ಭುಗಿಲೆದ್ದ ಆಕ್ರೋಶ: ಸಂಕಷ್ಟದಲ್ಲಿರುವ ಕಾಂಗ್ರೆಸ್ ಅನ್ನು ದಡ ಸೇರಿಸುವವರಾರು?
Recommended Video

ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಆಕ್ರೋಶ ಇನ್ನೂ ಶಮನವಾಗುತ್ತಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಇದರ ತೀವ್ರತೆ ಹೆಚ್ಚಾಗುತ್ತಿದೆ. ಅಸಮಾಧಾನ ಸರಿಪಡಿಸಲು ತಮ್ಮಿಂದ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಹಿರಿಯ ಮುಖಂಡರು ಮಾಡುತ್ತಿದ್ದರೂ, ಪರಿಸ್ಥಿತಿ ಕೈಮೀರಿ ಹೋಗುವಂತೆ ಕಾಣುತ್ತಿದೆ.
ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಸಂಪುಟ ವಿಸ್ತರಣೆಯ ನಂತರ ಪಕ್ಷದ ವಿರುದ್ದ ಬೇಸರಿಸಿಕೊಂಡಿದ್ದಾರೆ. ಕೆಲವರು, ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದರೆ, ಇನ್ನೊಂದಷ್ಟು ಶಾಸಕರು ಸೈಲೆಂಟ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಸಂಪುಟ ವಿಸ್ತರಣೆಯ ವೇಳೆ ಒಂದಷ್ಟು ಆಕ್ರೋಶ ಹೊರಬೀಳುವುದು ಸಹಜ ಎನ್ನುವುದು ಹೌದಾದರೂ, ಈ ಮಟ್ಟಿಗೆ ಅತೃಪ್ತರು ಸಿಡಿದೇಳುತ್ತಾರೆಂದು ಬಹುಷಃ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಹಾಕಿರಲಿಕ್ಕಿಲ್ಲ. ಕೆಲವರಂತೂ ಯಾವುದೇ ಮಾತುಕತೆಗೆಗೂ ಬಗ್ಗುತ್ತಿಲ್ಲ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುವುದಾದರೆ, ಸದ್ಯ ಕಾಂಗ್ರೆಸ್ಸಿಗೆ ವರ್ಚಸ್ವೀ ಮುಖಂಡನ ಕೊರತೆ ಕಾಣುತ್ತಿರುವುದು ಎದ್ದು ಕಾಣುತ್ತಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಪಕ್ಷದೊಳಗೆ ಅವರಿಗಿದ್ದ ಹತೋಟಿ ಈಗ ಪರಮೇಶ್ವರ್ ಅವರಿಗಿಲ್ಲ. ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಎರಡೆರಡು ಹುದ್ದೆಯನ್ನು ನಿಭಾಯಿಸುವಲ್ಲಿ ಪರಮೇಶ್ವರ್ ಹಿನ್ನಡೆ ಅನುಭವಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
ಎಂ ಬಿ ಪಾಟೀಲ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ಸಿನ ಯಾವ ಮುಖಂಡರಿಗೂ ಸಾಧ್ಯವಾಗುತ್ತಿಲ್ಲ. ಪಾಟೀಲರಂತೂ, ಸಮಾಧಾನ ಹೇಳಲು ಬಂದು ಪರಮೇಶ್ವರ್ ಅವರನ್ನೇ ಕ್ಲಾಸ್ ತೆಗೆದುಕೊಂಡು ಕಳುಹಿಸಿದ್ದಾರೆ. ಮುಂದೆ ಓದಿ..

ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್
ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸಚಿವ ಸಂಪುಟ ವಿಸ್ತರಣೆಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಹಿರಿಯ ಕಾಂಗ್ರೆಸ್ ಮುಖಂಡರು ತಮಗೆ ಬೇಕಾದವರಿಗೆ ಮಾತ್ರ ಲಾಬಿ ನಡೆಸಿದರು ಎನ್ನುವ ಮಾತೂ ಕೇಳಿಬರುತ್ತಿರುವುದರಿಂದ, ಅತೃಪ್ತಿ ಶಮನ ದಿನದಿಂದ ದಿನಕ್ಕೆ ಕಗ್ಗಂಟಾಗಿಯೇ ಮುಂದುವರಿಯುತ್ತಿದೆ. ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ತಂದಿದ್ದೇ ದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ವೇಣುಗೋಪಾಲ್ ವರ್ತಿಸುತ್ತಿದ್ದಾರೆ ಎನ್ನುವುದು ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅತೃಪ್ತ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆಗೆ ಎಚ್ಡಿಕೆ ಬರಬೇಕಾಯಿತೇ?
ಚುನಾವಣೆಗೆ ಮುನ್ನ ವೈಯಕ್ತಿಕ ಮಟ್ಟದಲ್ಲಿ ಟೀಕೆಟಿಪ್ಪಣಿ ಮಾಡುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮುಖಂಡರು, ನಂತರ ಒಂದಾಗಿದ್ದು ಕಾರ್ಯಕರ್ತರ ವಲಯದಲ್ಲಿ ಇನ್ನೂ ಅರಗಿಸಿಕೊಳ್ಳಲಾಗದ ರಾಜಕೀಯ ವಿದ್ಯಮಾನ. ಅಂತದರಲ್ಲಿ, ಎಂ ಬಿ ಪಾಟೀಲರ ಕೋಪ ತಣ್ಣಗಾಗಿಸಲು ಕುಮಾರಸ್ವಾಮಿ ಬಂದಿದ್ದು, ಒಂದು ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ತೀವ್ರ ಹಿನ್ನಡೆ. ಪಾಟೀಲರ ಕೋಪವನ್ನು ಶಮನಗೊಳಿಸಲು ಎಚ್ಡಿಕೆ ಯಶಸ್ವಿಯಾಗದಿದ್ದರೂ. ಜೆಡಿಎಸ್ ಪಕ್ಷದ ಮುಖಂಡರೊಬ್ಬರು, ಕಾಂಗ್ರೆಸ್ ನಾಯಕನನ್ನು ಸಮಾಧಾನ ಪಡಿಸಲು ಬಂದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗುತ್ತಿರುವ ಹಿನ್ನಡೆಗೆ ಹಿಡಿದ 'ಕನ್ನಡಿ'ಯಂತಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಪಾಟೀಲರು ಮೊದಲು ಹೋಗಿ ಕಣ್ಣೀರು ಹಾಕಿದ್ದು ಸಿದ್ದರಾಮಯ್ಯನವರ ಮುಂದೆ
ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿನ ಕಾಂಗ್ರೆಸ್ ವಿದ್ಯಮಾನಗಳನ್ನು ಗಮನಿಸುವುದಾದರೆ, ಸಿದ್ದರಾಮಯ್ಯ ಪಕ್ಷದ ನಾಯಕರ ಆಕ್ರೋಶಕ್ಕೆ ಹೆಚ್ಚು ತಲೆಕೆಡಿಸಿಕೊಳ್ಲದೇ ಇರುವುದು. ಪಕ್ಷದೊಳಗೆ ಇಷ್ಟೆಲ್ಲಾ ಚಟುವಟಿಕೆ ನಡೆಯುತ್ತಿದ್ದರೂ, ಸಿದ್ದರಾಮಯ್ಯ ತಮಗೆ ಜಯತಂದುಕೊಟ್ಟ ಬಾದಾಮಿ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಲು ಹೋಗಿದ್ದಾರೆ. ಸಚಿವ ಸ್ಥಾನ ತಪ್ಪಿದಾಗ ಪಾಟೀಲರು ಮೊದಲು ಹೋಗಿ ಕಣ್ಣೀರು ಹಾಕಿದ್ದು ಸಿದ್ದರಾಮಯ್ಯನವರ ಮುಂದೆನೇ.. ಹೀಗಿರುವಾಗ ನನಗೂ ಇದಕ್ಕೂ ಸಂಬಂಧವಿಲ್ಲದಂತೆ, ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹೋಗಿದ್ದು, ಪಕ್ಷದೊಳಗೆ ಸರಿಯಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಹೀಗೆ ಹಲವು ಗುಂಪುಗಳು
ಚುನಾವಣೆಗೆ ಮುನ್ನವೇ, ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಹೀಗೆ ಹಲವು ಗುಂಪುಗಳು ಕಾಂಗ್ರೆಸ್ ನಲ್ಲಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅದಕ್ಕೆ ಪೂರಕ ಎನ್ನುವಂತೆ, ಸಂಪುಟ ವಿಸ್ತರಣೆಯ ಸಮಯದಲ್ಲಿ ಆಯಾಯ ಗುಂಪಿನ ಶಾಸಕರಲ್ಲಿ ಒಂದಷ್ಟು ಜನರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದರಿಂದಾಗಿ, ಅರ್ಹರೂ ಸಚಿವಸ್ಥಾನದಿಂದ ವಂಚಿತರಾದರು. ಜೊತೆಗೆ, ತಮಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕೆಲವರು ಕಾರಣ ಎನ್ನುವ ಸಿಟ್ಟು, ರಾಜ್ಯ ಕಾಂಗ್ರೆಸ್ ನಲ್ಲಿ ಈ ಮಟ್ಟಿನ ಭಿನ್ನಮತ ಸ್ಪೋಟಗೊಳ್ಳಲು ಕಾರಣ ಎನ್ನುವ ಮಾತಿದೆ.

ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್
ಚುನಾವಣೆಗೆ ಸ್ವಲ್ಪದಿನ ಮುನ್ನ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡ, ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ರಾಜ್ಯ ಮುಸ್ಲಿಂ ಮುಖಂಡರಲ್ಲಿ ಬಹಳ ಅಸಮಾಧಾನವಿದೆ. ರೋಶನ್ ಬೇಗ್, ತನ್ವೀರ್ ಸೇಠ್ ಮುಂತಾದ ಮುಖಂಡರಿಗೆ ಸಚಿವ ಸ್ಥಾನ ನೀಡದಿರುವುದು ಖುದ್ದು ಆ ಇಬ್ಬರು ನಾಯಕರಿಗೆ ಮತ್ತು ಸಮುದಾಯಕ್ಕೆ ಬೇಸರ ತಂದಿದೆ. ಆದರೆ, ಈ ಇಬ್ಬರೂ ಮುಖಂಡರು, ಪಾಟೀಲರಂತೆ ಸದ್ದು ಮಾಡುತ್ತಿಲ್ಲ. ಒಟ್ಟಾರೆಯಾಗಿ, ಈಗಿನ ಕರ್ನಾಟಕ ಕಾಂಗ್ರೆಸ್ಸಿನ ಪರಿಸ್ಥಿತಿ, ಅಕ್ಷರಸಃ ನಾವಿಕನಿಲ್ಲದ ದೋಣಿಯಂತಾಗಿದೆ.












Click it and Unblock the Notifications