ಜಮೀರ್ ಅಹ್ಮದ್ಗೆ ಕೈ ಸಾಲ ಕೊಟ್ಟ 13 'ಧಣಿ'ಗಳಿಗೂ ಎಸಿಬಿ ಸಂಕಷ್ಟ!
ಬೆಂಗಳೂರು, ಜು. 17: ಅಕ್ರಮ ಆಸ್ತಿಗಳಿಕೆಗೆ ಸಂಬಂಧಿಸಿದಂತೆ ಎಸಿಬಿ ದಾಳಿಗೆ ಒಳಗಾಗಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ನಿಂದ 13 ಮಂದಿಗೆ ಎಸಿಬಿ ಕಂಟಕ ಎದುರಾಗಲಿದೆ. ಈ ಪಟ್ಟಿಯಲ್ಲಿ ಕೆಜಿಎಫ್ ಬಾಬು ಸಹ ಸೇರಿದ್ದಾರೆ.
ಹತ್ತು ದಿನದಲ್ಲಿ ಎಸಿಬಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದರಿಂದಾಗಿ ಖಾನ್ಗೆ ಕೋಟಿ ಕೋಟಿ ಕೈ ಸಾಲ ಕೊಟ್ಟವರು ಕೂಡ ವಿಚಾರಣೆ ಎದುರಿಸಬೇಕಾಗಿದೆ. ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ದಾಳಿ ಮಾಡಿತ್ತು. ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ತನಿಖೆ ಹಂತದಲ್ಲಿದೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ ವರದಿ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ ಇತ್ತೀಚೆಗೆ ದಾಳಿ ಮಾಡಿತ್ತು. ದಾಳಿ ಬಳಿಕ ಪ್ರಾಥಮಿಕ ತನಿಖೆ ವೇಳೆ ಎರಡು ಸಾವಿರ ಪಟ್ಟು ಅಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಎಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಜಮೀರ್ಗೆ ಮಾತ್ರವಲ್ಲ, ಜಮೀರ್ಗೆ ಕೋಟಿ ಕೋಟಿ ಕೈ ಸಾಲ ಕೊಟ್ಟವರಿಗೂ ಸಂಕಷ್ಟ ಎದುರಾಗಲಿದೆ.

ಜಮೀರ್ಗೆ ಕ್ಯೂ ನಿಂತು ಸಾಲ ಕೊಟ್ಟವರು
ಶಾಸಕ ಜಮೀರ್ ಅಹ್ಮದ್ ಖಾನ್ ಲೋಕಾಯುಕ್ತಕ್ಕೆ ಸಲ್ಲಿಸಿರುವ ಅಸ್ತಿ ವಿವರಗಳ ಪ್ರಕಾರ (2019 ) ಕೈ ಸಾಲದ ವಿವರ ಉಲ್ಲೇಖವಾಗಿದೆ. ಕಂಟೋನ್ಮೆಂಟ್ ಬಳಿ ಜಮೀರ್ ಕಟ್ಟಿರುವ ರಾಜ ವಿಲಾಸಿ ಕಟ್ಟಡ 33000 ಚದರಡಿ ನಿವೇಶನ ಖರೀದಿಗೆ 7 ಮಂದಿಯಿಂದ ಸಾಲ ಪಡೆದಿದ್ದಾರೆ.
ಅದರಲ್ಲಿ ಯು. ಮಲ್ಲಿಕಾರ್ಜುನ್ , ಉಮ್ರಾ ಡೆವಲಪರ್ಸ್, ನೂರುಲ್ಲಾ ಖಾನ್ ಸೇರಿದಂತೆ ಒಟ್ಟು13 ಮಂದಿ ಕೈ ಸಾಲ ನೀಡಿದ್ದಾಗಿ ಜಮೀರ್ ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟು 16 ಕೋಟಿ ರೂಪಾಯಿ ಸಾಲ ಪಡೆದಿದ್ದಾಗಿ ಜಮೀರ್ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ಜಮೀರ್ ಮಾಡಿದ್ದಾರೆ ಎನ್ನಲಾದ ಸಾಲದ ವಿವರವೂ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಜಮೀರ್ಗೆ ಕೈ ಸಾಲ ಕೊಟ್ಟವರು ಕೂಡ ಎಸಿಬಿ ತನಿಖೆಗೆ ಗುರಿಯಾಗಬೇಕಾಗಿದೆ.

ಯಾರು ಎಷ್ಟು ಸಾಲ ಕೊಟ್ಟಿದ್ದಾರೆ?
ಶಾಸಕ ಜಮೀರ್ಗೆ ಕೈ ಸಾಲ ಕೊಟ್ಟ 13 ಮಂದಿ ತಮ್ಮ ಆದಾಯ ತೆರಿಗೆ ವಿವರದಲ್ಲಿ ಘೋಷಣೆ ಮಾಡಿಕೊಂಡಿದ್ದಲ್ಲಿ ಬಚಾವ್ ಆಗಲು ಒಂದಷ್ಟು ದಾರಿ ಸಿಗಬಹುದು. ಆದರೆ ಜಮೀರ್ ಬಹುತೇಕ ಕೈ ಸಾಲ ಪಡೆದಿದ್ದು, ಅದನ್ನು ಸಾಲ ಕೊಟ್ಟವರು ಘೋಷಣೆ ಮಾಡಿಕೊಳ್ಳದಿದ್ದಲ್ಲಿ, ಶಾಸಕ ಜಮೀರ್ ಮತ್ತು ಸಾಲ ಕೊಟ್ಟವರಿಗೂ ಸಂಕಷ್ಟ ಎದುರಾಗಲಿದೆ.
ಅದರಲ್ಲಿ ಉಮ್ರಾ ಡೆವಲಪರ್ಸ್ ಬಾಬು ( ಕೆಜಿಎಫ್ ಬಾಬು), ಯು. ಮಲ್ಲಿಕಾರ್ಜುನ್, ನೂರುಲ್ಲಾ ಖಾನ್ ಸೇರಿದಂತೆ ಹದಿಮೂರು ಮಂದಿ ಎಸಿಬಿ ವಿಚಾರಣೆ ಎದುರಿಸಬೇಕಾಗಿದೆ. ಅದರಲ್ಲಿ ಯು ಮಲ್ಲಿಕಾರ್ಜುನ್ ಮೂರು ಕೋಟಿ ರೂ. ಸಾಲ, ಉಮ್ರಾ ಡೆವಲಪರ್ಸ್ ಎರಡು ಕೋಟಿ ರೂ. ಸಾಲ ಕೊಟ್ಟಿದ್ದು, ನ್ಯಾಷನಲ್ ಟ್ರಾವೆಲ್ಸ್ ಒಡೆಯ ಜಮೀರ್ ಸಾಲಕೂಟಕ್ಕೆ ಶೀಘ್ರದಲ್ಲಿಯೇ ಎಸಿಬಿ ನೋಟಿಸ್ ತಲುಪಲಿವೆ.

7 ಮಂದಿ ಸಾಲ ನೀಡಿದ್ದಾರೆ
ಕಂಟೋನ್ಮೆಂಟ್ ಬಳಿ ಇರುವ ರಾಜ ವಿಲಾಸಿ ಬಂಗಲೆಯ 33000 ಚದರಡಿ ನಿವೇಶನ 15 ಕೋಟಿ ರೂ.ಗೆ ಖರೀದಿ ಮಾಡಿದ್ದು ಅದಕ್ಕಾಗಿ ಏಳು ಮಂದಿ ಜಮೀರ್ಗೆ ಸಾಲ ನೀಡಿದ್ದಾರೆ. ಅದರಲ್ಲೂ ಸಹ ಮಲ್ಲಿಕಾರ್ಜುನ್ ಎಂಬಾತ ಮೂರು ಕೋಟಿ ರೂ. ಸಾಲ ನೀಡಿದ್ದಾಗಿ ಜಮೀರ್ ದಾಖಲೆಗಳಲ್ಲಿ ತೋರಿಸಿಕೊಂಡಿದ್ದಾರೆ. ನೂರುಲ್ಲಾ ಖಾನ್, ಉಮ್ರಾ ಬಿಲ್ಡರ್ಸ್, ಮತ್ತಿತರ ಹದಿಮೂರು ಮಂದಿಯಿಂದ ಒಟ್ಟು 15 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿರುವುದಾಗಿ ತೋರಿಸಿಕೊಂಡಿದ್ದಾರೆ. ಆದರೆ, ಈ ನಿವೇಶನ ಮಾರುಕಟ್ಟೆ ಮೌಲ್ಯ 40 ಕೋಟಿ ರೂ. ದಾಟಲಿದ್ದು, ಇಷ್ಟು ಕಡಿಮೆ ಬೆಲೆಗೆ ಯಾಕೆ ಕೊಟ್ಟರು? ಎಂಬುದು ಇನ್ನೊಂದು ರೋಜಕ ಸಂಗತಿ. ಈ ಎಲ್ಲಾ ವಿಚಾರಗಳ ಬಗ್ಗೆ ಎಸಿಬಿ ಪ್ರಶ್ನಾವಳಿ ಸಿದ್ದಪಡಿಸಿದ್ದು ಜಮೀರ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ

2 ಸಾವಿರ ಪಟ್ಟು ಅಕ್ರಮ ಆಸ್ತಿ ತನಕ
ಮನೆಯಲ್ಲಿ ಎರಡು ವಿಡಿಯೋ ಕ್ಯಾಸೆಟ್ ರೆಕಾರ್ಡರ್, ಐದು ಸೆಟ್ ಟೆಲಿವಿಜನ್ ಸೆಟ್, ಪ್ರಾಚೀನ ಕಾಲದ ಜೋಪುರ್ ಗೋಡೆ ಗಡಿಯಾರ. 250 ಗ್ರಾಂ ಬೆಳ್ಳಿ, 234 ಗ್ರಾಂ ಚಿನ್ನ, 45 ಗ್ರಾಂ ಚಿನ್ನದ ಒಡವೆ. ಜಯನಗರದಲ್ಲಿ ಮನೆ, ಸದಾಶಿವನಗರ ರಾಜವಿಲಾಸ ಬಡಾವಣೆಯಲ್ಲಿ ಒಂದು ಕಟ್ಟಡ, ಶಾಸಕ ಸ್ಥಾನದಿಂದ ಬರುವ ಸಂಬಳ, ಅಂಚೆ ಕಚೇರಿಯಲ್ಲಿ ಐದು ಸಾವಿರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಐದು ಲಕ್ಷ ರೂ. ಎಲ್ಐಸಿ ಬಾಂಡ್. ಶಾಸಕರ ವೇತನ ಭತ್ಯೆ ಉಳಿತಾಯ ಆಗಿದ್ದು ಕೇವಲ 3.53 ಲಕ್ಷ ಮಾತ್ರ.
ವಾರ್ಷಿಕ ವರಮಾನ 1.20 ಲಕ್ಷ ರೂ. ಶಾಸಕ ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ಅವರು 2006 ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಉತ್ತರ ದಾಯಿತ್ವ ಆಸ್ತಿಯ ವಿವರಗಳು ಇಷ್ಟೇ. ಆರು ಪುಟದಲ್ಲಿ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದಾರೆ. ಆದರೆ ಇವತ್ತು ಜಮೀರ್ ಆಸ್ತಿಯ ಮರ್ಮ ಯಾರಿಗೂ ಗೊತ್ತಿಲ್ಲ.
ದೆಹಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಗೆ ಒಳಗಾದ ಕಂಟೋನ್ಮೆಂಟ್ ರಸ್ತೆಯ ಅರಬ್ ಎಮಿರೇಟ್ಸ್ ವಿಲಾಸಿ ಭಂಗಲೆಯ ಮೊತ್ತವೇ ಬರೋಬ್ಬರಿ 50 ಕೋಟಿ ತಲುಪಿದೆ. ಎಸಿಬಿ ದಾಳಿ ಬಳಿಕ 89 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಸಂಗತಿ ಹೊರ ಬಿದ್ದಿದೆ. ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಜಮೀರ್ಗೆ ಸಾಲಕೊಟ್ಟವರು ಇದೀಗ ಅದರ ಸತ್ಯಗಳನ್ನು ಎಸಿಬಿ ಮುಂದೆ ಹೇಳಬೇಕಾಗಿದೆ.
ನ್ಯಾಷನಲ್ ಟ್ರಾವೆಲ್ಸ್ ಬಸ್ ಗಳ ಸಂಪತ್ತು
ಬಸ್ ವಹಿವಾಟು
ಎನ್. ಟಿ. ಜಮೀರ್ ಅಹ್ಮದ್ ಖಾನ್ ಅಸೋಸಿಯೇಟ್ಸ್ ಸೇರಿದ 25 ವಾಹನ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಮಲ್ಟಿ ಆಕ್ಸಲ್ ಬಸ್ ಸೇರಿದಂತೆ ಒಟ್ಟು 15 ಬಸ್ ಗಳು ಹತ್ತು ಈಚರ್ ವಾಹನಗಳನ್ನು ಹೊಂದಿರುವುದಾಗಿ ಜಮೀರ್ ಹೇಳಿಕೊಂಡಿದ್ದಾರೆ.
2019 -20ನೇ ಸಾಲಿನಲ್ಲಿ ಒಂದು ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡಿದ್ದಾರೆ. ಒಟ್ಟಾರೆ ಜಮೀರ್ ಅವರಿಗೆ ಸೇರಿದ 33 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಜಮೀರ್ ಹೇಳಿಕೊಂಡಿದ್ದರು. ಅದರಲ್ಲಿ 22 ಕೋಟಿ ರೂ. ಸಾಲ ಹೊಂದಿರುವುದಾಗಿ ಆಸ್ತಿ ವಿವರ ಸಲ್ಲಿಸಿದ್ದರು. ಆದರೆ ಜಮೀರ್ ಎಲ್ಲಾ ಲೆಕ್ಕಾಚಾರಗಳು ಇಡಿ ದಾಳಿಯಲ್ಲಿ ತಲೆ ಕೆಳಗಾಗಿವೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಜಮೀರ್ ಗೆ ಒಂದೆಡೆ ಇಡಿ ಮತ್ತೊಂದಡೆ ಎಸಿಬಿ ಕಾಟ ಶುರುವಾಗಿದೆ.












Click it and Unblock the Notifications