ಬಿಎಸ್ವೈ ಸರ್ಕಾರದ ಪೂರ್ಣಾವಧಿ ಬಗ್ಗೆ ದೇವೇಗೌಡರ ಮಾತು
Recommended Video
ಬೆಂಗಳೂರು, ಫೆಬ್ರವರಿ 17: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪೂರ್ಣಾವಧಿ ಮುಗಿಸಲಿದೆ ಆದರೆ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ. ಇದು ಸಮಸ್ಯೆಗ ಕಾರಣವಾಗಬಹುದು ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಕಿಡಿಕಾರಿದ್ದಾರೆ.
ಎಚ್ಡಿ ಕುಮಾರಸ್ವಾಮಿ ಅವಧಿಯಲ್ಲಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಈ ಸರ್ಕಾರ ರದ್ದುಪಡಿಸಿದೆ. ಇದರ ವಿರುದ್ಧ ವಿಧಾನ ಸೌಧದ ಒಳಗೆ ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಎಸ್ವೈ ಸರ್ಕಾರ ಮೂರು ವರ್ಷ ಮುಂದುವರೆಯಲು ಅಭ್ಯಂತರವಿಲ್ಲ
ಬಿಎಸ್ವೈ ಸರ್ಕಾರ ಮೂರು ವರ್ಷ ಮುಂದುವರೆಯಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಾ , ಜೆಡಿಎಸ್ ನವರಿಗೆ ಅನುದಾನ ನೀಡಲಾಗುತ್ತಿಲ್ಲ. ಪೊಲೀಸರನ್ನು ಬಳಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಯಾದಗಿರಿಯಲ್ಲಿ ಜೆಡಿಎಸ್ ಜಿಪಂ ಸದಸ್ಯನಿಗೆ ಪಿಸ್ತೂಲ್ ತೋರಿಸಿ ಹೆದರಿಸಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಬಗ್ಗೆ ಸಿಂಪಥಿ ಇದ್ದಿದ್ದು ನಿಜ
ಕಾಂಗ್ರೆಸ್ ಜೊತೆ ಮೈತ್ರಿಗೆ ಮೊದಲು ಇಷ್ಟವಿರಲಿಲ್ಲ, ಬಳಿಕ ಕಾಂಗ್ರೆಸ್ ನೇರವಾಗಿ ಮಾತನಾಡಿದಾಗ ಒಪ್ಪಬೇಕಾಯಿತು. ನನಗೆ ಕಾಂಗ್ರೆಸ್ ಬಗ್ಗೆ ಈ ಹಿಂದೆ ಸಿಂಪಥಿ ಇದ್ದಿದ್ದು ನಿಜ. ಹೀಗಾಗಿ ಸರ್ಕಾರ ರಚನೆಗೆ ಒಪ್ಪಿಕೊಂಡೆ ಎಂದು ಹೇಳಿದರು.

ಸತ್ಯ ಬೇಕಾದರೆ ಮುಂಬೈಗೆ ಹೋದವರನ್ನು ಕೇಳಿ
ಅಸಮಾಧಾನ , ಅನುದಾನ ತಾರತಮ್ಯ ನೆಪ ಹೇಳಿ 15 ಮಂದಿ ಶಾಸಕರು ಮುಂಬೈಗೆ ಹೋದರು. ಅವರನ್ನು ಕೇಳಿದರೂ ಸರ್ಕಾರ ಪತನಕ್ಕೆ ಕಾರಣ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.

ಯುವಕರು ಚಿತಾವಣೆಗೆ ಒಳಗಾಗಬಾರದು
ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸ ಯುವಕರು ಯಾವುದೇ ಚಿತಾವಣೆಗೆ ಒಳಗಾಗಿ ವಿಕೃತ ಭಾವನೆಗಳಿಗೆ ಆಸ್ಪದ ನೀಡಬಾರದು. ನಾವೆಲ್ಲರೂ ಭಾರತೀಯರು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಬುದ್ಧಿಮಾತು ಹೇಳಿದರು. ನಾನು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತಡೆ ಹಿಡಿಯುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications