ಸರ್ಕಾರಿ ಅಧಿಕಾರಿ ಹೆಸರಲ್ಲಿ ಲಂಚ ಸ್ವೀಕರಿಸಿ ಜೈಲು ಸೇರಿದ ರಿಯಲ್ ಎಸ್ಟೇಟ್ ಕಂಪನಿ ಉದ್ಯೋಗಿ
ಬೆಂಗಳೂರು, ಡಿ. 28: ಸಾರ್ವಜನಿಕರಿಂದ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸಿದರೆ ಮಾತ್ರ ಬಂಧನ ಆಗುತ್ತಾರೆ ನಿಜ. ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಲಂಚ ಸ್ವೀಕರಿಸಿದರೂ ಜೈಲಿಗೆ ಹೋಗಬೇಕಾಗುತ್ತದೆ. ಪ್ಲಾಟ್ ನೋಂದಣಿ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಗ್ರಾಹಕರಿಂದ 25 ಸಾವಿರ ರೂ. ವಸೂಲಿ ಮಾಡಿ ರಿಯಲ್ ಎಸ್ಟೇಟ್ ಕಂಪನಿ ಕಸ್ಟಮರ್ ರಿಲೇಷನ್ ವ್ಯವಸ್ಥಾಪಕಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಂತಹ ಅಪರೂಪದ ಲಂಚ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಎಸಿಬಿ ಪೊಲೀಸರು ದಾಖಲಿಸಿದ್ದಾರೆ. ಪ್ಲಾಟ್ ಮಾರಾಟ ಮಾಡಿದ್ದ ರಿಯಲ್ ಎಸ್ಟೇಟ್ ಕಂಪನಿಯ ಕಸ್ಟಮರ್ ರಿಲೇಷನ್ ಮ್ಯಾನೇಜರ್ ಅಧಿಕಾರಿಯೇ ಜೈಲು ಪಾಲಾಗಿದ್ದಾರೆ. ಶಿರೀಶಾ ಜೈಲಿಗೆ ಹೋದ ಖಾಸಗಿ ಕಂಪನಿಯ ಉದ್ಯೋಗಿ.
ಗಂಗಾನಗರದ ನಿವಾಸಿಯೊಬ್ಬರು ಆನೇಕಲ್ ಸಮೀಪ ಐಕಾನ್ ಹೋಮ್ಸ್ ಸಂಸ್ಥೆ ನಿರ್ಮಿಸಿದ್ದ ಅಪಾರ್ಟ್ ಮೆಂಟ್ ನಲ್ಲಿ ಪ್ಲಾಟ್ ಖರೀದಿ ಮಾಡಿದ್ದರು. ಪ್ಲಾಟ್ ಗೆ ಎಲ್ಲಾ ಹಣ ಪಾವತಿ ಮಾಡಿದ್ದರ. ಆದರೆ, ಪ್ಲಾಟ್ ನೋಂದಣಿ ಸಂಬಂಧ ಸರ್ಕಾರಿ ಅಧಿಕಾರಿಗೆ ಲಂಚ ನೀಡಲು 25 ಸಾವಿರ ರೂ. ನೀಡುವಂತೆ ಗ್ರಾಹಕನ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕಸ್ಟಮರ್ ರಿಲೇಷನ್ ವ್ಯವಸ್ಥಾಪಕಿ ಶಿರೀಶಾ ರನ್ನು ಕೇಳಿದಾಗ, ಆನೇಕಲ್ ಉಪ ನೋಂದಣಾಧಿಕಾರಿ ಮತ್ತು ಸಿಬ್ಬಂದಿಗೆ ಲಂಚ ನೀಡಬೇಕು ಎಂದು ಹೇಳಿದ್ದಾರೆ.

ಭರತ್ ಕೋ ಆರ್ಡಿನೇಟರ್ ಐಕಾನ್ ಹೋಮ್ಸ್ ಸಂಸ್ಥೆ ಪರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಗಂಗಾನಗರ ನಿವಾಸಿ ಬೆಂಗಳೂರು ಗ್ರಾಮಾಂತರ ವಿಭಾಗದ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಮಂಗಳವಾರ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಭರತ್ ಕೋಆರ್ಡಿನೇಟರ್, ಐಕಾನ್ ಹೋಮ್ಸ್ ಕಸ್ಟಮರ್ ರಿಲೇಷನ್ ಮ್ಯಾನೇಜರ್ ಶಿರೀಶಾ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆಕೆ ನೀಡುವ ಹೇಳಿಕೆ ಆಧರಿಸಿ ಆನೇಕಲ್ ಉಪ ವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಅಂತೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟು ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುವ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಈ ಪ್ರಕರಣ ದೊಡ್ಡ ಸಂದೇಶ ರವಾನಿಸಿದಂತಾಗಿದೆ.
ಸಾಮಾನ್ಯವಾಗಿ ಲಂಚ ಸ್ವೀಕರಿಸುವ ಸರ್ಕಾರಿ ಅಧಿಕಾರಿಗಳು ಬಂಧನಕ್ಕೆ ಒಳಗಾಗುತ್ತಿದ್ದರು. ಇಲ್ಲವೇ ಲಂಚ ಸ್ವೀಕರಿಸಲು ಸರ್ಕಾರಿ ಅಧಿಕಾರಿಗಳೇ ನೇಮಿಸಿಕೊಳ್ಳುತ್ತಿದ್ದ ಏಜೆಂಟರು ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬೀಳುತ್ತಿದ್ದರು. ಆದರೆ, ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ಮಟ್ಟದ ಲಂಚ ಸಂದಾಯ ಮಾಡುವ ರಿಯಲ್ ಎಸ್ಟೇಟ್ ಕಂಪನಿಗಳು ಎಸಿಬಿ ಇತಿಹಾಸದಲ್ಲಿ ಸಿಕ್ಕಿಬಿದ್ದಿಲ್ಲ. ಸರ್ಕಾರಿ ಅಧಿಕಾರಿ ಹೆಸರಿನಲ್ಲಿ ಲಂಚ ಸ್ವೀಕರಿಸಿದ ರಿಯಲ್ ಎಸ್ಟೇಟ್ ಕಂಪನಿಯ ನೌಕರಳನ್ನು ಬಂಧಿಸಿರುವುದು ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ಲೋರ್ ಮಿಲ್ ದಂಡ ಮನ್ನಾಗೂ ಲಂಚ:
ದಾವಣಗೆರೆಯಲ್ಲಿ ಹೆಚ್ಚುವರಿ ವಿದ್ಯುತ್ ಬಳಕೆ ಸಂಬಂಧ ವಿಧಿಸಿದ್ದ ದಂಡವನ್ನು ಮನ್ನಾ ಮಾಡಲು ಐದು ಸಾವಿರ ಲಂಚ ಸ್ವೀಕರಿಸುತ್ತಿದ್ದ ಪವರ್ ಮ್ಯಾನ್ನನ್ನು ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ರವಿಕುಮಾರ್ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿ. ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬರು ಪ್ಲೋರ್ ಮಿಲ್ ಹೊಂದಿದ್ದರು. ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರು. ಇದಕ್ಕಾಗಿ ಪ್ಲೋರ್ ಮಿಲ್ಗೆ ದಂಡ ವಿಧಿಸಿದ್ದರು. ಈ ದಂಡ ಮನ್ನಾ ಮಾಡುವಂತೆ ರವಿಕುಮಾರ್ ಮನವಿ ಮಾಡಿದ್ದರು. ಇದಕ್ಕಾಗಿ ಐದು ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಲಂಚ ಸ್ವೀಕರಿಸುವಾಗ ರವಿಕುಮಾರ್ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications