ಕರ್ನಾಟಕ; ದೇವಾಲಯಗಳ ಬಾಗಿಲು ತೆರೆಯುವುದು ಯಾವಾಗ?
ಬೆಂಗಳೂರು, ಜೂನ್ 29; ಕರ್ನಾಟಕ ಸರ್ಕಾರ ಜೂನ್ 21ರಿಂದಲೇ ಲಾಕ್ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ ದೇವಾಲಯಗಳ ಬಾಗಿಲು ಇನ್ನೂ ಭಕ್ತಾದಿಗಳಿಗೆ ತೆರದಿಲ್ಲ.
ಮಂಗಳವಾರ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಮಾತನಾಡಿದರು. "ರಾಜ್ಯದ ಎ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದರು.
"ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನೀಡಿದರೆ ಜನದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಲಿದೆ. ಜುಲೈ 5ರೊಳಗೆ ದೇವಾಲಯ ತೆರೆಯುವ ಕುರಿತು ತೀರ್ಮಾನ ಮಾಡಲಾಗುತ್ತದೆ" ಎಂದು ಸಚಿವರು ಹೇಳಿದರು.

"ಆರೋಗ್ಯ ಇಲಾಖೆ ಜೊತೆ ದೇವಾಲಯ ತೆರೆಯುವ ಕುರಿತು ಚರ್ಚೆ ನಡೆಸಲಾಗುತ್ತದೆ. ಆರಂಭದಲ್ಲಿ ದರ್ಶನ, ಪೂಜೆ ಮತ್ತು ಅನ್ನ ದಾಸೋಹಗಳಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ" ಎಂದು ಸಚಿವರು ವಿವರಣೆ ನೀಡಿದರು.
"ಗುರುವಾರ ಅಥವ ಶುಕ್ರವಾರ ಆರೋಗ್ಯ ಇಲಾಖೆ ಜೊತೆ ಚರ್ಚೆ ಮಾಡಿ. ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.
ಏಪ್ರಿಲ್ನಲ್ಲಿ ಕೋವಿಡ್ 2ನೇ ಅಲೆ ಪ್ರಭಾವ ಹೆಚ್ಚಾದ ಕಾರಣ ಲಾಕ್ಡೌನ್ ಘೋಷಣೆ ಮಾಡಲಾಯಿತು. ಆಗ ದೇವಾಲಯಗಳನ್ನು ಮುಚ್ಚಲಾಗಿದೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ.
ಪ್ರಸ್ತುತ ದೇವಾಲಯಗಳಿಗೆ ಭಕ್ತರ ಭೇಟಿಗೆ ಅವಕಾಶವಿಲ್ಲ. ಅಲ್ಲಿನ ಸಿಬ್ಬಂದಿಗಳು ಸಂಪ್ರದಾಯದಂತೆ ಪ್ರತಿನಿತ್ಯ ಪೂಜೆಗಳನ್ನು ಮಾತ್ರ ಮಾಡುತ್ತಿದ್ದಾರೆ. ಸರ್ಕಾರ ಜೂನ್ 21ರಂದು ಅನ್ಲಾಕ್ ಘೋಷಣೆ ಮಾಡಿದರೂ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿಲ್ಲ.












Click it and Unblock the Notifications