ಉಪನ್ಯಾಸಕರ ಪ್ರತಿರೋಧದ ನಡುವೆ ಪಿಯು ಕಾಲೇಜು ಆರಂಭ
ಬೆಂಗಳೂರು, ಮೇ.3: ಪಿಯು ಉಪನ್ಯಾಸಕರ ಪ್ರತಿಭಟನೆ, ಬೆದರಿಕೆಗೆ ಕಿವಿಗೊಡದೆ ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ ಬುಧವಾರದಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದೆ.
ಎಂದಿನಂತೆ ಎಲ್ಲಾ ಕಾಲೇಜುಗಳಲ್ಲಿ ಉಪನ್ಯಾಸಕರು ಕಾರ್ಯ ನಿರ್ವಹಿಸಿದರು. ಮೇ.2ರಿಂದ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಉಪನ್ಯಾಸಕರಿಗೆ ಬೇಸಿಗೆ ರಜೆಯನ್ನು ಇಲಾಖೆ ಕಡಿತಗೊಳಿಸಿತ್ತು. ಇಲಾಖೆಯ ಕ್ರಮಕ್ಕೆ ರಾಜ್ಯಾದ್ಯಂತ ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದರು.
ಮೇ 12ರಂದು ವಿಧಾನಸಭೆ ಚುನಾವಣೆಯಿದ್ದು,ಮೇ 15ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಕಾರ್ಯಗಳಿಗೆ ಉಪನ್ಯಾಸಕರನ್ನು ಸಹ ನಿಯೋಜನೆ ಮಾಡುವುದರಿಂದ ತೀವ್ರ ತೊಂದರೆ ಉಂಟಾಗಲಿದೆ. ಆದ್ದರಿಂದ ಚುನಾವಣಾ ಫಲಿತಾಂಶ ಬಂದ ನಂತರ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಡ ಹಾಕಿದ್ದರು.

ಆದರೆ ಉಪನ್ಯಾಸಕರ ಒತ್ತಡಕ್ಕೆ ಬಗ್ಗದ ಇಲಾಖೆಯ ನಿರ್ದೇಶಕಿ ಸಿ. ಶಿಖಾ, ಮೇ.2 ರಂದು ಕಡ್ಡಾಯವಾಗಿ ಉಪನ್ಯಾಸಕರು ತರಗತಿಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದ್ದರು. ಜತೆಗೆ ಗೈರು ಹಾಜರಾದವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ತರಗತಿಗಳು ಫೆ.21 ರಂದೇ ಕೊನೆಗೊಂಡಿದ್ದು 69 ದಿನ ರಜೆಗಳು ದೊರೆತಿದೆ. ಜೂನ್ 1 ರಿಂದ ತರಗತಿಗಳು ಪ್ರಾರಂಭವಾದರೆ 100 ದಿನ ರಜೆ ಸಿಕ್ಕಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ, ಪಾಠ, ಪ್ರವಚನಕ್ಕೆ ಅಡಚಣೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇಲಾಖೆ ಕಚೇರಿಗೆ ಮುತ್ತಿಗೆ: ಪದವಿಪೂರ್ವ ಶಿಕ್ಷಣ ಒಲಾಖೆಯು ಉಪನ್ಯಾಸಕರ ಬೇಸಿಗೆ ರಜೆಯನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಗುರುವಾರ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.











Click it and Unblock the Notifications