರಿನಲ್ಲಿ 30ಕ್ಕೂ ಹೆಚ್ಚು ದಲಿತ ಕುಟುಂಬದ ಮನೆಗಳಿವೆ. ಗ್ರಾಮ ಪಂಚಾಯಿತಿ ಇಲ್ಲಿಗೆ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗೋಪುರೋಥ್ಸವ
ಮಂಗಳೂರು ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ದೇವರ ಉತ್ಸವ ಪ್ರಯುಕ್ತ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿರವರ ಪಟ್ಟ ಶಿಷ್ಯರಾದ ಶ್ರೀಮದ್ ಸ೦ಯ್ಯಮಿಂದ್ರ ತೀರ್ಥ ಸ್ವಾಮೀಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶ್ರೀನಿವಾಸ ದೇವರ ಗೋಪುರೋಥ್ಸವ ಸೋಮವಾರ ನಡೆಯಿತು.
ಮಡಿಕೇರಿಯಲ್ಲಿ ಕಾಡಿಗೆ ಬೆಂಕಿ
ಮಡಿಕೇರಿಯ ಗೋಪಾಲಸ್ವಾಮಿ ಬೆಟ್ಟದ ಅಂಚಿನಲ್ಲಿರುವ ಮಂಡಲಗೆರೆ ಗುಡ್ಡದಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ಸಂಭವಿಸಿದ್ದು, ಹತ್ತಾರು ಎಕರೆ ಕುರುಚಲು ಕಾಡು ಅಗ್ನಿಗೆ ಆಹುತಿಯಾಗಿದೆ. ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಧಿಕಾರಿಗಳು ಬೆಂಕಿ ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಫೆ.7ರಂದು ಪ್ರತಿಭಟನೆ
ರೈತರು ಹಾಗೂ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ಸರ್ಕರದ ವಿರುದ್ಧ ಫೆ.7 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕೋಲಾರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹೇಳಿದ್ದಾರೆ. ಫೆ.7ರಂದು ಪ್ರತಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.