ರಾಜ್ಯದ ಏಕೈಕ ಧನ್ವಂತರಿ ನಾರಾಯಣ ದೇಗುಲದಲ್ಲಿ ನ.14ರಿಂದ 16ರವರೆಗೆ ಯಾಗ
ಬೆಂಗಳೂರು, ನವೆಂಬರ್ 9: ಇದೇ ತಿಂಗಳ 14ರಿಂದ 16ರವರೆಗೆ ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲ್ಲೂಕು, ಖರ್ವಾ ಪೋಸ್ಟ್ ವ್ಯಾಪ್ತಿಯ, ಯಲಗುಪ್ಪಾದಲ್ಲಿ 23ನೇ ವರ್ಷದ ಧನ್ವಂತರೀ ಪುರಶ್ಚರಣ ಮಹಾಯಾಗ, ಧನ್ವಂತರೀ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ.
ಧನ್ವಂತರೀ ಪುರಶ್ಚರಣ ಮಹಾಯಾಗ ಮಹೋತ್ಸವ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ನವೆಂಬರ್ 14ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬೆಳಗ್ಗೆ 11ಕ್ಕೆ ನೂತನ ಶೌಚಾಲಯಗಳ ಉದ್ಘಾಟನೆ ಇದೆ. ಆ ನಂತರ 'ಮಹಾಮಹಿಮ ಶ್ರೀ ಧನ್ವಂತರೀ' ಪುಸ್ತಕ ಲೋಕಾರ್ಪಣೆ ಇದೆ. ಮಧಾಹ್ನ 1ಕ್ಕೆ ತೀರ್ಥ-ಪ್ರಸಾದ ವಿತರಣೆ ಇದೆ.

ಅಂದು ಸಂಜೆ ಆರರಿಂದ ಒಂಬತ್ತು ಗಂಟೆವರೆಗೆ ಕೀರ್ತನೆ ಕಾರ್ಯಕ್ರಮವಿದೆ. ರಾತ್ರಿ ಒಂಬತ್ತು ಗಂಟೆಗೆ ತೀರ್ಥ-ಪ್ರಸಾದ ವಿತರಣೆ ಇದೆ.
ಮರುದಿನ ಅಂದರೆ, ನವೆಂಬರ್ 15ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಇದೆ. ಸಂಜೆ ಐದರಿಂದ ಆರರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6ರಿಂದ 8.30ರವರೆಗೆ ಸಂಗೀತ ಸಂಧ್ಯಾ ಕಾರ್ಯಕ್ರಮ ಇದೆ. ರಾತ್ರಿ 8.30ಕ್ಕೆ ದೀಪೋತ್ಸವ, ರಾಜೋಪಚಾರ ಪೂಜೆ, ಮಂಗಳಾರತಿ ಇದೆ.
ನವೆಂಬರ್ 16ರಂದು ಬೆಳಗ್ಗೆ 10ರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಮಧ್ಯಾಹ್ನ 3ಕ್ಕೆ ವೈದಿಕ ಸಂಭಾವನೆ, ಆಶೀರ್ವಚನ- ಮಂತ್ರಾಕ್ಷತೆ, 3.30ಕ್ಕೆ ವೈದ್ಯರ ಸಮಾವೇಶ, ಸಂಜೆ 6ಕ್ಕೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.












Click it and Unblock the Notifications