ಬಿಜೆಪಿ ರಾಜ್ಯದಲ್ಲಿ ಧೂಳಿಪಟವಾಗುತ್ತೆ ಎಂದು 2021ರಲ್ಲೇ ಹೇಳಿದ್ದ ದಿಂಗಾಲೇಶ್ವರ ಸ್ವಾಮೀಜಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿರುವ ಬಿಜೆಪಿ ಕೇವಲ 66 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಅದರಲ್ಲೂ ಪ್ರಮುಖ ಸಚಿವರು ಕೂಡ ಸೋಲನುಭವಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರೆ, ಇನ್ನೂ ಕೆಲವು ಬಿಜೆಪಿ ಎಂದಿದ್ದರು.
ಬಿಜೆಪಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು 2021ರಲ್ಲೇ ದಿಂಗಾಲೇಶ್ವರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇಂದು ಅವರ ಮಾತು ನಿಜವಾಗಿದೆ. ಅಷ್ಟಕ್ಕೂ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದು ಭವಿಷ್ಯವಲ್ಲ, ಬದಲಾಗಿ ಬಿಜೆಪಿಯ ನಡವಳಿಕೆಗೆ ಮುಂದಿನ ಜನ ಪಾಠ ಕಲಿಸುತ್ತಾರೆ ಎಂದು ಹೇಳಿದ್ದರು.

2021ರಲ್ಲಿ ಬಿಎಸ್ ಯಡಿಯೂರಪ್ಪನವರನ್ನು ಬಿಜೆಪಿ ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಆಕ್ರೋಶಗೊಂಡಿದ್ದ ದಿಂಗಾಲೇಶ್ವರ ಶ್ರೀಗಳು ಬಿಜೆಪಿಗೆ ಎಚ್ಚರಿಕೆ ನೀಡಿದ್ದರು. ರಾಜ್ಯದಲ್ಲಿ ಬಿಜೆಪಿಗೆ ನೆಲೆ ಸಿಕ್ಕಿದೆ ಎಂದರೆ ಅದಕ್ಕೆ ಬಿಎಸ್ವೈ ಪ್ರಮುಖ ಕಾರಣ, ಅಂತಹ ವ್ಯಕ್ತಿಯ ಕಣ್ಣಲ್ಲಿ ನೀರಾಕಿಸಿದ್ದೀರಾ, ಮುಂದಿನ ಚುನಾವಣೆಯಲ್ಲಿ ಬಿಎಸ್ವೈ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಹೇಳಿದ್ದರು.
ಮತ್ತೆ ನೆನಪು ಮಾಡಿಕೊಂಡ ದಿಂಗಾಲೇಶ್ವರ ಶ್ರೀ
ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಾತನಾಡಿರುವ ಅವರು, "ಬಿಎಸ್ವೈ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಹೋಗಲಿದೆ ಎಂದು ಅವತ್ತೇ ಹೇಳಿದ್ದೆ. ಇಂದು ಅದು ಪಕ್ಷದ ನಾಯಕರಿಗೆ ಅರ್ಥವಾಗಿದೆ. ಅಧಿಕಾರ ಬಂದಾಗ ನಿರ್ಲಕ್ಷ್ಯ ಮಾಡಿದ್ರೆ ಹೊಡೆತ ತಿನ್ನುವುದು ಸ್ಪಷ್ಟ. ನಾನು ಒಬ್ಬ ವ್ಯಕ್ತಿಯ ಪರವಾಗಿ ಮಾತನಾಡಿರಲಿಲ್ಲ. ಬಿಎಸ್ ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕ, ಎಲ್ಲಾ ಸಮಾಜದ ನಾಯಕರು ಕೂಡ ಅವರಿಗೆ ಬೆಂಬಲ ನೀಡಿದ್ದರು" ಎಂದು ಹೇಳಿದರು.
"ಇಷ್ಟೆಲ್ಲಾ ಆದಮೇಲೂ ಬಿಜೆಪಿ ನಾಯಕರು ಬುದ್ದಿ ಕಲಿಯಲಿಲ್ಲ, ಕೆಟ್ಟ ಉದ್ದೇಶ, ಸ್ವಾರ್ಥದಿಂದ ತೆಗೆದುಕೊಂಡ ನಿರ್ಧಾರಗಳೇ ಅವರ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಿಳಿದ್ದಕ್ಕೆ ಇಂದು ಸರಿಯಾಗಿ ಅನುಭವಿಸಿದ್ದಾರೆ. ಈ ಸೋಲಿಗೆ ಇದೇ ಮುಖ್ಯ ಕಾರಣ" ಎಂದು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು
ಕಳೆದ ವರ್ಷ ದಿಂಗಾಲೇಶ್ವರ ಶ್ರೀಗಳು ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಮಢಠಗಳಿಗೆ ಹಣ ಬಿಡುಗಡೆ ಮಾಡಲು ಕೂಡ 30% ಕಮಿಷನ್ ನೀಡಬೇಕು ಎಂದು ಹೇಳುವ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದರು. ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬೆನ್ನಲ್ಲೇ ದಿಂಗಾಲೇಶ್ವರ ಶ್ರೀಗಳು ಈ ಆರೋಪ ಮಾಡಿದ್ದರು.












Click it and Unblock the Notifications