ರಾಜ್ಯ ರಾಜಕೀಯದಲ್ಲೀಗ ಪಕ್ಷಾಂತರ ಪರ್ವ: ಯಾರಿಗೆ ಲಾಭ? ಯಾರಿಗೆ ನಷ್ಟ?
ಬೆಂಗಳೂರು, ಅಕ್ಟೋಬರ್ 04: ವಿಧಾನಸಭಾ ಚುನಾವಣೆ ನಂತರ ರಾಜ್ಯದ ರಾಜಕೀಯ ಮಗ್ಗಲು ಬದಲಿಸಿದೆ. ಏನೆಲ್ಲ ಆಗಲ್ಲ ಅಂಥ ಅಂದುಕೊಂಡಿದ್ದೆಲ್ಲವೂ ಆಗುತ್ತಿದೆ. 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರನ್ನು ಪಕ್ಷಕ್ಕೆ ಎಳೆದುಕೊಂಡು ಗುಡ್ಡೆ ಹಾಕಿಕೊಳ್ಳುವ ತವಕದಲ್ಲಿದೆ. ಇದರ ಹಿಂದೆಯೂ ಲೆಕ್ಕಚಾರ ಅಡಗಿದೆ. ಆದರೆ ಈ ಪ್ರಯತ್ನಗಳು ದೀರ್ಘ ಬಾಳಿಕೆ ಬರುತ್ತವೆಯಾ? ಗೊತ್ತಿಲ್ಲ.
ಅಧಿಕಾರದಲ್ಲಿರುವ ಪಕ್ಷಕ್ಕೆ ಬೇರೆ ಬೇರೆ ಪಕ್ಷಗಳಿಂದ ನಾಯಕರು ಸೇರುವುದು ಹೊಸತೇನಲ್ಲ. ಈ ರೀತಿಯ ಪಕ್ಷಾಂತರಿ ನಾಯಕರು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತಾರೆ. ಮತ್ತು ನಾಳೆ ಇನ್ನೊಂದು ಪಕ್ಷಕ್ಕೆ ಜಿಗಿಯಲು ಅವರು ಹಿಂದೇಟು ಹಾಕುವುದಿಲ್ಲ. ಈಗ ಕಾಂಗ್ರೆಸ್ ನಾಯಕರು ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂಬ ಕರೆ ನೀಡಿ ಬಿಜೆಪಿ ಮತ್ತು ಜೆಡಿಎಸ್ ನಿಂದ ಬರುವ ನಾಯಕರಿಗೆ ಶಾಲು ಹಾಕಿ ಪಕ್ಷಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಇದು ಎದುರಾಳಿಗಳ ಶಕ್ತಿಯನ್ನು ಕುಗ್ಗಿಸುವ ಮತ್ತು ಕಾಂಗ್ರೆಸ್ ಪಕ್ಷದ ಬಲವನ್ನು ಹಿಗ್ಗಿಸುವ ಕೆಲಸದಂತೆ ಕಂಡು ಬರುತ್ತಿದೆ.

ಆಪರೇಷನ್ ಕಮಲದ ಮುಂದೆ ಈಗ ಕಾಂಗ್ರೆಸ್ ನಾಯಕರು ಮಾಡುತ್ತಿರುವುದು ದೊಡ್ಡದೇನಲ್ಲ. ಸದ್ಯಕ್ಕೆ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ನಾಯಕರನ್ನು ನೋಡಿದರೆ ಸಣ್ಣಪುಟ್ಟ ಮೀನುಗಳಷ್ಟೆ 'ಕೈ' ಗಾಳಕ್ಕೆ ಬೀಳುತ್ತಿವೆ. ಮುಂದೆ ತಿಮಿಂಗಿಲಗಳೇ ಬಿದ್ದರೂ ಬೀಳಬಹುದು ಅದು ಆಚೆಗಿರಲಿ. ಈ ಹಿಂದೆ ಬಿಜೆಪಿ ನಾಯಕರು ಕಾಂಗ್ರೆಸ್ ನಿಂದ ಘಟಾನುಘಟಿ ನಾಯಕರನ್ನೇ ಎಳೆದು ತಂದಿದ್ದರು. ಅದಕ್ಕಿಂತ ಹೆಚ್ಚಾಗಿ ಈಗ ಜೆಡಿಎಸ್ ನ್ನೇ ಜತೆಗೆ ಎಳೆದುಕೊಂಡಿದ್ದಾರೆ. ಇದರ ಮುಂದೆ ಆಪರೇಷನ್ ಹಸ್ತ ದೊಡ್ಡದಾಗಿ ಕಾಣುತ್ತಿಲ್ಲ.
20 ಸ್ಥಾನ ಗೆಲ್ಲುವುದು ಕೈ ಅಜೆಂಡಾ
ಇವತ್ತು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವ ಯಾವುದೇ ನಾಯಕನಿರಲಿ ಆತ ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಕೊನೆಯವರೆಗೂ ಉಳಿಯುತ್ತಾನಾ? ಎಂಬುದಕ್ಕೆ ಖಚಿತತೆ ಕಡಿಮೆಯೇ.. ನಾಳೆ ಅಧಿಕಾರದ ಆಸೆಗೆ ಮಗ್ಗಲು ಬದಲಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಕೆಲವರು ಘರ್ ವಾಪಸ್ಸಿಯಾದ ಉದಾಹರಣೆಗಳಿವೆ. ಯಾವುದು ಗಟ್ಟಿ ಯಾವುದು ಜೊಳ್ಳು ಎನ್ನುವುದು ಲೋಕಸಭಾ ಚುನಾವಣೆ ಬಳಿಕ ಗೊತ್ತಾಗಬಹುದೇನೋ?

ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಎಷ್ಟು ನಾಯಕರು ಬರುತ್ತಾರೋ ಅಷ್ಟು ನಾಯಕರನ್ನು ಎಳೆದುಕೊಂಡರೆ ಅವರ ಜತೆಯಲ್ಲಿ ಒಂದಷ್ಟು ಮತಗಳನ್ನುನ ಗಟ್ಟಿ ಮಾಡಿಕೊಳ್ಳಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಆಲೋಚನೆಯಾಗಿದೆ. ಹೀಗಾಗಿ ಪಕ್ಷಕ್ಕೆ ಬರುವ ನಾಯಕರು ಮತ್ತು ಕಾರ್ಯಕರ್ತರನ್ನು ಸೇರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಬೇಕೆನ್ನುವುದು ಕಾಂಗ್ರೆಸ್ ನ ಅಜೆಂಡಾವಾಗಿದೆ. ರಾಜ್ಯದಲ್ಲಿ 135 ವಿಧಾನಸಭಾ ಸ್ಥಾನ ಗೆದ್ದವರಿಗೆ 20 ಸ್ಥಾನ ಗೆಲ್ಲುವುದು ಕಷ್ಟವೇನಲ್ಲ ಎಂಬುದು ಅವರಲ್ಲಿರುವ ವಿಶ್ವಾಸವಾಗಿದೆ. ಅದು ಸಾಧ್ಯವಾಗಲೂ ಬಹುದು.
ಪಕ್ಷಾಂತರಿ ನಾಯಕರಿಂದ ಮತ ಬರುತ್ತಾ?
2024ರ ಲೋಕಸಭಾ ಚುನಾವಣೆಗೆ ಕನಿಷ್ಟ ಆರೇಳು ತಿಂಗಳು ಬಾಕಿಯಿದೆ. ಈಗ ಕಾಂಗ್ರೆಸ್ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಹೊಸ ಅಧ್ಯಾಯ ಬರೆದಿದೆ. ಅದು ಕೆಲವರಿಗೆ ಅನುಕೂಲವೂ ಆಗಿದೆ. ಅದೇ ಜನಪ್ರಿಯತೆಯ ಗುಂಗಿನಲ್ಲೇ ಲೋಕಸಭಾ ಚುನಾವಣೆಯಲ್ಲಿ ಜನರ ಬಳಿಗೆ ಹೋಗುವ ತೀರ್ಮಾನವನ್ನು ಮಾಡಿದ್ದಾರೆ. ಮತ್ತು ಚುನಾವಣೆಯಲ್ಲಿ ಕನಿಷ್ಟ ಇಪ್ಪತ್ತು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯೂ ಅವರಲ್ಲಿದೆ. ಇದರ ಜತೆ ಜತೆಗೆ ಬೇರೆ ಪಕ್ಷಗಳಿಂದ ಬರುತ್ತಿರುವ ನಾಯಕರೊಂದಿಗೆ ಒಂದಷ್ಟು ಮತಗಳು ಪಕ್ಷಕ್ಕೆ ಹರಿದು ಬರುತ್ತವೆ ಎಂಬ ವಿಶ್ವಾಸವೂ ಅವರಲ್ಲಿದೆ.

ಮ್ಯಾಜಿಕ್ ಸಂಖ್ಯೆಗಿಂತಲೂ ಅಧಿಕ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬೇರೆ ಬೇರೆ ಪಕ್ಷದಿಂದ ಬರುವ ನಾಯಕರನ್ನು ಸೇರಿಸಿಕೊಳ್ಳುತ್ತಾ ಹೋದರೆ ಪಕ್ಷದಲ್ಲಿನ ನಾಯಕರ ಸಂಖ್ಯೆ ಹೆಚ್ಚಾಗುತ್ತದೆ. ಲೋಕ ಸಭಾ ಚುನಾವಣಾ ದೃಷ್ಟಿಯಿಂದ ನೋಡಿದರೆ ಮೇಲ್ನೋಟಕ್ಕೆ ಅದರಿಂದ ಲಾಭದಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದರೂ ಅಚ್ಚರಿಯಿಲ್ಲ. ಮೇಲ್ಮಟ್ಟದ ನಾಯಕರು ಎಲ್ಲರನ್ನು ಪಕ್ಷದೊಳಕ್ಕೆ ಸುಲಭವಾಗಿ ಸೇರಿಸಿಕೊಳ್ಳಬಹುದು ಆದರೆ ತಳಮಟ್ಟದಲ್ಲಿ ಅದರ ಪರಿಣಾಮಗಳು ಬೇರೆಯದ್ದೇ ಆಗಿರುತ್ತದೆ.
ಪಕ್ಷಗಳು ನಾಯಕರನ್ನು ಸೃಷ್ಟಿಸಬೇಕು
ಧೀರ್ಘಕಾಲದಿಂದ ಪಕ್ಷಕ್ಕಾಗಿ ದುಡಿಯುತ್ತಾ ಬಂದಿರುವ ನಾಯಕರಿಗೆ ಇದರಿಂದ ಅಸಮಾಧಾನವಾಗುತ್ತದೆ. ಜತೆಗೆ ಬಣಗಳು ಹುಟ್ಟಿಕೊಳ್ಳುತ್ತವೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವೆ ಪೈಪೋಟಿಗಳು ಆರಂಭವಾಗುತ್ತವೆ. ಇದರಿಂದ ನಿಧಾನವಾಗಿ ಬಂಡಾಯಗಳು ಶುರುವಾಗಿ ಬಣಗಳಾಗಿ ವಿಂಗಡಣೆಗೊಂಡು ಅದರಿಂದ ಪಕ್ಷಕ್ಕೆ ತೊಂದರೆಯಾದರೂ ಅಚ್ಚರಿಪಡಬೇಕಾಗಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿಯ ನಾಯಕರು ಕಳೆದ ವಿಧಾನಸಭಾ ಚುನಾವಣೆ ವೇಳೆ ಯಾವ ರೀತಿಯ ಹೇಳಿಕೆಗಳನ್ನು ನೀಡಿದರು ಮತ್ತು ಅವರ ಕಾರ್ಯವೈಖರಿ ಹೇಗಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಅವತ್ತು ಅಧಿಕಾರ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಎಳೆದು ತಂದಿದ್ದರು. ಆದರೆ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಸಾಧ್ಯವಾಗಲೇ ಇಲ್ಲ. ಆ ಪೈಕಿ ಕೆಲವು ನಾಯಕರು ಈಗಲೂ ಬಿಜೆಪಿಯಲ್ಲಿದ್ದರೂ ಅವರ ಸುತ್ತಲೂ ಸಂಶಯದಿಂದಲೇ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಸ್ಥಿತಿಯೂ ಇದೇ ಆಗಿದೆ. ಅವತ್ತು ಬಿಜೆಪಿ ಇವತ್ತು ಕಾಂಗ್ರೆಸ್, ನಾಳೆ ಇನ್ಯಾವುದೋ ಪಕ್ಷ ಅಧಿಕಾರಕ್ಕೆ ಬರಬಹುದು. ಆದರೆ ಎಲ್ಲ ಕಾಲದಲ್ಲೂ ಅಧಿಕಾರದಲ್ಲಿರುವ ಪಕ್ಷದತ್ತ ನಾಯಕರು ಮುಖ ಮಾಡುವುದು ಸಾಮಾನ್ಯವೇ. ನಾಯಕರನ್ನು ಸೃಷ್ಟಿಸುವ ಪಕ್ಷವಷ್ಟೆ ಗಟ್ಟಿಯಾಗಿ ಉಳಿದುಕೊಳ್ಳಲು ಸಾಧ್ಯ. ಅದನ್ನು ರಾಜಕೀಯ ನಾಯಕರು ಮರೆಯಬಾರದು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications