ಡಿಜಿಟಲ್ ಕ್ರೈಮ್ ಗಳನ್ನು ನಿಯಂತ್ರಿಸುವ ಅಗತ್ಯವಿದೆ : ಬಸವರಾಜ ಬೊಮ್ಮಾಯಿ
ವಿದೇಶದಲ್ಲಿರುವಂತೆ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 180 ಕ್ಕೂ ಹೆಚ್ಚು ಸ್ಪೆಷಲ್ ಆಫೀಸರ್ ಆನ್ ಕ್ರೈಂ ಸೀನ್ ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ 52 ಎಫ್ಎಸ್ಎಲ್ ವಿಜ್ಞಾನಿಗಳಿಗೆ ತರಬೇತಿ ಕೊಟ್ಟು ನೇಮಕ ಮಾಡಿಕೊಳ್ಳಲಾಗಿದೆ. ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡ, ಜನವರಿ28: ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆ ಅಪರಾಧಿಗಳು ಸಹ ತಂತ್ರಜ್ಞಾನ ಬಳಸುತ್ತಿದ್ದಾರೆ. 10 ವರ್ಷದ ಸೈಬರ್ ಕ್ರೈಂ ಬಗ್ಗೆ ಕೇಳಿರಲಿಲ್ಲ. ಈಗ ಅದರ ಬಗ್ಗೆಯೇ ಕಾನೂನು ಸಹ ಬಂದಿದೆ. ಹೊಸ ರೀತಿಯ ಅಪರಾಧಗಳ ಕಡಿವಾಣ ಹಾಕಬೇಕಾದ್ರೆ ನಮ್ಮ ತಂತ್ರಜ್ಞಾನ ಮುಂದಿರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಧಾರವಾಡದಲ್ಲಿ ನಡೆದ ಕರ್ನಾಟಕ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ರೀತಿಯ ಅಪರಾಧಗಳಾದ ಸೈಬರ್ ಕ್ರೈಮ್, ಡಿಜಿಟಲ್ ಕ್ರೈಮ್, ನಾರ್ಕೋಟಿಕ್ಸ್ ಗಳನ್ನು ನಿಯಂತ್ರಿಸುವ ಅಗತ್ಯವಿದೆ. ಕ್ರೈಮ್ ಲೀಡ್ಸ್ ದಿ ಲಾ ಅಂತ ಮಾತಿತ್ತು. ಈಗ ಕಾನೂನು ಮತ್ತು ತಂತ್ರಜ್ಞಾನ ಅಪರಾಧಗಳನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ ಮುಖ್ಯವಾಗಿದೆ.
ಹಿಂದೆಲ್ಲಾ ಎಫ್ಎಸ್ಎಲ್ನಿಂದ ವರದಿಗಳು ಬರಲು ವರ್ಷಗಳು ಆಗುತ್ತಿದ್ದವು. ಈ ಸಮಯದಲ್ಲಿ ಅಪರಾಧಿಗಳು ತಲೆಮರೆಸಿಕೊಳ್ಳುತ್ತಿದ್ದರು. ಇದಕ್ಕಾಗಿ ನಾನು ಗೃಹ ಸಚಿವನಿದ್ದಾಗ 2 ಪ್ರಾದೇಶಿಕ ಎಫ್ಎಸ್ಎಲ್ ಕೇಂದ್ರಗಳನ್ನು ಕೊಟ್ಟಿದ್ದೇವೆ. ಜತೆಗೆಬೆಂಗಳೂರಿನ ಎಫ್ಎಸ್ಎಲ್ ಪ್ರಯೋಗಾಲಯವನ್ನು 30 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಿದ್ದೆವು. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸರು ಅತ್ಯಾಧುನಿಕ ಎಫ್ಎಸ್ಎಲ್ ಲ್ಯಾಬ್ ಪಡೆದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವಿದೇಶದಲ್ಲಿರುವಂತೆ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 180 ಕ್ಕೂ ಹೆಚ್ಚು ಸ್ಪೆಷಲ್ ಆಫೀಸರ್ ಆನ್ ಕ್ರೈಂ ಸೀನ್ ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ 52 ಎಫ್ಎಸ್ಎಲ್ ವಿಜ್ಞಾನಿಗಳಿಗೆ ತರಬೇತಿ ಕೊಟ್ಟು ನೇಮಕ ಮಾಡಿಕೊಳ್ಳಲಾಗಿದೆ. ಅದೆಲ್ಲಕ್ಕೂ ಕಿರೀಟ ಪ್ರಾಯವಾಗಿರುವಂತೆ ಇಂದು ಎಫ್ಎಸ್ಎಲ್ ವಿವಿ ಕರ್ನಾಟಕಕ್ಕೆ ಬಂದಿದೆ. ಅಮಿತ್ ಶಾ ಅವರಿಗೆ ಕರ್ನಾಟಕದ ಮೇಲಿನ ಪ್ರೀತಿಗೆ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿ ರಾಜ್ಯಕ್ಕೆ ಬಂದ್ರೆ, ಧಾರವಾಡದಲ್ಲಿ ನೆಲೆಗೊಳ್ಳಲು ಪ್ರಲ್ಹಾದ್ ಜೋಶಿ ಅವರ ಶ್ರಮ ಮಹತ್ವದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿವಿ ಕರ್ನಾಟಕಕ್ಕೆ ಬಂದಿದ್ದರೂ ಕೂಡ ಇದರ ಸೇವೆ ಎಲ್ಲಾ ರಾಜ್ಯಗಳಿಗೂ ಸಿಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡದಲ್ಲಿ ಸ್ಥಾಪನೆ ಆಗಿರುವುದು ನಮಗೆ ಸಂತಸವಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಉದ್ಯೋಗ ಸಿಗಲು ಅಮಿತ್ ಶಾ ಕಾರಣವಾಗಿದ್ದಾರೆ. ಇದಕ್ಕೆ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮತ್ತೋರ್ವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಉಪಕುಲಪತಿಗಳಾದ ಜಿ ಎಂ ವ್ಯಾಸ್, ಶಾಸಕರಾದ ಅರವಿಂದ್ ಬೆಲ್ಲದ್, ಅಮೃತ್ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.