ನಿರ್ದೇಶಕ- ನಟ ಎಸ್.ನಾರಾಯಣ್, ತಿಮ್ಮಯ್ಯ ಪುರ್ಲೆ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಮಾ. 16: ನಿರ್ದೇಶಕ, ನಟ ಎಸ್. ನಾರಾಯಣ್ ಹಾಗೂ ರಾಜ್ಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರ ಪಕ್ಷ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಧ್ವಜ ನೀಡಿ ಇಬ್ಬರನ್ನೂ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಎಸ್. ನಾರಾಯಣ್ ಅವರ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅವರು ಬಹುಮುಖ ಪ್ರತಿಭೆ. ಬಹಳ ಸರಳ ವ್ಯಕ್ತಿತ್ವ. ಅವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಪಾರ ಸೇವೆ ಮಾಡಿದ್ದು, ಅವರೇ ಸ್ವಇಚ್ಛೆಯಿಂದ ಕಾಂಗ್ರೆಸ್ ಗೆ ಪಕ್ಷದ ಸಿದ್ಧಾಂತ ಒಪ್ಪಿ ಸೇರುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಸದಸ್ಯತ್ವ ನೀಡಿ ಅವರನ್ನು ಸ್ವಾಗತಿಸುತ್ತೇನೆ. ಈ ದಿನ ಶುಭದಿನ, ಶುಭ ಘಳಿಗೆ ಎಂದು ಆಯ್ಕೆ ಮಾಡಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಮುದಾಯ, ಚಿತ್ರರಂಗ, ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲ ಕಡೆ ಪಕ್ಷದ ಸಂಘಟನೆ ಮಾಡುವ ವಿಶ್ವಾಸವಿದೆ ಎಂದರು.

ಇನ್ನು ತಿಮ್ಮಯ್ಯ ಪುರ್ಲೆ ಅವರು ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನವರು. ರಾಜ್ಯ ಪಿಯುಸಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಅವರು ಒಂದು ವರ್ಷದ ಹಿಂದೆಯೇ ನಮ್ಮ ಜತೆ ಇದ್ದಿದ್ದರೆ ಇಷ್ಟು ಹೊತ್ತಿಗೆ ವಿಧಾನ ಪರಿಷತ್ ಸದಸ್ಯರಾಗುತ್ತಿದ್ದರು. ಅವರು ಬಹಳ ಪ್ರಭಾವ ಹೊಂದಿದ್ದು ಜನತಾ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರು ನಮಗೆ ಕೇವಲ ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಮಗೆ ದೊಡ್ಡ ಶಕ್ತಿ ತುಂಬಲಿದ್ದಾರೆ. ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ನಾವು ಬಸವರಾಜ ಗುರಿಕಾರ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಅವರಿಗೆ ತಿಮ್ಮಯ್ಯ ಅವರು ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.
ಪಕ್ಷ ಸೇರಲು ಬಹಳ ಜನ ಅರ್ಜಿ ಹಾಕಿದ್ದಾರೆ:
ಕಾಂಗ್ರೆಸ್ ಪಕ್ಷ ಸೇರಲು ಬಹಳ ಜನ ಅರ್ಜಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಪಕ್ಷದಲ್ಲಿ ಸೇರಿಸಿಕೊಳ್ಳಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷರು ಅವರ ಪಕ್ಷ ಸೇರಲು ಕಾಂಗ್ರೆಸ್ ಶಾಸಕರು ಸರದಿ ಸಾಲಲ್ಲಿ ನಿಂತಿರುವುದಾಗಿ ಹೇಳಿದ್ದಾರೆ. ಅವರು ತಡ ಮಾಡಬಾರದು. ಆದಷ್ಟು ಬೇಗ ಸೇರಿಸಿಕೊಳ್ಳಲಿ. ನನ್ನನ್ನು ಯಾರು ಸಂಪರ್ಕಿಸುತ್ತಿದ್ದಾರೆ ಎಂದು ನಾನು ಈಗ ಹೇಳುವುದಿಲ್ಲ. ಅವರು ನಮ್ಮ ಪಕ್ಷದಿಂದ ಸೇರಿಸಿಕೊಳ್ಳುವವರನ್ನು ಬೇಗ ಸೇರಿಸಿಕೊಳ್ಳಲಿ. ಉಡುಪಿ, ಧಾರವಾಡ ಜಿಲ್ಲೆಯಲ್ಲಿ ಯಾರನ್ನು ಅವರು ಸಂಪರ್ಕಿಸಿ ಮಾತನಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಈಗ ಆ ಚರ್ಚೆ ಬೇಡ ಎಂದು ಶಿವಕುಮಾರ್ ಹೇಳಿದರು.
ಪಂಚರಾಜ್ಯ ಚುನಾವಣಾ ನಂತರ ಕಾಂಗ್ರೆಸ್ ಧೂಳಿಪಟ, ಅದರ ಕತೆ ಮುಗಿದಿದೆ ಎಂದು ಹೇಳಿದ್ದಾರೆ. ಗೋವಾದಲ್ಲಿ ಹಿಂದೆ ಕೇವಲ ಇಬ್ಬರು ಶಾಸಕರು ಇದ್ದರು. ಆದರೂ ನಾವು ಈಗ 12 ಸ್ಥಾನ ಗೆದ್ದಿದ್ದೇವೆ. ಬಿಜೆಪಿಗೆ 37 % ಮತ ಮಾತ್ರ ಬಿದ್ದಿದೆ. ಆಪ್, ಟಿಎಂಸಿಗೆ ಮತ ವಿಭಜನೆಯಾಗಿ ಈ ಫಲಿತಾಂಶ ಬಂದಿದೆ. ಉತ್ತರ ಪ್ರದೇಶದಲ್ಲಿ ಸೋತಿದ್ದರೂ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಎಲ್ಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ನಾವು ವಿಫಲವಾಗಿರುವುದು ಪಂಜಾಬ್ನಲ್ಲಿ ಮಾತ್ರ. ನಮ್ಮ ಕೆಲವು ಆಂತರಿಕ ವಿಚಾರದಿಂದ ಹಿನ್ನಡೆ ಆಗಿದೆ. ಆದರೆ ನನಗೆ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಾವು ಇಲ್ಲ. ಜೊತೆಗೆ ಬಿಜೆಪಿಯೂ ಇಲ್ಲ. ಯಡಿಯೂರಪ್ಪನವರು, ಸಿಎಂ ಬೊಮ್ಮಾಯಿ ಅವರು, ಜನತಾದಳದವರು ಏನಾದರೂ ಹೇಳಲಿ, ರಾಜ್ಯದ ಜನ ಬದಲಾವಣೆ ನಿರೀಕ್ಷೆ ಮಾಡಿದ್ದು, ಕಾಂಗ್ರೆಸ್ ಸ್ವಂತ ಬಲದ ಮೇಲೆ ನಾವು ಅಧಿಕಾರ ಪಡೆಯುತ್ತೇವೆ ಎಂದು ಹೇಳಿದರು.
50 ಲಕ್ಷ ಸದಸ್ಯತ್ವ ಗುರಿ:
ಈಗಾಗಲೇ 15 ಲಕ್ಷ ಜನ ಪಕ್ಷದ ಸದಸ್ಯರಾಗಿದ್ದು ಎಲ್ಲರೂ ನಿಷ್ಠಾವಂತ ಸದಸ್ಯರಾಗಿದ್ದಾರೆ. ನಮ್ಮ ಗುರಿ 40-50 ಲಕ್ಷ. ಕೆಲವು ಬೂತ್ ಮಟ್ಟದಲ್ಲೇ ಸಾವಿರ ಸದಸ್ಯತ್ವ ಆಗಿದೆ. ಗಂಗಾವತಿಯಲಿ ಈಗಾಗಲೇ 40 ಸಾವಿರ ದಾಟಿದೆ. ನಮ್ಮ ಕಾರ್ಯಕರ್ತರು ಬಹಳ ಪರಿಶ್ರಮದಿಂದ ಸದಸ್ಯತ್ವ ನೋಂದಣಿ ಮಾಡುತ್ತಿದ್ದಾರೆ. ಕಾರ್ಯಕರ್ತರು ಪಕ್ಷ ಸೇರಲು ಇಚ್ಚಿಸಿದರೆ ಅವರನ್ನು ಸೇರಿಸಿಕೊಳ್ಳಲು ಬ್ಲಾಕ್ ಮಟ್ಟದಲ್ಲಿ ಅಧಿಕಾರ ಕೊಟ್ಟಿದ್ದೇನೆ. ಸದಸ್ಯತ್ವ ನೋಂದಣಿ ವಿಚಾರದಲ್ಲಿ ತಾಂತ್ರಿಕ ದೋಷದಿಂದ 4 ಲಕ್ಷದಷ್ಟು ಸದಸ್ಯತ್ವ ಬಾಕಿ ಉಳಿದಿದೆ. ನಮ್ಮ ನೋಂದಾಣಿದಾರರು ಚಿಂತೆ ಮಾಡುವುದು ಬೇಡ. ಸದಸ್ಯತ್ವ ನೋಂದಣಿ ಮುಂದುವರಿಸಿ ಎಂದು ಶಿವಕುಮಾರ್ ತಿಳಿಸಿದರು.











Click it and Unblock the Notifications