ಉತ್ತರಕನ್ನಡದಲ್ಲಿ ಭಾರೀ ಮಳೆ, ಮೀನುಗಾರಿಕೆ ಸ್ಥಗಿತ
ಕಾರವಾರ, ಸೆಪ್ಟೆಂಬರ್ 24 : ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. 60ಕ್ಕೂ ಅಧಿಕ ದೋಣಿಗಳು ಬೈತಖೋಲ್ ಬಂದರು ಬಳಿ ಲಂಗರು ಹಾಕಿವೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದೆರಡು ವಾರಗಳಿಂದ ಗಾಳಿ ಸಹಿತ ಮಳೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳ ದೋಣಿಗಳು ಸೇರಿದಂತೆ ಕೇರಳ, ಗೋವಾ, ತಮಿಳುನಾಡು ರಾಜ್ಯಗಳ 60ಕ್ಕೂ ಅಧಿಕ ದೋಣಿಗಳು ಇಲ್ಲಿನ ಬೈತಖೋಲ್ ಬಂದರು ಬಳಿ ಲಂಗರು ಹಾಕಿವೆ.
ಕರ್ನಾಟಕದಲ್ಲಿ ಎರಡು ದಿನ ಸಾಧಾರಣ ಮಳೆ ಮುನ್ಸೂಚನೆ

ಇದರಿಂದಾಗಿ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಸ್ಥಳೀಯ ಮಾರುಕಟ್ಟೆಗೆ ಮೀನುಗಳ ಸರಬರಾಜು ಕಡಿಮೆಯಾಗಿದೆ. ಜತೆಗೆ ಮೀನುಗಳ ದರದಲ್ಲಿಯೂ ಭಾರೀ ಏರಿಕೆಯಾಗಿದೆ.
ಮೊಬೈಲ್ ಗೆ ಸಂದೇಶ : ಸಮುದ್ರದಲ್ಲಿ ತೂಫಾನ್ ಹೆಚ್ಚಿದೆ. ಈ ವೇಳೆ ಮೀನುಗಾರಿಕೆಗೆ ತೆರಳುವುದು ಅಪಾಯಕಾರಿ. ಗಾಳಿಯು ಜೋರಾಗಿ ಬೀಸುವುದರಿಂದ ಬಲೆಗಳನ್ನು ಬಿಡಲು ಆಗುವುದಿಲ್ಲ ಎಂಬ ಸಂದೇಶ ಮೀನುಗಾರರಿಗೆ ಬರುತ್ತಿದೆ.
'ಹೈದರಾಬಾದ್ನಲ್ಲಿರುವ ಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರವು ಆಳಸಮುದ್ರದ ಹವಾಮಾನ ಕುರಿತು ಪ್ರತಿನಿತ್ಯ ಮೀನುಗಾರರ ಮೊಬೈಲ್ಗಳಿಗೆ ಸಂದೇಶ ಕಳುಹಿಸುತ್ತದೆ' ಎಂದು ಪರ್ಶಿಯನ್ ಬೋಟ್ ಮಾಲೀಕರ ಸಂಘದವರು ಹೇಳಿದ್ದಾರೆ.
ಈ ಸಂದೇಶವನ್ನು ಆಧರಿಸಿ ಮೀನುಗಾರಿಕೆಗೆ ತೆರಳ ಬೇಕೋ ಅಥವಾ ಬೇಡವೇ ಎಂಬುದನ್ನು ಮೀನುಗಾರರು ನಿರ್ಧರಿಸುತ್ತಾರೆ. ಆಳ ಸಮುದ್ರದಲ್ಲಿ ತೂಫಾನ್ ಇರುವುದಾಗಿ ಕೇಂದ್ರವು ಮಾಹಿತಿ ನೀಡಿದೆ. ನಾಲ್ಕೈದು ದಿನಗಳಿಂದ ಇದೇ ರೀತಿಯ ವಾತಾವರಣ ಇರುವುದರಿಂದ ಹಾಗೂ ಸುರಕ್ಷತೆ ದೃಷ್ಟಿಯಿಂದ ಬೋಟ್ ಗಳು ಲಂಗರು ಹಾಕಿವೆ.
ಅಲೆಗಳ ಆರ್ಭಟ : ಆಳ ಸಮುದ್ರದಲ್ಲಿ ಗಾಳಿ ಹಾಗೂ ತೆರೆಗಳ ಆರ್ಭಟ ಜೋರಾಗಿದೆ. ಕಡಲತೀರದಿಂದ ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 7ರಿಂದ 9 ಅಡಿ ಎತ್ತರ ದೈತ್ಯ ಅಲೆಗಳು ಏಳುತ್ತಿದ್ದು, ಗಾಳಿಯು ಗಂಟೆಗೆ 29 ಕಿ.ಮೀ ವೇಗದಲ್ಲಿ ಬೀಸುತ್ತಿವೆ.












Click it and Unblock the Notifications