ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ಆಡಳಿತ ಬಂದಿದೆ: ಪ್ರತಾಪ್ ಸಿಂಹ ಕಿಡಿ
ಮೈಸೂರು, ಅಕ್ಟೋಬರ್ 04: ಒಂದೊಂದು ಸಾರಿ ಒಳ್ಳೆಯವರು ರಾಜ್ಯ ಆಳುತ್ತಾರೆ. ಒಂದೊಂದು ಬಾರಿ ರಾಕ್ಷಸರು ರಾಜ್ಯ ಅಳುತ್ತಾರೆ, ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ದ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶಿವಮೊಗ್ಗ ಗಲಭೆ ಪ್ರಕರಣದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ, ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು ಚೂರಿ ಹಿಡಿದು ಹಿಂಬಂದಿಯಿಂದ ಬಂದು ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳಿದರು.

ಆಡಳಿತದ ಚುಕ್ಕಾಣಿ ಹಿಡಿದವರ ಮನಸ್ಥಿತಿಯಂತೆ ಉಳಿದವರು ಇರುತ್ತಾರೆ. ಸಿದ್ದರಾಮಯ್ಯ ಎಲ್ಲಾ ನೋಡಿಕೊಂಡು ಕಣ್ಮುಚ್ಚಿ ಕುಳಿತಿದ್ದಾರೆ, ಪಿ ಎಫ್ ಐ, ಕೆ ಎಫ್ ಡಿ ಸಂಘಟನೆ ಸದಸ್ಯರ ಮೇಲಿನ ಕೇಸ್ ವಾಪಸ್ ಪಡೆದ ಕಾರಣ ಇವತ್ತು ವಿಕೃತಿಗಳು ವಿಜೃಂಭಿಸುತ್ತಿವೆ. ಇದಕ್ಕೆ ಸಿದ್ದರಾಮಯ್ಯ ಕಾರಣ. ಅವರು ಬಿಗಿಯಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆ ಎಫ್ ಡಿ, ಪಿ ಎಫ್ ಐ ಸಂಘಟನೆಗಳು ಎದ್ದು ನಿಂತಿವೆ. ಸರ್ಕಾರಕ್ಕೆ ಲಂಗು ಲಾಗಾಮು ಇಲ್ಲ. ಮುಸ್ಲಿಂ ಪುಂಡರು ಎಸ್ಪಿ ಮೇಲೆ ಕಲ್ಲು ತೂರುತ್ತಾರೆ. ಕೋಲಾರದಲ್ಲಿ ದಲಿತ ಸಂಸದರ ಮೇಲೆ ಎಸ್ಪಿ ಹಲ್ಲೆ ಮಾಡುತ್ತಾರೆ ಎಂದು ಸಿಎಂ ವಿರುದ್ದ ಕಿಡಿಕಾರಿದರು.
ಕಾವೇರಿ ನೀರು ವಿವಾದ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡು ಸಿಎಂ ಸ್ಟ್ಯಾಲಿನ ವಿರುದ್ದ ಒಬ್ಬರಾದರೂ ಮಾತಾಡಿದ್ದಾರಾ? ಈ ಸರ್ಕಾರಕ್ಕೆ ಬೆನ್ನು ಮೂಳೆಯೇ ಇಲ್ಲ. ಸ್ಟ್ಯಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣ? ಸಿದ್ದರಾಮಯ್ಯ ಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ. ಸ್ಟ್ಯಾಲಿನ್ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಸ್ಟ್ಯಾಲಿನ್ ವಿರುದ್ದ ಮಾತನಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಕುಟುಕಿದರು.
13 ರಂದು ಚಲೋ ಚಾಮುಂಡಿ ಬೆಟ್ಟ ರ್ಯಾಲಿ ಮಾಡುತ್ತೇವೆ. ಮೆಟ್ಟಿಲು ಮೂಲಕ ಬೆಟ್ಟಕ್ಕೆ ಹತ್ತುತ್ತೇವೆ, ಬೆಟ್ಟ ಹತ್ತಲು ಸಾಧ್ಯವಾಗದವರು ಮುಖ್ಯದ್ವಾರದಿಂದ ವಾಹನಗಳಲ್ಲಿ ಬರಬಹುದು.
ಬೈಕ್, ಕಾರು ಮುಂತಾದ ವಾಹನದಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಇದು ಚಾಮುಂಡಿ ತಾಯಿಯ ಭಕ್ತರ ಚಳವಳಿ, ಅಂದಾಜು 5000 ಜನರು ಭಾಗವಹಿಸುತ್ತಾರೆ. ಇದು ಬಿಜೆಪಿ ಕಾರ್ಯಕ್ರಮವಲ್ಲ, ನಾವು ಮುಂದಾಳತ್ವ ಮಾತ್ರ ತೆಗೆದುಕೊಂಡಿದ್ದೇವೆ.
ಮೈಸೂರಿನ ಜನ ಕಷ್ಟ-ಸುಖ ಎಲ್ಲದಕ್ಕೂ ಚಾಮುಂಡಿ ಬೆಟ್ಟಕ್ಕೆ ಓಡಿ ಹೋಗ್ತೀರಿ. ಯಾರೋ ನಾಲ್ಕು ಜನ ಮಹಿಷ ದಸರಾ ಮಾಡ್ತಾರೆ. ಚಾಮುಂಡಿ ನಿಮ್ಮ ತಾಯಿ ಅಲ್ವಾ ? ಆಕೆಗೆ ಅಪಮಾನ ಆಗುವಾಗ ನಿಮಗೆ ಸಿಟ್ಟು ಬರಲ್ವಾ ? ಮೈಸೂರಿಗರೇ ಪಕ್ಷ, ಸಿದ್ಧಾಂತ ಭೇದವಿಲ್ಲದೇ ನಮ್ಮ ಚಳವಳಿಗೆ ಬೆಂಬಲ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ದಸರಾ ಆಚರಣೆಗೆ ಮೈಸೂರು ಸಜ್ಜಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಡಾ ಮಹದೇವಪ್ಪ ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದೆ. ಟಿಪ್ಪು, ಹೈದರಾಲಿ ಕಾಲ ಬಿಟ್ಟು ದಸರಾ 414 ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ದಸರಾ, ನವರಾತ್ರಿ, ಚಾಮುಂಡಿ ಮಹಿಮೆ, ಆಷಾಢ, ವರ್ಧಂತಿ, ತೆಪ್ಪೋತ್ಸವ ಎಲ್ಲವೂ ಮೈಸೂರಿಗರು, ಹೊರಗಿನವರಿಗೆ ಗೊತ್ತು. 2015-16ರಲ್ಲಿ ಮಹಿಷ ದಸರಾ ಎನ್ನುವ ಅಪದ್ಧ, ಅಸಹ್ಯ, ಅಪಸವ್ಯ ಶುರುವಾಯ್ತು. ಮಹಿಷಾಸುರ ಯಾವಾಗ ಮೂಲನಿವಾಸಿಗಳ ದೇವರಾಗಿದ್ದ ಗೊತ್ತಿಲ್ಲ. ದೆವ್ವ ಯಾವಾಗ ದೇವರಾಯ್ತು ಗೊತ್ತಿಲ್ಲ ಎಂದರು.
ದೇವಿಯನ್ನು ದೆವ್ವ, ದೆವ್ವವನ್ನು ದೇವರು ಮಾಡುವ ಪ್ರಯತ್ನ ನಡೆದಿದೆ. ಪುರಭವನದಿಂದ ಚಾಮುಂಡಿಬೆಟ್ಟದವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2018ರಲ್ಲೂ ಮುಂದುವರಿದಿತ್ತು.2019ರಲ್ಲಿ ಬಿಜೆಪಿ ಸರ್ಕಾರ ಬಂತು, ಸೋಮಣ್ಣ ಸಚಿವರಾದ ಮೇಲೆ ಮಹಿಷ ದಸರಾ ನಿಲ್ಲಿಸಿದ್ದೆವು ಎಂದು ಹೇಳಿದರು.












Click it and Unblock the Notifications