Mekedatu Dam: ಮೇಕದಾಟು ಡ್ಯಾಂ ನಿರ್ಮಾಣದ ಬಗ್ಗೆ ಗುಡ್ ನ್ಯೂಸ್!
ಬೆಂಗಳೂರು ಸೇರಿ ರಾಮನಗರ ಸುತ್ತಮುತ್ತಲಿನ ಜನರ ನೀರಿನ ದಾಹ ನೀಗಿಸುವ ಮಹತ್ವದ ಯೋಜನೆಗೆ ಕೌಂಟ್ಡೌನ್ ಶುರುವಾಗಿದೆ. ಮೇಕೆದಾಟು ಡ್ಯಾಂ ನಿರ್ಮಾಣದ ಬಗ್ಗೆ ಇದೀಗ ಗುಡ್ ನ್ಯೂಸ್ ಹೊರಬಿದ್ದಿದೆ. ಅತ್ತ ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯದ ನಿರ್ಮಾಣಕ್ಕೆ ಅಡ್ಡಿಗಾಲು ಹಾಕುತ್ತಿರುವ ಸಂದರ್ಭದಲ್ಲೇ, ಕರ್ನಾಟಕ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಒಂದು ಹೆಜ್ಜೆ ಮುಂದಿಟ್ಟಿದೆ.
ಅಂದಹಾಗೆ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಭೂಮಿ ಮತ್ತು ಮರಗಳ ಸರ್ವೆ ಕಾರ್ಯ ಆರಂಭಿಸಿದ್ದಾರೆ. ವಿಚಾರ ಇದಿಷ್ಟು ಮಾತ್ರವಲ್ಲ, ಈಗಾಗಲೇ ಸುಮಾರು 2 ಕಿಲೋ ಮೀಟರ್ ಸರ್ವೇ ಕಾರ್ಯ ಕೂಡ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದು, ಹವಾಮಾನ ಕೂಡ ಪೂರಕ ವಾತಾವರಣ ಸೃಷ್ಟಿಸಿದರೆ ಇನ್ನು 60 ದಿನಗಳಲ್ಲಿ ಈ ಸಮೀಕ್ಷೆ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಅರಣ್ಯದ ಗಡಿಯನ್ನು ಗುರುತಿಸಲು ಪ್ರತಿ 20 ಮೀಟರ್ಗೆ ಒಂದರಂತೆ ಮರದ ದಿಮ್ಮೆಯ ಗುರುತು ಹಾಕಲಾಗಿದೆ.

ಮೇಕೆದಾಟು ಸಮೀಕ್ಷೆಗೆ ಮಳೆ ಭೀತಿ
ಈಗ ಸಮೀಕ್ಷೆ ಕಾರ್ಯ ಆರಂಭವಾಗಿ ಡ್ಯಾಂ ನಿರ್ಮಾಣ ಕೂಡ ಬಹುತೇಕ ನಿಶ್ಚಿತವಾಗಿದೆ. ಆದರೆ ಇದೇ ಹೊತ್ತಲ್ಲಿ ಅರಣ್ಯದ ಗಡಿ ಗುರುತಿಸಲು ಹಾಕಿರುವ ಮರದ ದಿಮ್ಮೆಗಳು ಗಾಳಿ, ಮಳೆಗೆ ಬಿದ್ದು ಹೋಗುವ ಸಂಭವ ಇದೆ. ಹೀಗಾಗಿ ಕಾಂಕ್ರಿಟ್ ಪಿಲ್ಲರ್ ಹಾಕಬೇಕಿದೆ. ಆದ್ರೆ ಇದಕ್ಕೆ ಅನುಮತಿ ಬೇಕಾಗಿದ್ದು ಅರಣ್ಯಾಧಿಕಾರಿಗಳು ಅನುಮತಿಗಾಗಿ ಕಾಯುತ್ತಿದ್ದಾರೆ. ಈ ಕಾರ್ಯಕ್ಕೆ ಅರಣ್ಯ ಇಲಾಖೆಯ ಪ್ರಧಾನ ಸಂರಕ್ಷಣಾಧಿಕಾರಿ ಅನುಮೋದನೆ ನೀಡಬೇಕಾಗಿದೆ. ಮತ್ತೊಂದ್ಕಡೆ ಭಾರಿ ಮಳೆಯ ಪರಿಣಾಮ ಪ್ರವಾಹ ಭೀತಿ ಕೂಡ ಇದ್ದು, ಸಮೀಕ್ಷೆ ನಡೆಸಿ ಹಾಕಿರುವ ಗುರುತು ಕೂಡ ಅಳಿಸುವ ಆತಂಕ ಇದೆ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ಈ ಸರ್ವೆ ನಡೆಸುತ್ತಿದ್ದಾರೆ ಅರಣ್ಯಾಧಿಕಾರಿಗಳು.
ಕರ್ನಾಟಕಕ್ಕೆ ಮೇಕೆದಾಟು ಎಷ್ಟು ಮುಖ್ಯ?
ಮೇಕೆದಾಟು ಯೋಜನೆ ರಾಜಧಾನಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿರೀಕ್ಷೆ ಇದೆ. ಹಾಗೇ ಯೋಜನೆಗೆ ಕಂದಾಯ ಮತ್ತು ಅರಣ್ಯ ಭೂಮಿ ಸೇರಿ 5,240 ಹೆಕ್ಟೇರ್ ಜಾಗ ಅಗತ್ಯವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಸೇರಿದಂತೆ ಚಾಮರಾಜನಗರ, ಬಿಳಿಗಿರಿ ರಂಗನಾಥಸ್ವಾಮಿ ವನ್ಯಜೀವಿ ಅಭಯಾರಣ್ಯ ಹಾಗೂ ಎಂಎಂ ಹಿಲ್ಸ್ ಅಭಯಾರಣ್ಯ & ಕಾವೇರಿ ವನ್ಯಜೀವಿ ಅಭಯಾರಣ್ಯದಿಂದ ಅಧಿಕಾರಿಗಳನ್ನು ಈ ಸರ್ವೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಹಾಗಾದರೆ ಮೇಕೆದಾಟು ಯೋಜನೆ ನಮ್ಮ ರಾಜ್ಯಕ್ಕೆ ಎಷ್ಟು ಮುಖ್ಯ? ಮಾಹಿತಿಗಾಗಿ ಮುಂದೆ ಓದಿ.
ಮೇಕೆದಾಟು ಡ್ಯಾಂ ಸಂಕಷ್ಟ ಪರಿಹರಿಸುತ್ತಾ?
1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುತ್ತಿರುವ ನೀರನ್ನು, ಕರ್ನಾಟಕ & ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯ.

2) ಮೇಕೆದಾಟು ಜಲಾಶಯದಲ್ಲಿ ನೀರು ಸಂಗ್ರಹವಾದರೆ 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾದಂತೆ ತಡೆಯಬಹುದು. ಇದ್ರಿಂದ ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ.
3) ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ, ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ. ಹಾಗೇ ತಮಿಳುನಾಡು ಕೂಡ ಇದರಿಂದ ಲಾಭ ಪಡೆಯಬಹುದು.
4) ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಹೊರವಲಯದಲ್ಲಿ ನೀರಿನ ಸಮಸ್ಯೆ ಬಹುತೇಕ ಶಮನ. ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋಗಿರುವ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸ.
5) ರಾಮನಗರ ಸುತ್ತಮುತ್ತಲ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲ ಮಟ್ಟ ಏರಿಕೆ. ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.
ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತಾ?
ಕಳೆದ ವರ್ಷ ಒಂದೇ ಬಾರಿಗೆ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿ ವ್ಯರ್ಥವಾಗಿದೆ. ಅದೇ ಮೇಕೆದಾಟು ಡ್ಯಾಂ ನಿರ್ಮಾಣವಾಗಿದ್ದರೆ, ಮಳೆ ನೀರು ವ್ಯರ್ಥವಾಗಿ ಹೋಗುವುದನ್ನೂ ತಪ್ಪಿಸಬಹುದಿತ್ತು. ಹೀಗೆ ಕರ್ನಾಟಕ ಕೂಡ ನಮ್ಮ ನೆಲದಲ್ಲಿ ಮೇಕೆದಾಟು ಬಳಿ ಜಲಾಶಯದ ನಿರ್ಮಾಣಕ್ಕೆ ಪಣತೊಟ್ಟಿದೆ. ಇದನ್ನ ಅರ್ಥ ಮಾಡಿಕೊಂಡು ತಮಿಳುನಾಡು ರಾಜಕಾರಣಿಗಳು ಸುಖಾಸುಮ್ಮನೆ ಕಿರಿಕ್ ಮಾಡ್ತಾ ಇದ್ದಾರೆ ಆನ್ನೋ ಆರೋಪವೂ ಕೇಳಿಬರುತ್ತಿದೆ. ಅಲ್ಲದೆ ಇದೇ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಆಗ್ರಹಿಸಿದೆ.

ತಮಿಳುನಾಡು ಸರ್ಕಾರದ ಕಿರಿಕ್ ಏಕೆ?
ಈ ಪ್ರಶ್ನೆ ಕೋಟ್ಯಂತರ ಜನರನ್ನ ಕಾಡುತ್ತಿದೆ. ಆದರೆ ಇದಕ್ಕೆ ಕೆಲವರು ಒನ್ಲೈನ್ ಉತ್ತರ ಕೂಡ ಕೊಡುತ್ತಿದ್ದಾರೆ. ಅದೇನೆಂದರೆ ತಮಿಳುನಾಡು ರಾಜಕೀಯದಲ್ಲಿ ಕಾವೇರಿ ವಿವಾದದ ಹೊರತಾಗಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಿರಿಕ್ ಶುರುವಾಗಿದೆ. ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ಕಿರಿಕ್ ತೆಗೆದಿದೆ ಎಂದು. ಹಾಗಾದರೆ ತಮಿಳುನಾಡು ಸರ್ಕಾರ ಈ ಯೋಜನೆಗೆ ವಿರೋಧ ಮಾಡುತ್ತಿರುವುದು ಏಕೆ? ಮುಂದೆ ಓದಿ.
1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ನೀರಿನ ಕೊರತೆ ಎದುರಾಗುವ ಭಯವಿದೆ ಎನ್ನುತ್ತಿದೆ ತಮಿಳುನಾಡು ಸರ್ಕಾರ.
2) ಕೆಆರ್ಎಸ್ ಡ್ಯಾಂ ಬಳಿಕ ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣವತಿ ನದಿಗಳು ಕಾವೇರಿ ನದಿಗೆ ಸೇರಿ ಅನಿಯಂತ್ರಿತವಾಗಿ ನದಿ ಹರಿಯುತ್ತದೆ.
3) ತಮಿಳುನಾಡು ಗಡಿ ಭಾಗದಲ್ಲಿ ಡ್ಯಾಂ ನಿರ್ಮಾಣವಾದರೆ ಅನಿಯಂತ್ರಿತವಾಗಿ ನದಿಯ ಹರಿವು ತಡೆದಂತಾಗುತ್ತದೆ ಎಂಬ ವಾದವಿದೆ.
4) ಈಗಾಗಲೇ ತಮಿಳುನಾಡು ಸರ್ಕಾರ ಕೂಡ ಕಾವೇರಿ ನೀರನ್ನೇ ನಂಬಿಕೊಂಡು ಸಾಕಷ್ಟು ಯೋಜನೆ ಕೈಗೆತ್ತಿಕೊಂಡಿದೆ.
5) ಮೇಕೆದಾಟು ಯೋಜನೆ ತಮಿಳುನಾಡಲ್ಲಿ ಬಹುತೇಕ ರಾಜಕೀಯವಾಗಿ ಬದಲಾಗಿದ್ದು, ದೊಡ್ಡ ಸಮಸ್ಯೆ ಎದುರಾಗಿದೆ.
ಒಟ್ನಲ್ಲಿ ತಿಕ್ಕಾಟದ ನಡುವೆಯೇ ಮಹತ್ವದ ಮೇಕೆದಾಟು ಯೋಜನೆಗೆ ಸರ್ವೆ ಕಾರ್ಯವೂ ಆರಂಭವಾಗಿದೆ. 5,252 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸುವ ಡ್ಯಾಂಗೆ 3181 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಜಾಗ ಅಗತ್ಯವಿದೆ. ಯೋಜನೆ ಬಳಿಕ 5 ಹಳ್ಳಿಗಳು ಮುಳುಗಲಿದ್ದು, 201 ಹೆಕ್ಟೇರ್ ಖಾಸಗಿ ಭೂಮಿ ಕೂಡ ಬೇಕಾಗುತ್ತದೆ. ಜಲಾಶಯ ನಿರ್ಮಾಣವಾದರೆ 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡು ಮೂಲಕ ಸಮುದ್ರದ ಪಾಲಾಗುತ್ತಿರುವುದನ್ನ ಕೂಡ ತಪ್ಪಿಸಬಹುದು ಎಂಬ ಲೆಕ್ಕಾಚಾರ ಇದೆ. ಹೀಗೆ ಹಲವು ಲೆಕ್ಕಾಚಾರಗಳ ಮೂಲಕ ಡ್ಯಾಂ ನಿರ್ಮಾಣಕ್ಕೆ ಕೆಲಸ ಶುರುವಾಗಿದ್ದು, ಯೋಜನೆಗೆ ಏನೆಲ್ಲಾ ಅಡ್ಡಿ & ಆತಂಕ ಎದುರಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications