ಭೂ ಕಬಳಿಕೆ, ದಿನೇಶ್ ಗುಂಡೂರಾವ್ ಸ್ಪಷ್ಟನೆಗಳು
ಬೆಂಗಳೂರು, ನ. 15 : 'ನಾನು ಯಾವುದೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ, ಆದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಎಸ್.ಆರ್.ಹಿರೇಮಠ್ ಅವರು ಮಾಧ್ಯಮಗಳಲ್ಲಿ ಹೀರೋ ಆಗಲು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ನನ್ನ ತೇಜೋವಧೆಗಾಗಿ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ, ಯಲಹಂಕ ಜಾಲಾ ಹೋಬಳಿಯ ನವರತ್ನ ಗ್ರಾಮದ ಸರ್ವೆ ನಂ. 3 ಮತ್ತು 13ರ 56 ಎಕರೆ ಇನಾಂ ಭೂಮಿಯನ್ನು 1983ರಲ್ಲೇ ಖರೀದಿಸಲಾಗಿದೆ ಎಂದರು.

ಅಂದಿನ ಜಿಲ್ಲಾಧಿಕಾರಿಗಳು ನಾಗರಾಜ್ ಎಂಬುವವರಿಗೆ ಈ ಭೂಮಿಯನ್ನು ಮಂಜೂರು ಮಾಡಿದ್ದರು. ನಾಗರಾಜ್ ಅವರಿಂದ ನಾವು ಖರೀದಿಸಿದ್ದೇವೆ. ಹಾಗಾಗಿ ಇಲ್ಲಿ ಅಕ್ರಮ ನಡೆದಿಲ್ಲ. 1993ರಲ್ಲಿ ನಮ್ಮ ತಂದೆಯವರ ಮರಣಾನಂತರ ಈ ಭೂಮಿ ಸಹಜವಾಗಿಯೇ ಸಹೋದರರಿಗೆ ಬಂತು. 1983ರಲ್ಲಿ ಇದ್ದ ಚಕ್ಕುಬಂದಿ ಕೂಡ ಹಾಗೇ ಇದೆ ಎಂದು ಸಚಿವರು ಸ್ಪಷ್ಟಪಡಿಸಿದರು. [ದಿನೇಶ್ ಗುಂಡೂರಾವ್ ಕೊರಳಿಗೆ ಭೂ ಕಂಟಕ]
2006ರಲ್ಲಿ ಎ.ಟಿ.ರಾಮಸ್ವಾಮಿ ಸಮಿತಿ 65 ಎಕರೆ ಒತ್ತುವರಿ ಆಗಿದೆ ಎಂದು ಹೇಳಿದೆ. ಭೂಮಿ ಇರುವುದೇ 56 ಎಕರೆ ಆದ್ದರಿಂದ ಈ ವರದಿ ಸತ್ಯವಲ್ಲ ಎಂದು ಸಚಿವರು ಹೇಳಿದರು. ಬಿಜೆಪಿ ದುರುದ್ದೇಶ ಪೂರ್ವಕವಾಗಿ ಈ ಆರೋಪ ಮಾಡುತ್ತಿದೆ. ಇದರಿಂದ ಯಾರಿಗೂ ಲಾಭವಿಲ್ಲ ಎಂದರು. [ದಿನೇಶ್ ಗುಂಡೂರಾವ್ ರಾಜೀನಾಮೆಗೆ ಬಿಜೆಪಿ ಪಟ್ಟು]
ಮಾಧ್ಯಮಗಳಲ್ಲಿ ಹೀರೋ ಆಗುತ್ತಾರೆ : ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮಾಧ್ಯಮಗಳಲ್ಲಿ ಹೀರೋ ಆಗಲು ಅವರು ಆರೋಪ ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.












Click it and Unblock the Notifications