Karnataka rain: ದೀಪಾವಳಿ ಹಬ್ಬ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ: IMD
ಬೆಂಗಳೂರು, ಅಕ್ಟೋಬರ್ 21: ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮುಂದಿನ 24 ಗಂಟೆ ಸಾಧಾರಣದಿಂದ ವ್ಯಾಪಕವಾಗಿ ಮಳೆ ಸುರಿಯಲಿದ್ದು, ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಪ್ರಕಾರ, ದೀಪಾವಳಿ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿ ನಿಮ್ಮ ಊರುಗಳಿಗೆ ತೆರಳುವವರು ತುಸು ಎಚ್ಚರಿಕೆ ವಹಿಸುವುದು ಅಗತ್ಯ. ಬೆಂಗಳೂರಿನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹಬ್ಬದ ಹಿನ್ನೆಲೆ ರಜೆ ಹಾಕಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಅವರಿಗೆ ಹೆದ್ದಾರಿಯಲ್ಲಿ ಆಗಾಗ ಬರುವ ಗುಡುಗು ಸಹಿತ ಮಳೆ ತೊಂದರೆ ನೀಡುವ ಸಾಧ್ಯತೆ ಇದೆ.
ಬೆಂಗಳೂರಿನಿಂದ ಮೈಸೂರು ಎಕ್ಸಪ್ರೆಸ್ ವೇನಲ್ಲಿ ಮುಂದಿನ ಶನಿವಾರ ಸಂಜೆವರೆಗೆ ಆಗಾಗ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಹಾಸನ ಮಾರ್ಗವಾಗಿ ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಟಿ ಜಿಟಿ ಮಳೆ ಆಗಲಿದೆ. ಬೆಂಗಳೂರಿನಿಂದ ಹಾಸನದವರೆಗೆ ಹಲವು ಕಡೆಗಳಲ್ಲಿ ಮತ್ತು ಹಾಸನದಿಂದ ಮಂಗಳೂರುವರೆಗೆ ಒಂದೆರಡು ಕಡೆಗಳಲ್ಲಿ ಸಾಧಾರಣವಾಗಿ ಮಳೆರಾಯ ಅಬ್ಬರಿಸಲಿದ್ದಾನೆ.
ಚಿತ್ರದುರ್ಗ, ಹಾವೇರಿ ಹೆದ್ದಾರಿಯಲ್ಲಿ ಹೆಚ್ಚು ಮಳೆ
ಅದೇ ರೀತಿ ಬೆಂಗಳೂರಿನಿಂದ ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ ಮೂಲಕ ಬೆಳಗಾವಿ ಪುಣೆ ತಲುಪುವ ರಾಷ್ಟ್ರೀಯ ಹೆದ್ದಾರಿ (NH 4)ಯಲ್ಲಿ ಸಾಕಷ್ಟು ಕಡೆಗಳಲ್ಲಿ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಅದರಲ್ಲೂ ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆ ಸಮೀಪದ ಹೆದ್ದಾರಿಯಲ್ಲಿ ಹೆಚ್ಚು ಮಳೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇನ್ನೂ ಬೆಂಗಳೂರಿನಿಂದ ಕಲಬುರಗಿ ಹಾಗೂ ಬೆಂಗಳೂರಿನಿಂದ ಕಾರವಾರದ ಕರಾವಳಿ ತೀರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಆಗಾಗ ಮಳೆ ವಾಹನ ಸವಾರರಿಗೆ ಕಿರಿಕಿರಿ ಕೊಡಲಿದೆ. ಈ ಮಾರ್ಗದ ರಸ್ತೆಯಲ್ಲೂ ಕೆಲವೊಮ್ಮೆ ಬಿಸಿಲಿನ ವಾತಾವರಣ ಜತೆಜೊತೆಗೇ ಗುಡುಗು ಸಹಿತ ಮಳೆಯೂ ಬರಲಿದೆ.
ಕಾರವಾರ ಜಿಲ್ಲಾ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ತಾಪಮಾನ ಹೆಚ್ಚಿರಲಿದೆ. ಇಲ್ಲಿ ಗರಿಷ್ಠ 33ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 25ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮಳೆ ಮುನ್ಸೂಚನೆ ತಿಳಿಸಿದೆ.