ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು!
Recommended Video
ಬೆಂಗಳೂರು, ಮೇ 16 : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಚಿವರು ಮತ್ತು ಶಾಸಕರ ಸಭೆ ಕರೆದಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ, ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನಲೆಯಲ್ಲಿ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಮೇ 21ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಸಚಿವರು, ಶಾಸಕರ ಸಭೆ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರ ಸೋಲು-ಗೆಲುವು ಅಂದು ನಿರ್ಧಾರವಾಗಲಿದೆ. ಅದಕ್ಕೂ ಮೊದಲು ದೇವೇಗೌಡರು ಸಭೆ ಕರೆದಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ, ಪಕ್ಷದ ಮುಂದಿನ ನಿಲುವು ಏನಾಗಿರಬೇಕು? ಎಂಬ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಣೆ ಮಾಡುವ ಸಾಧ್ಯತೆ ಇದೆ.

ದೇವೇಗೌಡರು ಮೌನವಾಗಿದ್ದಾರೆ
ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆ, ಸಿದ್ದರಾಮಯ್ಯ ಅವರ ರೇವಣ್ಣ ಸಿಎಂ ಆಗಬೇಕು ಎಂಬ ಟ್ವೀಟ್ ಮುಂತಾದ ವಿಚಾರಗಳ ಕುರಿತು ಎಚ್.ಡಿ.ದೇವೇಗೌಡರು ಮೌನವಾಗಿದ್ದಾರೆ. ಮೇ 21ರಂದು ನಡೆಯುವ ಸಭೆಯಲ್ಲಿ ಈ ಕುರಿತು ಶಾಸಕರು, ಸಚಿವರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೇ 23ರಂದು ಸೋನಿಯಾ ಗಾಂಧಿ ಸಭೆ
ಮೇ 23ರಂದು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ಪಕ್ಷದ ನಿಲುವಿನ ಬಗ್ಗೆ ಚರ್ಚಿಸಲು ಸಚಿವರು, ಶಾಸಕರ ಸಭೆ ಕರೆದಿದ್ದಾರೆ.

ಚುನಾವಣಾ ಫಲಿತಾಂಶ
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶವೂ ಪ್ರಕಟವಾಗುತ್ತಿದೆ. ಎಚ್.ಡಿ.ದೇವೇಗೌಡರ ಕುಟುಂಬದ ಮೂವರ ಭವಿಷ್ಯ ಚುನಾವಣೆಯಲ್ಲಿ ಅಡಗಿದೆ. ಆದ್ದರಿಂದ, ಫಲಿತಾಂಶ, ನಂತರದ ನಡೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸಭೆಯನ್ನು ಕರೆದಿದ್ದಾರೆ.

ಮೈತ್ರಿ ಸರ್ಕಾರದ ಭವಿಷ್ಯ
ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭವಿಷ್ಯ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆದ್ದರಿಂದ, ದೇವೇಗೌಡರು ಸಚಿವರು ಮತ್ತು ಶಾಸಕರ ಸಭೆಯನ್ನು ಕರೆದಿದ್ದಾರೆ.












Click it and Unblock the Notifications