ಇಷ್ಟ ಇದ್ರೆ ಕೆಲಸ ಮಾಡಿ, ಇಲ್ದಿದ್ರೆ ಜಾಗ ಖಾಲಿಮಾಡಿ-ಡಿಗ್ಗಿ
ಬೆಂಗಳೂರು, ಮೇ 14 : " ಸಚಿವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಕರ್ನಾಟಕ ಜನತೆಗೆ ಬಂದುಬಿಟ್ಟಿದೆ. ಈ ಅನುಮಾನಕ್ಕೆ ನಿಮ್ಮ ಕಾರ್ಯವೈಖರಿಯೇ ಕಾರಣ. ಪರಿಸ್ಥಿತಿ ಹೀಗೇ ಮುಂದುವರೆದರೆ ಜೋಕೆ! ನೀವುಗಳು ಸಚಿವ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಸರಿಯಾಗಿ ಕೆಲಸ ಮಾಡಿ, ಇಲ್ಲದೆ ಇದ್ದರೆ ಜಾಗ ಖಾಲಿ ಮಾಡಿ"
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಬುಧವಾರ ನೀಡಿದ ಎಚ್ಚರಿಕೆಯ ವರಸೆ ಹೀಗಿತ್ತು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಇಂದು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಚಿವರ ಕಾರ್ಯವೈಖರಿಯನ್ನು ಡಿಗ್ಗಿ ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ಎಐಸಿಸಿ ಪರವಾಗಿ ಸೆಲ್ವ ಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಒಂದು ವರ್ಷದ ಸರ್ಕಾರದ ಸಾಧನೆ ಕುರಿತು ಪರಾಮರ್ಶೆ ನಡೆಸಿದ ದಿಗ್ವಿಜಯ್ ಸಿಂಗ್, ಕೆಲವು ಸಚಿವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಜನರು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬಂಗಲೆ ನವೀಕರಣ ಮತ್ತು ಆಂಜನೇಯ ಅವರು ವಿಧಾನಸೌಧ ಗೋಡೆ ಒಡೆದ ಪ್ರಕರಣಗಳನ್ನು ಸಭೆಯಲ್ಲಿ ಸಿಂಗ್ ಪ್ರಸ್ತಾಪಿಸಿದರು.[ಸಿದ್ದರಾಮಯ್ಯ ಸರ್ಕಾರದ 10 ವಿವಾದಗಳು]
ಎಚ್.ಸಿ.ಮಹದೇವಪ್ಪ ಅವರ ಕಾರ್ಯ ವೈಖರಿ ಕುರಿತು ಮಾತನಾಡಿದ ದಿಗ್ವಿಜಯ್ ಸಿಂಗ್, ಟೋಲ್ ವಿವಾದ ಪರಿಹರಿಸುವಲ್ಲಿ ಸಚಿವರು ವಿಫಲವಾಗಿದ್ದಾರೆ ಎಂದರು. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿಯೂ ಸಚಿವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ ಸಿಂಗ್, ಎಲ್ಲಾ ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಬಳಿ ವರದಿ ಇದೆ ಎಂದು ತಿಳಿಸಿದರು. [ಸಂಪುಟ ವಿಸ್ತರಣೆಗೆ ದಿಗ್ವಿಜಯ್ ಸರ್ಟಿಫಿಕೇಟ್]
ಸರ್ಕಾರ ಅಸ್ತಿತ್ವಕ್ಕೆ ಬಂದರು 1 ವರ್ಷವಾದರೂ ಸಚಿವರ ಸಾಧನೆ ಶೇ.20 ರಷ್ಟು ದಾಟಿಲ್ಲ. ಸಚಿವ ಸ್ಥಾನದಲ್ಲಿ ಮುಂದುವರಿಯಬೇಕಾದರೆ ಸರಿಯಾಗಿ ಕೆಲಸ ಮಾಡಿ ಎಂದು ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದಾರೆ. ಸರಿಯಾಗಿ ಕೆಲಸ ಮಾಡದ ಸಚಿವರ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮೇ 16ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಇಂದಿನ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು
* ವರ್ಗಾವಣೆ ವಿಚಾರದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯಕ್ಕೆ ಮಾನ್ಯತೆ ನೀಡಬೇಕು.
* ಗೋಡೆ ಒಡೆಯುವುದು, ದುಂದು ವೆಚ್ಚ ಮುಂತಾದ ವಿವಾದಗಳು ಮತ್ತೊಮ್ಮೆ ಕೇಳಿಬರಬಾರದು.
* ಸಚಿವರು ತಮ್ಮ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೆ, ರಾಜ್ಯ ಪ್ರವಾಸ ಮಾಡಬೇಕು.
* ಸರ್ಕಾರದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಹಿರಿಯ ನಾಯಕರ ಸಲಹೆ ಕೇಳಬೇಕು.
* ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಅವರಿಗೆ ವಹಿಸುವುದು.











Click it and Unblock the Notifications