CT Ravi: ಸಿ.ಟಿ ರವಿ ತಲೆಗೆ ಗಾಯವಾಗಿದ್ದು ಹೇಗೆ: ಪರಮೇಶ್ವರ್ ಹೇಳಿದ್ದೇನು ನೋಡಿ!
ಬಿಜೆಪಿಯ ಎಂಎಲ್ಸಿ ಸಿ.ಟಿ ರವಿ ಅವರ ತಲೆಗೆ ಗಾಯವಾಗಿದ್ದು, ಇದನ್ನು ಯಾರು ಮಾಡಿದರು ಹಾಗೂ ಈ ಘಟನೆ ಹೇಗೆ ನಡೆಯಿತು ಎನ್ನುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ರಾತ್ರೋ ರಾತ್ರಿ ಬಂಧಿಸಲಾಗಿದೆ. ಬಂಧನವಾದ ಮೇಲೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ.
ಸಿ.ಟಿ ರವಿ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ವಿಚಾರವೂ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಸಚಿವ ಡಿ.ಕೆ ಶಿವಕುಮಾರ್ ಅವರು ಸಹ ಮಾತನಾಡಿದ್ದು, ಸಿ.ಟಿ ರವಿ ಅವರು ಮಾತನಾಡಿದ್ದಾರೆ ಎನ್ನುವ ವಿಚಾರಕ್ಕೆ ನಾನು ಸಮರ್ಥಿಸಿಕೊಳ್ಳುವುದಿಲ್ಲ ಅವರನ್ನು ನಡೆಸಿಕೊಳ್ಳುತ್ತಿರುವ ವಿಧಾನದ ಬಗ್ಗೆ ನನಗೆ ವಿರೋಧವಿದೆ. ಒಂದೊಮ್ಮೆ ಸಿ.ಟಿ.ರವಿ ಅವರು ಅಶ್ಲೀಲ ಪದವನ್ನು ಬಳಸಿದ್ದರೆ ನಾನು ಅದನ್ನು ಸಮರ್ಥಿಸಿಕೊಳ್ಳುವುದಿಲ್ಲ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದಾದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ ಎಂದು ಅವರು ಪ್ರಶ್ನೆ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಹಾಗೂ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ ಜಿ. ಪರಮೇಶ್ವರ್ ಅವರು ಸಿಟಿ ರವಿ ವಿಚಾರವಾಗಿ ಮಾತನಾಡಿದ್ದಾರೆ.

ಆದರೆ, ಈ ವಿಷಯದಲ್ಲೂ ಸಿ.ಟಿ ರವಿ ಅವರ ಮೇಲೆ ಹಲ್ಲೆ ಹೇಗೆ ನಡೆಯಿತು ಎನ್ನುವ ಬಗ್ಗೆ ಜಿ. ಪರಮೇಶ್ವರ್ ಅವರು ಸರಿಯಾಗಿ ವಿವರಿಸಿಲ್ಲ. ಪೊಲೀಸರು ಎಲ್ಲವನ್ನೂ ನಮ್ಮನ್ನು ಕೇಳಿಯೇ ಮಾಡಲ್ಲ. ಸಂದರ್ಭಕ್ಕೆ ಅನುಸಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಎಂಎಲ್ಸಿ ಸಿಟಿ ರವಿ ಅವರನ್ನು ಪೊಲೀಸರು ರಾತ್ರಿಪೂರ್ತಿ ಸುತ್ತಾಡಿಸಿದ್ದಾರೆ ಅನ್ನುವ ವಿಚಾರ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಹಿರೇಬಾಗೆವಾಡಿ ಪೊಲೀಸ್ ಠಾಣೆಗೆ ಸಿ.ಟಿ ರವಿಯನ್ನು ಕರೆದುಕೊಂಡು ಹೋಗಲಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು ಅಲ್ಲಿಗೆ ಹೋಗಿದ್ದರು. ಆದರೆ, ಸಿಟಿ ರವಿಯನ್ನ ಹೊರಗೆ ಸುತ್ತಾಡಿಸಿರೋದರ ಬಗ್ಗೆ ನನಗೆ ಗೊತ್ತಿಲ್ಲ. ಪೊಲೀಸರು ಎಲ್ಲಾ ಕೆಲಸವನ್ನು ನನ್ನ ಹತ್ತಿರ ಕೇಳಿಯೇ ಮಾಡಲ್ಲ. ಮುಖ್ಯಮಂತ್ರಿಯಾಗಲಿ ಇಲ್ಲ ನಾನಾಗಲಿ ಯಾವುದೇ ನಿರ್ದಿಷ್ಟ ಸೂಚನೆಯನ್ನು ಈ ವಿಚಾರದಲ್ಲಿ ಕೊಟ್ಟಿಲ್ಲ. ನಿಯಮಾನುಸಾರ ಪೊಲೀಸರು ಎಲ್ಲಾ ಕೆಲಸ ಮಾಡ್ತಾರೆ. ಇದೇ ರೀತಿ ಮಾಡಿ ಅಂತ ನಾವು ಹೇಳಿಲ್ಲ ಎಂದು ಅವರು ಉತ್ತರಿಸಿದ್ದಾರೆ.

ಕಾನ್ಫಿಡೆನ್ಸ್ ವಿಚಾರ: ಇದು ಕಾನ್ಫಿಡೆನ್ಸ್ ವಿಚಾರವಾಗಿದೆ. ಎಲ್ಲಾ ನಿಯಮಗಳನ್ನು ಅನುಸರಿಸಿಯೇ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆಯ ಕೆಲವು ಪ್ರಮುಖ ವಿಚಾರಗಳನ್ನು ಸಾರ್ವಜನಿಕರ ಮುಂದೆ ಇರಿಸಲು ಸಾಧ್ಯವಿಲ್ಲ. ಆದರೆ, ಖಾನಾಪುರ ಪೊಲೀಸ್ ಠಾಣೆಯಲ್ಲಿ ಇದ್ದಾಗಲೇ ಸಿಟಿ ರವಿ ಅವರ ತಲೆಗೆ ಗಾಯವಾಗಿ ರಕ್ತ ಬಂದಿರುವ ವಿಚಾರ ನನಗೆ ತಿಳಿದಿಲ್ಲ. ಈ ವಿಷಯವಾಗಿ ಮಾಹಿತಿ ತರಿಸಿಕೊಳ್ಳುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದೃಷ್ಟಿಯಿಂದಲೂ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಪೊಲೀಸ ಇಲಾಖೆ ವಿಚಾರದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಅವರು ಅವರ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.












Click it and Unblock the Notifications