Vande Bharat Express: ಕರ್ನಾಟಕಕ್ಕೆ 6 ಹೊಸ ವಂದೇ ಭಾರತ್ ರೈಲು, ಸಚಿವರ ಮಾಹಿತಿ
ಬೆಂಗಳೂರು, ಫೆಬ್ರವರಿ 24: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11, 2022ರಂದು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು ಮತ್ತು ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದರು. ಇದು ದೇಶದ 5ನೇ ಮತ್ತು ಕರ್ನಾಟಕ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸೇವೆಯಾಗಿತ್ತು. ಪ್ರಸ್ತುತ ಕರ್ನಾಟಕದಲ್ಲಿ 9 ಮಾರ್ಗದಲ್ಲಿ ಈ ಮಾದರಿಯ ರೈಲುಗಳು ಸಂಚಾರವನ್ನು ನಡೆಸುತ್ತಿವೆ.
ಸದ್ಯ ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬಹುಬೇಡಿಕೆಯ ಮಾರ್ಗವಾಗಿದೆ. ವಾರದ ಆರು ದಿನಗಳು ಸಂಪೂರ್ಣ ಭರ್ತಿಯಾಗಿ ರೈಲು ಸಂಚಾರವನ್ನು ನಡೆಸುತ್ತಿದೆ. ಈಗ ಹೊಸ ಮಾರ್ಗದಲ್ಲಿಈ ಮಾದರಿ ರೈಲುಗಳು ಬೇಕು ಎಂದು ನೈಋತ್ಯ ರೈಲ್ವೆಗೆ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವ ಜೊತೆಗೆ ವ್ಯಾಪಾರ ವಹಿವಾಟಿಗೆ ವಂದೇ ಭಾರತ್ ರೈಲು ಸಹಾಯಕವಾಗಿದೆ. ಕರ್ನಾಟಕದಲ್ಲಿ ಹೊಸದಾಗಿ ಯಾವ ಮಾರ್ಗದಲ್ಲಿಯೂ ವಂದೇ ಭಾರತ್ ರೈಲು ಇನ್ನೂ ಘೋಷಣೆಯಾಗಿಲ್ಲ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಸಚಿವರು ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದ್ದಾರೆ.
ಹೊಸ ಮಾರ್ಗಕ್ಕಾಗಿ ಬೇಡಿಕೆ: ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, 'ರಾಜ್ಯದ 9 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ವಿಸ್ತರಿಸಿದ್ದಲ್ಲದೇ, ಈಗಾಗಲೇ ರಾಜ್ಯದ ಇನ್ನಿತರ ಪ್ರಮುಖ ನಗರಗಳಿಗೆ ವಿಸ್ತರಿಸಲು ಮನವಿಯಿದ್ದು, ಅದರ ಕುರಿತಾದ ಸಚಿವಾಲಯ ಮಟ್ಟದ ಚರ್ಚೆಗಳು ಪ್ರಗತಿಯಲ್ಲಿವೆ' ಎಂದು ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಕೊಪ್ಪಳ-ಬೆಂಗಳೂರು, ಬಳ್ಳಾರಿ-ಬೆಂಗಳೂರು, ವಿಜಯಪುರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಳಗಾವಿ-ಬೆಂಗಳೂರು ಮತ್ತು ಬೆಂಗಳೂರು-ರಾಯಚೂರು ನಡುವೆ ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಬೇಕು ಎಂದು ಬೇಡಿಕೆ ಇದೆ. ಈ ಕುರಿತು ನೈಋತ್ಯ ರೈಲ್ವೆಗೆ ಮನವಿಗಳು ಸಹ ಸಲ್ಲಿಕೆಯಾಗಿವೆ.
ಈ ಬೇಡಿಕೆಗಳ ಕುರಿತು ಇಲಾಖೆಯ ಅಧಿಕಾರಿಗಳು ಸಚಿವರ ಗಮನಕ್ಕೂ ತಂದಿದ್ದಾರೆ. ಸದ್ಯ ಸಂಚಾರ ನಡೆಸುತ್ತಿರುವ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವ ಪ್ರಸ್ತಾಪಕ್ಕೆ ಮೊದಲು ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ 2023ರ ನವೆಂಬರ್ನಲ್ಲಿಯೇ ಯಶಸ್ವಿಯಾಗಿದ್ದು, ರೈಲು ಸಂಚಾರ ಮಾತ್ರ ಬಾಕಿ ಇದೆ.
ಎಕ್ಸ್ಪ್ರೆಸ್ ರೈಲು, ಶತಾಬ್ದಿಗೆ ಹೋಲಿಕೆ ಮಾಡಿದರೆ ವಂದೇ ಭಾರತ್ ರೈಲಿನ ದರ ಹೆಚ್ಚಿದೆ. ಆದ್ದರಿಂದ ಮೊದಲು ಹೆಚ್ಚು ಜನರು ಈ ರೈಲು ಸೇವೆಯತ್ತ ಆಕರ್ಷಿತರಾಗಿರಲಿಲ್ಲ. ವಾರಾಂತ್ಯದಲ್ಲಿ ಮಾತ್ರ ರೈಲು ಭರ್ತಿಯಾಗುತ್ತಿತ್ತು. ಆದರೆ ಈಗ ರಾಜ್ಯದ ಎಲ್ಲಾ ರೈಲುಗಳಲ್ಲಿ ಶೇ 85ಕ್ಕೂ ಅಧಿಕ ಸೀಟುಗಳು ಭರ್ತಿಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.
ಮೈಸೂರು-ಚೆನ್ನೈ ಮಾರ್ಗದಲ್ಲಿ 2024ರ ಏಪ್ರಿಲ್ನಿಂದ ಡಿಸೆಂಬರ್ ತನಕ 512 ಟ್ರಿಪ್ ರೈಲು ಸಂಚಾರ ನಡೆಸಿದೆ. 2.86 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇಲಾಖೆಗೆ 28.41 ಕೋಟಿ ರೂ. ಆದಾಯ ಬಂದಿದೆ ಎಂದು ಸಚಿವ ವಿ. ಸೋಮಣ್ಣ ಶೇರ್ ಮಾಡಿರುವ ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಲಬುರಗಿ-ಬೆಂಗಳೂರು ನಡುವಿನ ರೈಲಿನ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಬೆಂಗಳೂರು-ಕಲಬುರಗಿ ಪ್ರಯಾಣಿಕರ ಸಂಖ್ಯೆ ಶೇ 73 ಮತ್ತು ಕಲಬುರಗಿ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಶೇ 92ರಷ್ಟಿದೆ. 472 ಟ್ರಿಪ್ ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸಿದ್ದು, 24.38 ಕೋಟಿ ರೂ. ಆದಾಯ ಬಂದಿದೆ.












Click it and Unblock the Notifications