ಕಾಂಗ್ರೆಸ್ ನಲ್ಲಿ ಬಂಡಾಯದ ಕೆಂಡ ಇನ್ನೂ ಉರಿಯುತ್ತಲೇ ಇದೆ
Recommended Video

ಬೆಂಗಳೂರು, ಸೆಪ್ಟೆಂಬರ್ 18 : ಜಾರಕಿಹೊಳಿ ಬ್ರದರ್ಸ್ ಅವರ ಜಠರದಲ್ಲಿ ಹುಟ್ಟಿಕೊಂಡಿದ್ದ ಆಕ್ರೋಶ, ಅಸಮಾಧಾನದ ಜ್ವಾಲೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಮನ ಮಾಡಿದ್ದಾರೆ, ಎಲ್ಲ ಬಹುತೇಕ ಎಲ್ಲ ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡರೂ ವಿವಾದದ ಬುಡದಲ್ಲಿ ನಿಗಿನಿಗಿ ಕೆಂಡ ಇನ್ನೂ ಉರಿಯುತ್ತಲೇ ಇದೆ.
ಡಿಕೆ ಶಿವಕುಮಾರ್ ಅವರು ಬೆಳಗಾವಿ ರಾಜಕೀಯದಲ್ಲಿ ಮೂಗು ತೂರಿಸಬಾರದು, ತಮಗೆ ಆಯಕಟ್ಟಿನ ಖಾತೆ ನೀಡಬೇಕು, ಬಳ್ಳಾರಿಯ ಪರಿಶಿಷ್ಟ ಪಂಗಡದ ನಾಯಕರಿಗೆ ಸಚಿವ ಸ್ಥಾನಮಾನ ನೀಡಬೇಕು, ಬೆಳಗಾವಿಯಲ್ಲಿ ತಾವು ಸೂಚಿಸಿದ ಅಧಿಕಾರಿಗಳನ್ನೇ ನೇಮಕ ಮಾಡಬೇಕು ಇತ್ಯಾದಿ ಇತ್ಯಾದಿ ಬೇಡಿಕೆಗಳ ಮೂಟೆಯನ್ನೇ ಹೊತ್ತುಕೊಂಡು ಬಂದಿದ್ದ ಜಾರಕಿಹೊಳಿ ಸಹೋದರರು ಅಸಲಿಗೆ ಹಚ್ಚಿದ ಕಿಡಿ ಸರದಲ್ಲಿರುವ ಮತ್ತೊಂದು ಪಟಾಕಿಗೂ ಹತ್ತಿಕೊಂಡಿದೆ.
ಎಲ್ಲ ಬಂಡಾಯ ಶಮನವಾಯಿತು, ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಬ್ರದರ್ಸ್ ತಮ್ಮ ಬೆಂಬಲಿಗರ ಸಮೇತ ಬೆಳಗಾವಿಗೆ ಮರಳುತ್ತಾರೆ, ಬಂಡಾಯಕ್ಕೇ ಕಾದುಕುಳಿತಿದ್ದ ಬಿಜೆಪಿ ಶಾಸಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಮ್ಮ ಕ್ಷೇತ್ರಗಳಿಗೆ ಮರಳಲಿದ್ದಾರೆ ಎನ್ನುವಷ್ಟರಲ್ಲಿ ಮತ್ತೊಂದಿಷ್ಟು ತುರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಈ ರಾಜಕೀಯ ಬೃಹನ್ನಾಟಕಕ್ಕೆ ಮತ್ತೆ ಕಳೆ ಬಂದಂತಾಗಿದೆ. ಈ ನಾಟಕಕ್ಕೆ ಇಷ್ಟು ಬೇಗನೆ ತೆರೆ ಬೀಳುವಂತೆ ಕಂಡುಬರುತ್ತಿಲ್ಲ.

ಬಂದಿರುವ ಸುದ್ದಿಯ ಪ್ರಕಾರ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮತ್ತೊಂದಿಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರನ್ನು ಮಂಗಳವಾರ ಸಂಜೆ ಭೇಟಿಯಾಗಲಿದ್ದಾರೆ. ಪರಿಶಿಷ್ಟ ಪಂಗಡದ ಶಾಸಕರಿಗೆ ಅಷ್ಟೇ ಏಕೆ ಸಚಿವ ಸ್ಥಾನ ನೀಡಬೇಕು, ಪರಿಶಿಷ್ಟ ಜಾತಿಗೆ ಸೇರಿದ ಶಾಸಕರಿಗೂ ಸಂಪುಟ ಸೇರುವ ಭಾಗ್ಯ ಕರುಣಿಸಬೇಕು ಎಂದು ಸುಮಾರು 12 ಶಾಸಕರು ಕಣ್ಣು ಕಿವಿ ಕೆಂಪಗೆ ಮಾಡಿಕೊಂಡು ಸಿದ್ದರಾಮಯ್ಯನವರನ್ನು ಭೇಟಿ ಮಾಡಲಿದ್ದಾರೆ.
ಅಲ್ಲಿಗೆ ಮತ್ತೊಂದು ಸುತ್ತಿನ ನಾಟಕಕ್ಕೆ ತೆರೆ ಏಳಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿರುವ ಸಿದ್ದರಾಮಯ್ಯ ಅವರು ಈ ಭಿನ್ನಮತವನ್ನು ಬುಡದಲ್ಲಿಯೇ ಚಿವುಟಿ ಹಾಕಲು ಏನು ಕಸರತ್ತು ಮಾಡಲಿದ್ದಾರೆ ಎಂಬುದು ಸಂಜೆಯ ನಂತರ ತಿಳಿದುಬರಲಿದೆ. ಅಂದ ಹಾಗೆ, ತಾವು ಯುರೋಪಿನಿಂದ ವಾಪಸ್ ಬಂದ ಬಳಿಕ ಸಂಪುಟ ವಿಸ್ತರಣೆಗೆ ಕೈಹಾಕುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಅಕ್ಟೋಬರ್ 3ರ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications