ಪ್ರಯಾಣಿಕರೇ ಗಮನಿಸಿ; ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸೂಚನೆ
ಬೆಂಗಳೂರು, ಮೇ 15 : ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಗುರುವಾರ ಬಂದ 20 ಕ್ಕೂ ಅಧಿಕ ಪ್ರಯಾಣಿಕರನ್ನು ವಾಪಸ್ ಕಳಿಸಲಾಗಿದೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ 14 ದಿನಗಳ ಸರ್ಕಾರಿ ಕ್ವಾರಂಟೈನ್ಗೆ ಒಪ್ಪದ ಕಾರಣ ಎಲ್ಲರೂ ದೆಹಲಿಗೆ ವಾಪಸ್ ಆಗಿದ್ದಾರೆ.
Recommended Video
ವಿದೇಶ ಅಥವ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಮೂಲಕ ಆಗಮಿಸಿದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಈ ಬಗ್ಗೆ ಪ್ರಚಾರವನ್ನು ಮಾಡುತ್ತಿದ್ದು, ರೈಲು ಮತ್ತು ವಿಶೇಷ ವಿಮಾನದಲ್ಲಿ ಬರುವ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ನವದೆಹಲಿಯಲ್ಲಿರುವ ಕರ್ನಾಟಕ ಭವನ ದೆಹಲಿಯಿಂದ ಆಗಮಿಸುವ ಪ್ರಯಾಣಿಕರಿಗೆ ಈ ಕುರಿತು ಜಾಗೃತಿ ಮೂಡಿಸುತ್ತಿದೆ. ಬೆಂಗಳೂರಿಗೆ ಹೋಗುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಅನಿವಾರ್ಯವಿದ್ದರೇ ಮಾತ್ರ ಹೋಗಿ. ಕರ್ನಾಟಕಕ್ಕೆ ಹೋದವರು ಕ್ವಾರಂಟೈನ್ಗೆ ಸಹಕರಿಸಿ ಎಂದು ಕರಪತ್ರ ಹಂಚಲಾಗುತ್ತಿದೆ.
ದೆಹಲಿ-ಬೆಂಗಳೂರು ನಡುವೆ ಪ್ರತಿದಿನದ ರೈಲು ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದೆ. ಮಂಗಳವಾರ ದೆಹಲಿಯಿಂದ ಹೊರಟಿದ್ದ ಎಸಿ ಸೂಪರ್ ಫಾಸ್ಟ್ ರೈಲು ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿತ್ತು. 600ಕ್ಕೂ ಅಧಿಕ ಪ್ರಯಾಣಿಕರು ಈ ರೈಲಿನಲ್ಲಿ ಬಂದಿದ್ದರು.

ದಯವಿಟ್ಟು ಗಮನಿಸಿರಿ
ಕರ್ನಾಟಕ ರಾಜ್ಯ ಸರ್ಕಾರದ ಕೋವಿಡ್ -19 ಶಿಷ್ಟಾಚಾರ ನಿಯಮಗಳ ಅನ್ವಯ ಕರ್ನಾಟಕ ರಾಜ್ಯಕ್ಕೆ ಬರುವ ಅಂತರರಾಜ್ಯ ಪ್ರವಾಸಿಗರು, ಸರ್ಕಾರದ ವತಿಯಿಂದ ಒದಗಿಸುವ 14 ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು ಎಂದು ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

14 ದಿನ ಮನೆಗೆ ಹೋಗುವಂತಿಲ್ಲ
ರಾಜ್ಯ ಸರ್ಕಾರದ ವಸತಿ ಗೃಹಗಳಲ್ಲಿ ಉಚಿತವಾಗಿ ಅಥವ ನಿಗದಿತ ಹೋಟೆಲ್ನಲ್ಲಿ ಹಣ ಸಂದಾಯ ಮಾಡುವ ಮೂಲಕ ಕ್ವಾರಂಟೈನ್ ಪೂರೈಸಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಕ್ವಾರಂಟೈನ್ ಹೊಂದಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 14 ದಿನಗಳ ಮುಂಚಿತವಾಗಿ ನಿಮ್ಮ ಮನೆಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗುತ್ತಿದೆ.

ಪ್ರತಿದಿನ ರೈಲು ಸಂಚಾರ
ಲಾಕ್ ಡೌನ್ ಘೋಷಣೆಯಾದ ಬಳಿಕ ದೇಶದಲ್ಲಿ ಪ್ರಯಾಣಿಕ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಆದರೆ, ಮಂಗಳವಾರದಿಂದ ಭಾರತೀಯ ರೈಲ್ವೆ ಬೆಂಗಳೂರು-ದೆಹಲಿ ನಡುವೆ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ. ಪ್ರತಿದಿನ ಎರಡೂ ನಗರಗಳ ನಡುವೆ ರೈಲು ಸಂಚಾರ ನಡೆಸುತ್ತಿದೆ.

ರೈಲಿನ ವೇಳಾಪಟ್ಟಿ
* ಬೆಂಗಳೂರು ನಗರದಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಬೆಂಗಳೂರು-ದೆಹಲಿ ವಿಶೇಷ ಎಸಿ ಸೂಪರ್ ಫಾಸ್ಟ್ ರೈಲು ಹೊರಡಲಿದೆ. ಮೂರನೇ ದಿನ ಬೆಳಗ್ಗೆ 5.55ಕ್ಕೆ ನವದೆಹಲಿಯನ್ನು ತಲುಪಲಿದೆ.
* ನವದೆಹಲಿಯಿಂದ ಪ್ರತಿದಿನ ರಾತ್ರಿ 9.15ಕ್ಕೆ ರೈಲು ಬೆಂಗಳೂರಿಗೆ ಹೊರಡಲಿದೆ. ಮೂರನೇ ದಿನ ಬೆಳಗ್ಗೆ 6.40ಕ್ಕೆ ಬೆಂಗಳೂರನ್ನು ತಲುಪಲಿದೆ.












Click it and Unblock the Notifications