Caste Census: ಹಿಂದುಳಿದ ವರ್ಗಗಳ ಆಯೋಗಕ್ಕೆ ಮಹತ್ವದ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಲೋಕಸಭೆ ಚುನಾವಣೆಗೂ ಮೊದಲೇ ಬಿಹಾರದ ಸರ್ಕಾರವು ಜಾತಿ ಗಣತಿ ಬಿಡುಗಡೆ ಮಾಡಿರುವುದು ಸಂಚಲನ ಸೃಷ್ಟಿಸಿದೆ. ದೇಶಾದ್ಯಂತ ಈ ಬಗ್ಗೆಯೇ ಚರ್ಚೆ ನಡೆಯುವಾಗಲೇ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆ ಪಕ್ಕಾ ಆಗಿದೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಬಿಡುಗಡೆ ಬಗ್ಗೆ ಹೇಳಿದ್ದೇನು? ರಾಜ್ಯದಲ್ಲಿ ಜಾತಿ ಗಣತಿ ಬಿಡುಗಡೆ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ.
ಜಾತಿ ಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದ್ದು, ಆ ವರದಿ ನೀಡಿದ್ರೆ ಪರಿಶೀಲನೆ ಮಾಡುತ್ತೇವೆ ಅಂತಾ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿಎಂ ಇಂದು ಬೆಳಗಾವಿಯಲ್ಲಿ ಮಾತನಾಡುವಾಗ ಈ ವಿಚಾರ ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೂಡ ಜಾತಿ ಗಣತಿ ಬಿಡುಗಡೆಗೆ ಮುಹೂರ್ತ ಹತ್ತಿರ ಬಂದಂತೆ ಕಾಣುತ್ತಿದೆ. ಬಿಹಾರದಲ್ಲಿ ಈಗಾಗಲೇ ಜಾತಿ ಗಣತಿ ರಿಲೀಸ್ ಆಗಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ಈ ಹೊತ್ತಲ್ಲೇ ಕರ್ನಾಟಕ ಸರ್ಕಾರ ಕೂಡ ಅದೇ ಹಾದಿಯಲ್ಲಿ ಇರುವುದು ಬಹುತೇಕ ಗ್ಯಾರಂಟಿ ಆಗಿದೆ.

ಜಾತಿ ಗಣತಿ ಬಗ್ಗೆ ಸಿಎಂ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕಾಂತರಾಜು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದು, ವರದಿ ತಯಾರು ಮಾಡಿದ್ದರು. ವರದಿ ಸಲ್ಲಿಸಲು ಹೋದಾಗ ಅದನ್ನು ಅವರು ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿ ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ವಿವರಿಸಿದರು.
ನಾನೇ ಹಿಂದೆ ಆದೇಶ ಮಾಡಿದ್ದೆ!
ಜಾತಿ ಗಣತಿ & ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ನಾನೇ ಹಿಂದೆ ಆದೇಶ ಮಾಡಿದ್ದೆ. ಆಗ ಕಾಂತರಾಜು ಆವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಇರುವಾಗ ಆಗಿನ ಸಿಎಂ ಕುಮಾರಸ್ವಾಮಿ & ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿ ಪಡೆಯಲಿಲ್ಲ. ಆ ಬಳಿಕ ಆಯೋಗಕ್ಕೆ ಜಯಪ್ರಕಾಶ್ ಹೆಗಡೆ ಅವರನ್ನು ಬಿಜೆಪಿ ಸರ್ಕಾರ ನೇಮಕ ಮಾಡಿತ್ತು. ಅವರಿಗೆ ವರದಿ ವರದಿ ಸಲ್ಲಿಸಲು ತಿಳಿಸಲಾಗಿದೆ, ಆದರೆ ಕೊಟ್ಟಿಲ್ಲ ಎಂದಿದ್ದಾರೆ ಸಿಎಂ.

ಸಂಚಲನ ಸೃಷ್ಟಿಸಿದ್ದ ಜಾತಿ ಗಣತಿ
2015ರಲ್ಲಿ ಜಾತಿ ಜನಗಣತಿ ವರದಿ ಸೋರಿಕೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿಯನ್ನು ಇಟ್ಟುಕೊಂಡೇ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದವು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಜನಗಣತಿ ಶುರು ಆಗಿತ್ತು. ಇದನ್ನು 2015ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಅಲ್ಲದೆ 162 ಕೋಟಿ ರೂಪಾಯಿ ಜಾತಿ ಗಣತಿಗೆ ಖರ್ಚಾಗಿತ್ತು. ಇಷ್ಟೆಲ್ಲಾ ಖರ್ಚು ಮಾಡಿ ಸಿದ್ಧಗೊಳಿಸಿದ್ದ ವರದಿ ಮಾತ್ರ 8 ವರ್ಷವಾದ್ರೂ ಹೊರಬಿದ್ದಿಲ್ಲ. ಈ ಸಮಯದಲ್ಲೇ ಬಿಹಾರ ಜಾತಿ ಗಣತಿ ಹೊರಬಿದ್ದಿದ್ದು, ಕರ್ನಾಟಕದಲ್ಲಿ ಕೂಡ ಜಾತಿ ಗಣತಿಯ ವರದಿ ಬಿಡುಗಡೆ ಆಗುತ್ತಾ? ಎಂಬ ಕುತೂಹಲ ಕಾಡುತ್ತಿತ್ತು, ಈಗ ಸಿಎಂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಪ್ರಕರಣದ ಬಗ್ಗೆಯು ಹೇಳಿಕೆ ನೀಡಿದ್ದು, ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಪೋಲಿಸರ ಮೇಲೂ ಕಲ್ಲು ತೂರಾಟವಾದ ಬಗ್ಗೆ ಮಾತನಾಡಿದರು. ಘಟನೆಗೆ ಕಾರಣರಾದವರ ಮೇಲೆ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಸಿಎಂ. ಒಟ್ನಲ್ಲಿ ಭಾರಿ ಕುತೂಹಲ ಕೆರಳಿಸಿರುವ ಜಾತಿ ಗಣತಿ ವಿಚಾರದ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಮೂಲಕ ದೇಶದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಿದ 2ನೇ ರಾಜ್ಯ ಕರ್ನಾಟಕವೇ ಆಗುತ್ತಾ? ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಈ ಪ್ರಶ್ನೆಗೆ ಶೀಘ್ರವೇ ಉತ್ತರ ಕೂಡ ಸಿಗಲಿದೆ.












Click it and Unblock the Notifications