ಪ್ರವಾಹ ಪೀಡಿತ ಕೊಡಗು, ಕೇರಳಕ್ಕೆ ತಲಾ 1.8 ಲಕ್ಷ ನೀಡಿದ ದೇವೇಗೌಡ
ಬೆಂಗಳೂರು, ಆಗಸ್ಟ್ 20: ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರವಾಹ ಪೀಡಿತ ಕೇರಳ ಮತ್ತು ಕೊಡಗಿಗೆ ತಲಾ 1.8 ಲಕ್ಷ ಧನ ಸಹಾಯ ನೀಡಿದ್ದಾರೆ.
ಇಂದು ತಮ್ಮ ಮಗ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದಾಗ ಈ ವಿಷಯವನ್ನು ಅವರು ಮಾಧ್ಯಮಗಳಿಗೆ ತಿಳಿಸಿದರು.
ಕೇರಳ ಹಾಗೂ ಕೊಡಗು ಪ್ರವಾಹದಿಂದ ನಲುಗಿ ಹೋಗಿದೆ. ಹಾಗಾಗಿ ನನ್ನ ಒಂದು ತಿಂಗಳ ಸಂಬಳವನ್ನು ಕೊಡಗಿಗೆ ಹಾಗೂ ಮತ್ತೊಂದು ತಿಂಗಳ ಸಂಬಳವನ್ನು ಕೇರಳಕ್ಕೆ ಸಹಾಯಾರ್ಥವಾಗಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಎರಡು ದಿನದಲ್ಲಿ ಕೊಡಗಿಗೆ ತೆರಳುವೆ
ನನಗೆ ಆರೋಗ್ಯ ಸಮಸ್ಯೆಯಿಂದ ನಡೆಯಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಇನ್ನೆರೆಡು-ಮೂರು ದಿನಗಳ ನಂತರ ಕೊಡಗಿಗೆ ಹೋಗಿ ಪರಿಶೀಲನೆ ನಡೆಸುತ್ತೇನೆ ಎಂದು ಅವರು ಹೇಳಿದರು.

ಯಾರೂ ರಾಜಕೀಯ ಮಾಡಬೇಡಿ
ಈ ಸನ್ನಿವೇಶದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಎಚ್ಚರಿಕೆ ನೀಡಿದ ಅವರು, ಕಾಂಗ್ರೆಸ್, ಬಿಜೆಪಿ ಎಲ್ಲರೂ ಕೊಡಗಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

8-9 ಸಾವಿರ ಕೋಟಿ ನಷ್ಟ
ಕೊಡಗಿನಲ್ಲಿ 8-9 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ ಆದರೆ ಇನ್ನೂ ಪೂರ್ಣ ಮಾಹಿತಿ ಲಭ್ಯವಾಗಿಲ್ಲ, ರಾಜ್ಯ ಸರ್ಕಾರ ಈಗಾಗಲೇ 200 ಕೋಟಿ ಘೋಷಣೆ ಮಾಡಿದೆ, ಮೋದಿ ಅವರಲ್ಲಿಯೂ ನೆರವಿಗಾಗಿ ಮನವಿ ಮಾಡಲಾಗಿದೆ, ಕೊಡಗಿಗೆ ಸಾಕಷ್ಟು ಹಣ ಬೇಕಿದೆ ಈ ವಿಷಯದಲ್ಲಿ ಹೋರಾಟ ಮಾಡಲು ಸಿದ್ಧ ಎಂದು ಅವರು ಹೇಳಿದರು.

ತಿಂಗಳ ಸಂಬಳ ನೀಡಿದ ಬಿಬಿಎಂಪಿ ಸದಸ್ಯರು
ಪ್ರವಾಹ ಪೀಡಿತ ಕೊಡಗು ನೆರವಿಗೆ ಬಿಬಿಎಂಪಿ ಎಲ್ಲ ಸದಸ್ಯರು ಒಂದು ತಿಂಗಳ ಸಂಬಳವನ್ನು ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಒಂದು ದಿನದ ವೇತನವನ್ನು ನೀಡಿದ್ದಾರೆ. ಕೇರಳ ಪ್ರವಾಹಕ್ಕೆ ಕಾಂಗ್ರೆಸ್ ಪಕ್ಷ ಉದಾರ ಸಹಾಯ ನೀಡಿದ್ದು, ದೇಶದಲ್ಲಿರುವ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಸಂಸದರು, ರಾಜ್ಯಸಭಾ, ವಿಧಾನಸಭಾ ಸದಸ್ಯರು ಒಂದು ತಿಂಗಳ ಸಂಬಳವನ್ನು ಕೇರಳಕ್ಕೆ ನೀಡುತ್ತಿದೆ.












Click it and Unblock the Notifications