ಸಿದ್ದರಾಮಯ್ಯ ಹಾದಿ ಹಿಡಿದ ದಿನೇಶ್ ಗುಂಡೂರಾವ್, ಅಧ್ಯಕ್ಷಗಿರಿಗೆ ರಾಜೀನಾಮೆ
ಬೆಂಗಳೂರು, ಡಿಸೆಂಬರ್ 09: ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನದ ನೈತಿಕ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಈ ಉಪಚುನಾವಣೆ ಪೂರ್ಣವಾಗಿ ನನ್ನ ಜವಾಬ್ದಾರಿಯಲ್ಲಿಯೇ ನಡೆಯಿತು. ಚುನಾವಣೆಯಲ್ಲಿ ವೈಫಲ್ಯ ಅನುಭವಿಸಿರುವ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಮೈತ್ರಿ ಆಧಾರದಲ್ಲಿ ಚುನಾವಣೆ ಎದುರಿಸಿದ್ದ ಕಾರಣ ಸೋಲಿಗೆ ಕಾರಣಗಳು, ಚುನಾವಣೆಯ ಜವಾಬ್ದಾರಿ ಹಂಚಿಕೆ ಆಗಿತ್ತು ಹಾಗಾಗಿ ಆಗ ರಾಜೀನಾಮೆ ನಿರ್ಣಯ ತೆಗೆದುಕೊಂಡಿರಲಿಲ್ಲ ಎಂದರು.
ಆದರೆ ಈ ಉಪಚುನಾವಣೆ ಪೂರ್ಣವಾಗಿ ನನ್ನ ನೇತೃತ್ವದಲ್ಲಿಯೇ ನಡೆಯಿತು. ಎಐಸಿಸಿಯು ಉಪಚುನಾವಣೆ ವಿಷಯವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ನನಗೆ ನೀಡಿತ್ತು. ಚುನಾವಣೆಗೆ ಸಂಬಂಧಿಸಿದ ಬಹುತೇಕ ನಿರ್ಣಯ ನ್ನದೇ ಆಗಿದ್ದವು. ಹಾಗಾಗಿ ಈ ಸೋಲಿನ ನೈತಿಕ ಜವಾಬ್ದಾರಿ ನನ್ನ ಮೇಲೆಯೇ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮೈತ್ರಿ ಸರ್ಕಾರ ರಚನೆ ಆದಾಗ ರಾಹುಲ್ ಗಾಂಧಿ ಅವರು ಈ ಜವಾಬ್ದಾರಿಯನ್ನು ನನಗೆ ನೀಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಹಲವಾ ಸವಾಲುಗಳು ಎದುರಾದರೂ ನಿಷ್ಠೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಾ ಬಂದಿದ್ದೆ, ಈಗ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಂದಿನ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, 'ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ಪಕ್ಷಾಂತರಿಗಳಿಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಆಗುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಹಾಗೆ ಆಗಿಲ್ಲ' ಎಂದು ಹೇಳಿದರು.
ಕೆಲವು ನಿಮಿಷಗಳ ಮುಂಚೆ ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಬೆಂಬಲಿಗರೇ ಆಗಿರುವ ದಿನೇಶ್ ಗುಂಡೂರಾವ್ ಸಹ ರಾಜೀನಾಮೆ ನೀಡಿದ್ದಾರೆ.












Click it and Unblock the Notifications