ದೇವೇಗೌಡರಿಂದ ಸಿಕ್ತು ಗ್ರೀನ್ ಸಿಗ್ನಲ್, ಅ. 12ರೊಳಗೆ ಸಂಪುಟ ವಿಸ್ತರಣೆ
ಬೆಂಗಳೂರು, ಅಕ್ಟೋಬರ್ 02: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜೆಡಿಎಸ್ -ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದಾರೆ. ಅಕ್ಟೋಬರ್ 12ರೊಳಗೆ ತಮ್ಮ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು(ಅಕ್ಟೋಬರ್ 02) ಹೇಳಿದರು.
ಭಾನುವಾರ ತಡರಾತ್ರಿ ವೇಳೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಚಿವ ಸಂಪುಟ ವಿಸ್ತರಣೆ, ರಾಜಕೀಯ ಬೆಳವಣಿಗೆ, ವಿವಿಧ ನಾಯಕರ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ ತಿಂಗಳಿನಲ್ಲೇ ನಡೆಯಬೇಕಿದ್ದ ಸಂಪುಟ ವಿಸ್ತರಣೆಗೆ ಅನೇಕ ವಿಘ್ನಗಳು ಕಂಡು ಬಂದಿತ್ತು. 7 ಸ್ಥಾನಗಳಿಗಾಗಿ 22ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಕಾಣಿಸಿಕೊಂಡಿದ್ದರು, ಕೊನೆಗೆ ಪಿತೃಪಕ್ಷದ ನೆಪವೊಡ್ಡಿ ಮುಂದೂಡಲಾಗಿತ್ತು. ಕಾಂಗ್ರೆಸ್ಸಿನಿಂದ 6 ಸ್ಥಾನ ಹಾಗೂ ಜೆಡಿಎಸ್ ನಿಂದ ಒಂದು ಸ್ಥಾನ ತುಂಬಬೇಕಿದೆ. ಎಲ್ಲಾ 6 ಸ್ಥಾನಗಳನ್ನು ಭರ್ತಿ ಮಾಡಲು ಕಾಂಗ್ರೆಸ್ ಇಚ್ಛಿಸಿದೆ. ಆದರೆ, ಒಂದೆರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.

ಜೆಡಿಎಸ್ಸಿನ ಒಂದು ಸ್ಥಾನ ಮೂವರು ಆಕಾಂಕ್ಷಿಗಳು
ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಉಳಿಸಿಕೊಂಡಿದೆ. ಈ ಒಂದು ಸ್ಥಾನಕ್ಕೆ ಮೂರು ಆಕಾಂಕ್ಷಿಗಳಾಗಿದ್ದಾರೆ. ಎಂಎಲ್ಸಿ ಬಸವರಾಜ ಹೊರಟ್ಟಿ, ಶರವಣ ಹಾಗೂ ಬಿಎಂ ಫಾರೂಕ್ ಅವರು ಸಚಿವ ಸಂಪುಟ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಎಂಎಲ್ಸಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ ಎನ್ನಲಾಗಿದೆ.
ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಲ್ಲೇ ಮುಂದುವರೆಸಲು ಜೆಡಿಎಸ್ ನಿರ್ಧರಿಸಿದ್ದು, ವೆಂಕಟರಾವ್ ನಾಡಗೌಡ ಅವರಿಗೆ ಸ್ಥಾನ ಸಿಕ್ಕರೂ ಅಚ್ಚರಿಯೇನಿಲ್ಲ.

ಸಂಪುಟ ವಿಸ್ತರಣೆಗೆ ನಾನಾ ವಿಘ್ನಗಳು
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಮತ್ತು 1 ಸ್ಥಾನ ಜೆಡಿಎಸ್ ಪಕ್ಷಕ್ಕೆ ಮೀಸಲು. 20 ನಿಗಮ ಮತ್ತು ಮಂಡಳಿಗಳ ನೇಮಕಾತಿಯೂ ನಡೆಯಬೇಕಿದೆ.
ಜಾರಕಿಹೊಳಿ ಸಹೋದರ ಗಲಾಟೆ, ಸಿದ್ದರಾಮಯ್ಯ ಅವರ ವಿದೇಶಿ ಪ್ರವಾಸ, ಬೆಳಗಾವಿ ಆಡಳಿತ ವಿಕೇಂದ್ರಿಕರಣ, ಡಿಕೆ ಶಿವಕುಮಾರ್ ಸವಾಲ್, ಎಂಎಲ್ಸಿ ಚುನಾವಣೆ, ಪಿತೃಪಕ್ಷ, ಅಕಾಂಕ್ಷಿಗಳ ಅಸಮಾಧಾನ ಹೀಗೆ ನಾನಾ ಕಾರಣಗಳನ್ನು ಹುಡುಕಬಹುದು.

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಎಂಬ ಕೂಗು
ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಕುಮಾರಸ್ವಾಮಿ ಅವರು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲೂ ಅನ್ಯಾಯವಾಗಿದೆ ಎಂಬ ಕೂಗು ಬಲವಾಗಿ ಎದ್ದಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಕ್ಕೆ ತಕ್ಕಂತೆ ಹೆಸರುಗಳನ್ನು ಆಯ್ಕೆ ಮಾಡಬೇಕಿದೆ. ಅಲ್ಲದೆ, ಪ್ರಮುಖವಾಗಿ ಜಾತಿ ಲೆಕ್ಕಾಚಾರದಂತೆ ದಲಿತರಿಗೆ ಡಿಸಿಎಂ, ಒಕ್ಕಲಿಗರಿಗೆ ಪ್ರಮುಖ ಖಾತೆ, ಬ್ರಾಹ್ಮಣ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಲಿಂಗಾಯತ/ವೀರಶೈವ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಮನ್ನಣೆ ಸಿಗಬೇಕು ಎಂಬುದು ಈಗಿನ ಬೇಡಿಕೆಯಾಗಿದೆ.

ಬಿಬಿಎಂಪಿ ಚುನಾವಣೆ ಬಗ್ಗೆ ದೇವೇಗೌಡರು
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿದರೂ ಪ್ರಯಾಸದ ಗೆಲುವು ಸಿಕ್ಕಿದೆ. ಜೆಡಿಎಸ್ನ ಇಬ್ಬರು ಪಾಲಿಕೆ ಸದಸ್ಯರು ಬಿಜೆಪಿಗೆ ಜತೆ ಕೈ ಜೋಡಿಸಲು ಮುಂದಾಗಿದ್ದು ಹಿನ್ನಡೆಯಾಗಿದೆ. ಇದೆಲ್ಲರ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ಎಚ್.ಎಂ. ರಮೇಶ್ಗೌಡ ನೇಮಕ ಪಕ್ಷದಲ್ಲಿ ಆಂತರಿಕ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಮ್ಮೆ ವೈಎಸ್ ವಿ ದತ್ತಾ ಅವರನ್ನು ಕಡೆಗಣಿಸಲಾಗಿದೆ ಎಂಬ ಕೂಗೆದ್ದಿದೆ. ಇದೆಲ್ಲದರ ಬಗ್ಗೆ ಚರ್ಚಿಸಿರುವ ದೇವೇಗೌಡರು, ಆಂತರಿಕ ಮನಸ್ತಾಪ ಶಮನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.












Click it and Unblock the Notifications