ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ದಿನೇಶ್ ಮಹೇಶ್ವರಿ
ಬೆಂಗಳೂರು, ಫೆಬ್ರವರಿ 02 : ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ಇವರು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜನವರಿ 10ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ 5 ಸದಸ್ಯರ ಕೊಲಿಜಿಯಂ ದಿನೇಶ್ ಮಹೇಶ್ವರಿ ಅವರನ್ನು ನೇಮಕ ಮಾಡಲು ತೀರ್ಮಾನಿಸಿತ್ತು, ಈಗ ಕೇಂದ್ರ ಸರ್ಕಾರಕ್ಕೆ ಹೆಸರನ್ನು ಶಿಫಾರಸು ಮಾಡಲಾಗಿದೆ.
ರಾಜಸ್ಥಾನ ಮೂಲದ ದಿನೇಶ್ ಮಹೇಶ್ವರಿ ಅವರು 2016ರ ಫೆಬ್ರವರಿ 24ರಿಂದ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2017ರ ಅಕ್ಟೋಬರ್ನಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನಿವೃತ್ತರಾಗಿದ್ದರು. ನಂತರ ಎಚ್.ಜಿ.ರಮೇಶ್ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು.
ದಿನೇಶ್ ಮಹೇಶ್ವರಿ ಅವರು ಸೇವಾ ಹಿರಿತನದಲ್ಲಿ ಎಚ್.ಜಿ.ರಮೇಶ್ ಅವರಿಗಿಂತ ಕಿರಿಯರು. ಆದರೆ, ಹಿಂದೆ ಎಚ್.ಜಿ.ರಮೇಶ್ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ನಿರಾಕರಿಸಿದ್ದರು. ಆದ್ದರಿಂದ, ದಿನೇಶ್ ಮಹೇಶ್ವರಿ ಅವರ ಹೆಸರು ಶಿಫಾರಸು ಮಾಡಲಾಗಿದೆ.












Click it and Unblock the Notifications