ವಿಪಕ್ಷ ನಾಯಕನಿಲ್ಲದೆ ಸದನ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಅಪಮಾನವಿಲ್ಲ ಎಂದ ಡಿಕೆಶಿ
ಬೆಂಗಳೂರು, ಜುಲೈ 19: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಜನ ನಮಗೆ ಅಧಿಕಾರ ನೀಡಿರುವ ಕಾರಣ ನಾವು ಇಲ್ಲಿ ಕೂತಿದ್ದೇವೆ. ಬಿಜೆಪಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಹಾಗೂ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಗಲೂ ನಾವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೆವು. ಆಗಲೂ ಡ್ಯಾನಿಶ್ ಅಲಿ ಸಮೇತ ಬಹುತೇಕ ಇದೇ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ನಾವು ಡ್ಯಾನಿಶ್ ಅಲಿಯನ್ನು ಪುಡಿಪುಕ್ಕ ಎಂದು ಕರೆಯಲು ಸಾಧ್ಯವೇ?

ಈ ಬಾರಿ ಈ ನಾಯಕರು ದೇಶವನ್ನು ಉಳಿಸಲು ಭಾರತದ ಭವಿಷ್ಯ ಉಳಿಸಲು ಅವರದೇ ಆದ ಸಿದ್ಧಾಂತ ಇಟ್ಟುಕೊಂಡು ಆಗಮಿಸಿದ್ದಾರೆ. ರಾಜಕಾರಣದಲ್ಲಿ ಅವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇತ್ತು. ಆಗಲೂ ಶಿಷ್ಟಾಚಾರ ಪಾಲನೆ ಮಾಡಲಾಗಿತ್ತು.
ಕುಮಾರಸ್ವಾಮಿ ಅವರು ಕೇಳಿದಾಗಲೂ ಶಿಷ್ಟಾಚಾರ ಪಾಲನೆ ಮಾಡಿದ್ದೇವೆ, ಬಿಜೆಪಿಯವರು ಕೇಳಿದಾಗಲೂ ನಾವು ಶಿಷ್ಟಾಚಾರ ಪಾಲಿಸಿದ್ದೇವೆ. ಆಗ ಶಿಷ್ಟಾಚಾರ ಪಾಲಿಸಿದ್ದ ಅಧಿಕಾರಿಗಳೇ ಈಗಲೂ ಇದ್ದಾರೆ. ಬೇಕಿದ್ದರೆ ಆಗ ಯಾರಿಗೆಲ್ಲಾ ಶಿಷ್ಟಾಚಾರ ಪಾಲನೆ ಮಾಡಿದ್ದೆವು ಎಂದು ಪಟ್ಟಿ ನೀಡಬಲ್ಲೆ. ಇದರಲ್ಲಿ ವಿಶೇಷವಿಲ್ಲ ಎಂದರು.
ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಗೊಂದಲವಿದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಹಾಗೂ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಸದನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಅಪಮಾನವಿಲ್ಲ.
ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೆಳಗಿನಿಂದ ಸಂಜೆವರೆಗೂ ಇಲ್ಲಿ ಡ್ರಾಮಾ, ನೃತ್ಯ, ಮಾತುಗಳು ಎಲ್ಲವನ್ನು ಮಾಡುತ್ತಿದ್ದಾರೆ. ಬಿಜೆಪಿಯ ಈ ಪ್ರಯತ್ನಕ್ಕೆ ಇಲ್ಲಿ ಸೊಪ್ಪು ಹಾಕುವವರು ಯಾರೂ ಇಲ್ಲ. ನಾವು ಇದಕ್ಕೆ ಬಗ್ಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ನಾವು ಸಿದ್ಧವಿದ್ದೇವೆ. ಹೋರಾಟಕ್ಕೂ ರೆಡಿಯಾಗಿದ್ದೇವೆ. ಜನರ ಮುಂದೆ ಹೋಗಲು ಸಿದ್ಧ ಎಂದರು.
ಜನ ನಿಮ್ಮನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ನಮ್ಮ ಆಡಳಿತವನ್ನು ಸ್ವಲ್ಪ ತಾಳ್ಮೆಯಿಂದ ನೋಡಿ. ಪ್ರತಿ ನಿತ್ಯ ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇಂದೂ ಕೂಡ, ದೇಶದಲ್ಲಿ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮಾಡುತ್ತಿದ್ದೇವೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಗೃಹಲಕ್ಷ್ಮಿ ಕಾರ್ಯಕ್ರಮದ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ನೋಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಜಾತಿ, ಧರ್ಮ ಬೇಧ ಎಲ್ಲವನ್ನು ಪಕ್ಕಕ್ಕಿಟ್ಟು ಅವರಿಗೆ ನೆರವು ನೀಡುತ್ತಿದ್ದೇವೆ. ಅವರ ಪಕ್ಷದವರಿಗೂ ನಾವು ಈ ಯೋಜನೆಯಲ್ಲಿ ಸಹಾಯ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಅವರು ಹತಾಶೆ, ಗಾಬರಿಯಾಗಿದ್ದಾರೆ. ಅವರು ನಮ್ಮ ಯೋಜನೆಗಳಿಗೆ ಪ್ರಚಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಇಂದು ಅವರು ಪ್ರತಿಭಟನೆ ಹೆಸರಲ್ಲಿ ತೋರಿದ ವರ್ತನೆ, ಸ್ಪೀಕರ್ ಸ್ಥಾನಕ್ಕೆ ನೀಡಿದ ಅಗೌರವವನ್ನು ನಾವು ಖಂಡಿಸುತ್ತೇವೆ. ಈ ಸಂದರ್ಭದಲ್ಲಿ ನಾವು ನಿಮಗೆ ಧೈರ್ಯ ತುಂಬಲು ಬದ್ಧರಾಗಿದ್ದೇವೆ ಎಂದು ಹೇಳಿದರು.












Click it and Unblock the Notifications