ಬಿಎಸ್ವೈ ಅವರೇ , ನಾವೇನು ಕಡುಬು ತಿಂತಾ ಇರ್ತೀವಾ: ದೇವೇಗೌಡ
ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯ ಸುತ್ತುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ರಾಜ್ಯ ಕಾಂಗ್ರೆಸ್ ನಲ್ಲಿನ ಭಿನ್ನಮತದ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಎಂದಿನಂತೆ ವ್ಯಂಗ್ಯವಾಡಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮತ್ತು ಮಾಧ್ಯಮಗಳ ಮುಂದೆ ಯಡಿಯೂರಪ್ಪನವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎನ್ನುತ್ತಿದ್ದಾರೆ. ನಾವೇನು ಕಡುಬು ತಿಂತಾ ಇರ್ತೀವಾ ಸ್ವಾಮಿ ಯಡಿಯೂರಪ್ಪನವರೇ ಎಂದು ಗೌಡ್ರು ಲೇವಡಿ ಮಾಡಿದ್ದಾರೆ. (ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಆರಂಭ)
ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿರುವುದು ಹೌದು. ಹಾಗಂತ, ಅವರೆಲ್ಲರೂ ಜೆಡಿಎಸ್ ಸೇರಲಿದ್ದಾರೆಂದು ವರದಿಯಾಗಿದ್ದರೆ ಅದೊಂದು ವದಂತಿ ಎಂದು ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.
ಕಾಂಗ್ರೆಸ್ಸಿನ ಇಂದಿನ ಪರಿಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ಅವರು ಯಾರನ್ನೂ ನಂಬದೇ ಇರುವುದೇ ಬಹುದೊಡ್ದ ಸಮಸ್ಯೆ ಎಂದು ಗೌಡ್ರು, ಸಿಎಂ ಸಿದ್ದರಾಮಯ್ಯ ವಿರುದ್ದ ಮಾತಿನ ಚಟಾಕಿ ಬೀಸಿದ್ದಾರೆ.
ಬೆಳಗಾವಿ ಜಿಲ್ಲಾ ಪ್ರವಾಸ ಮುಗಿಸಿ ಹುಬ್ಬಳ್ಳಿಯಲ್ಲಿ ಶುಕ್ರವಾರ (ಜೂ 24) ಮಾತನಾಡುತ್ತಿದ್ದ ಗೌಡ್ರು, ನನಗೆ ಪಕ್ಷ ಹೇಗೆ ಕಟ್ಟಬೇಕು, ಹೇಗೆ ಬೆಳೆಸಬೇಕು ಎನ್ನುವುದು ಗೊತ್ತಿದೆ. ಸೋಲು, ಗೆಲುವು ಎರಡನ್ನೂ ಈ ದೇವೇಗೌಡ ಸಮಾನವಾಗಿ ಕಂಡಿರುವವನು ಎಂದು ಹೇಳಿದ್ದಾರೆ. (ರಮ್ಯಾರನ್ನು ಸಂಸತ್ತಿನಲ್ಲಿ ನೋಡಲು ಬಯಸುತ್ತೇವೆ)
ಸಿದ್ದು ವಿರುದ್ದ ವಾಚ್ ನಂತರ 'ಕಾರ್' ಬಾಂಬ್ ಸಿಡಿಸಿದ ದೇವೇಗೌಡ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಯಾರನ್ನೂ ನಂಬಿ ಪಕ್ಷ ಕಟ್ಟಿಲ್ಲ
ಜೆಡಿಎಸ್ ಭಿನ್ನಮತೀಯರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇನೆ. ನನಗೆ ಪಕ್ಷ ಹೇಗೆ ಕಟ್ಟುವುದು ಎನ್ನುವುದು ಗೊತ್ತಿದೆ. ಯಾರನ್ನೂ ನಂಬಿ ಜೆಡಿಎಸ್ ಪಕ್ಷವನ್ನು ಸ್ಥಾಪಿಸಿಲ್ಲ ಎಂದು ಗೌಡ್ರು ಹೇಳಿದ್ದಾರೆ. ಬೈಲಹೊಂಗಲದಿಂದ ಹುಬ್ಬಳ್ಳಿಗೆ ರಸ್ತೆ ಮೂಲಕ ಬಂದು ಗೌಡ್ರು ಈ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ
ರಾಜ್ಯಾಧ್ಯಕ್ಷರಾದ ಹುಮ್ಮಸ್ಸಿನಲ್ಲಿರುವ ಯಡಿಯೂರಪ್ಪನವರು ರಾಜ್ಯದಲ್ಲಿ 150 ಸ್ಥಾನವನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎನ್ನುವ ಮಾತನ್ನಾಡುತ್ತಿದ್ದಾರೆ. ನಮಗೂ ರಾಜಕೀಯ ಅಂದರೆ ಏನೂಂತ ಗೊತ್ತು, ನಾವೇನೂ ಕಡುಬು ತಿಂದು ಕೊಂಡಿರುವುದಿಲ್ಲ ಎಂದು ಗೌಡ್ರು, ಬಿಎಸ್ವೈಗೆ ಟಾಂಗ್ ನೀಡಿದ್ದಾರೆ.
ಬಸವರಾಜ್ ಹೊರಟ್ಟಿ
ಶ್ರೀನಿವಾಸ ಪ್ರಸಾದ್ ಅವರ ಬಳಿ ಮಾತುಕತೆ ನಡೆಸಿದ್ದೇನೆ. ಇನ್ನು ಕೆಲವು ದಿನಗಳಲ್ಲಿ ಮತ್ತೆ ಮೈಸೂರಿನಲ್ಲಿ ಅವರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಬಸವರಾಜ್ ಹೊರಟ್ಟಿಯವರ ಹೆಸರನ್ನು ಕಾಂಗ್ರೆಸ್ ಮತ್ತು ಬಿಜೆಪಿಯ ಬೆಂಬಲವಿದ್ದರೆ ಸಭಾಧ್ಯಕ್ಷ ಸ್ಥಾನಕ್ಕೆ ಸೂಚಿಸಲು ಬಯಸುತ್ತೇನೆ - ದೇವೇಗೌಡ.
ಸತೀಶ್ ಜಾರಕಿಹೊಳೆ
ಸಿದ್ದರಾಮಯ್ಯನವರು ರಾಜಕೀಯದಲ್ಲಿ ಈ ಹಂತಕ್ಕೆ ಬರಲು ಸತೀಶ್ ಜಾರಕಿಹೊಳೆಯವರ ಬೆಂಬಲವೂ ಕಾರಣ. ಎಸ್ಟಿ ಸಮುದಾಯದ ಜಾರಕಿಹೊಳೆಯವರು ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಹಣದ ಸಹಾಯ ಮಾಡಿದವರು. ಅದಲ್ಲದೇ, ಸಿಎಂಗೆ, ಅವರ ಪತ್ನಿ ಮತ್ತು ಮಗನಿಗೆ ಜಾರಕಿಹೊಳೆ ಕಾರ್ ಕೊಡಿಸಿದ್ದನ್ನು ಸಿದ್ದರಾಮಯ್ಯ ಮರೆತಿದ್ದಾರೆ.
ಕಾಂಗ್ರೆಸ್ ಮೂರನೇ ಸ್ಥಾನಕ್ಕೆ
ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ. ಶಿಸ್ತು ಸಮಿತಿಯ ವರದಿ ಬಂದ ನಂತರ ಭಿನ್ನಮತೀಯ ಜೆಡಿಎಸ್ ಶಾಸಕರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.