ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಏಪ್ರಿಲ್ 29 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ. ಗೋಮಾಳ ಜಮೀನನ್ನು ಅಕ್ರಮ ಡಿನೋಟಿಫಿಕೇಷನ್ ಮಾಡಿ, ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಹನುಮೇಗೌಡ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ಕೊಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ 10 ಎಕರೆ ಗೋಮಾಳದ ಜಮೀನನ್ನು 2011ರಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಆರೋಪ. [ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ 5ನೇ ದೂರು]

ಜಮೀನನ್ನು ಡಿನೋಟಿಫಿಕೇಷನ್ ಮಾಡಿ ತಮ್ಮ ಆಪ್ತ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ಸೇರಿದ ಟ್ರಸ್ಟ್ಗೆ ನೀಡಿದ್ದಾರೆ. ಅದಕ್ಕಾಗಿ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಿ.ಜೆ.ಪುಟ್ಟಸ್ವಾಮಿ ಅವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ. [ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸರ್ಕಾರ]
ಕೆಂಪಯ್ಯ ವಿರುದ್ಧ ದೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಸಲಹೆಗಾರ ಮತ್ತು ನಿವೃತ್ತ ಐಪಿಎಸ್ ಅಧಿಕಾರಿಗೆ ಕೆಂಪಯ್ಯ ಅವರ ವಿರುದ್ಧ ಎಸಿಬಿಗೆ ದೂರು ಸಲ್ಲಿಸಲಾಗಿದೆ. ಕೆಂಪಯ್ಯ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದಾರೆ.
ಕೆಂಪಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದವರು. ಆದರೆ, ತಮ್ಮದು ಕಾಡು ಕುರುಬ ಎಂದು ಸುಳ್ಳು ದಾಖಲೆ ನೀಡಿ ಪರಿಶಿಷ್ಟ ಪಂಗಡದ ಕೋಟಾ ಅಡಿ ಐಪಿಎಸ್ ನೌಕರಿ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕನಕಪುರ ಪ್ರೌಢಶಾಲೆಯ ದಾಖಲೆ ಪುಸ್ತಕದಲ್ಲಿ ಕೆಂಪಯ್ಯ ಅವರು 1965-66ರಲ್ಲಿ ಕುರುಬ ಜಾತಿ ಎಂದು ನಮೂದಿಸಿದ್ದರು. ನಂತರ ಕಾಡು ಕುರುಬ ಜಾತಿ ಎಂದು ಹೇಳಿಕೊಂಡರು ಎಂದು ಆರೋಪಿಸಲಾಗಿದೆ.











Click it and Unblock the Notifications