ಅತೃಪ್ತ ಕೈ ಶಾಸಕರಿಗೆ ಮೊದಲ ಶಾಕ್: ಉಮೇಶ್ ಜಾಧವ್ ನಿಗಮ ಸ್ಥಾನ ರದ್ದು
ಬೆಂಗಳೂರು, ಫೆಬ್ರವರಿ 07: ಕಾಂಗ್ರೆಸ್ ಅತೃಪ್ತ ಶಾಸಕರನ್ನು ತಹಬದಿಗೆ ತರಲು ನಿರ್ಣಯಿಸಿರುವ ರಾಜ್ಯ ಕಾಂಗ್ರೆಸ್ ಅತೃಪ್ತ ಶಾಸಕ ಉಮೇಶ್ ಜಾಧವ್ ಅವರ ನಿಗಮ ಅಧ್ಯಕ್ಷ ಸ್ಥಾನವನ್ನು ರದ್ದು ಮಾಡಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿರುವ ಆದೇಶದಂತೆ, ಉಮೇಶ್ ಜಾಧವ್ ಅವರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನವನ್ನು ರದ್ದು ಮಾಡಲಾಗಿದೆ.
ಉಮೇಶ್ ಅವರು ಕಾಂಗ್ರೆಸ್ ಭಿನ್ನಮತೀಯರಾಗಿದ್ದು, ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಾಳಯದ ನಿರಂತರ ಸಂಪರ್ಕದಲ್ಲಿ ಉಮೇಶ್ ಅವರು ಇದ್ದಾರೆ ಎನ್ನಲಾಗಿದೆ. ಉಮೇಶ್ ಜಾಧವ್ ಅವರ ಅಧ್ಯಕ್ಷ ಸ್ಥಾನ ಕಸಿದುಕೊಂಡು ಇತರ ಅತೃಪ್ತ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸುವ ತಂತ್ರವನ್ನು ಕಾಂಗ್ರೆಸ್ ಅನುಸರಿಸಿದೆ.

ಉಮೇಶ್ ಜಾಧವ್ ಅವರ ಅಧ್ಯಕ್ಷ ಸ್ಥಾನ ರದ್ದು ಮಾಡುವ ಜೊತೆಗೆ ಇನ್ನು ಇಬ್ಬರು ಶಾಸಕರು ಒಬ್ಬರು ವಿಧಾನ ಪರಿಷತ್ ಸದಸ್ಯರಿಗೆ ಬಡ್ತಿಯನ್ನೂ ನೀಡಲಾಗಿದೆ.
ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಅವರನ್ನು ಜಲಸಂಪನ್ಮೂಲ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ರಾಜ್ಯ ಸಚಿವರ ಸ್ಥಾನ-ಮಾನದೊಂದಿಗೆ ನೇಮಕ ಮಾಡಲಾಗಿದೆ.
ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಈ ಹಿಂದೆ ಉಮೇಶ್ ಜಾಧವ್ ಅವರು ಈ ನಿಗಮದ ಅಧ್ಯಕ್ಷರಾಗಿದ್ದರು. ಅವರ ಸ್ಥಾನವನ್ನು ಕಿತ್ತು ಪ್ರತಾಪ್ ಗೌಡ ಅವರಿಗೆ ನೀಡಲಾಗಿದೆ.
ಪ್ರತಾಪ್ ಗೌಡ ಮತ್ತು ಬಸನಗೌಡ ದದ್ದಲ್ ಇಬ್ಬರೂ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿ ತಮ್ಮತ್ತ ಸೆಳೆಯುವ ಯತ್ನ ಮಾಡಿದ್ದರು ಎನ್ನಲಾಗಿತ್ತು. ಈ ಇಬ್ಬರೂ ಶಾಸಕರು ಅತೃಪ್ತರ ದಾರಿ ಹಿಡಿಯಬಾರದೆಂದೇ ನಿಗಮ ಮಂಡಳಿ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.












Click it and Unblock the Notifications