ಪರಿಷತ್ತಿಗೆ ಸೈನಿಕ ಯೋಗೇಶ್ವರ್ ಎಂಟ್ರಿ: ಬಿಎಸ್ವೈ ಸರಕಾರದೊಳಗಿನ ಅಸಲಿ ಗೇಂ ಇನ್ನು ಶುರು?
ನಾಮ ನಿರ್ದೇಶನದ ಮೂಲಕ, ವಿಧಾನ ಪರಿಷತ್ತಿಗೆ ಐವರ ಹೆಸರನ್ನು ಸಿಎಂ ಯಡಿಯೂರಪ್ಪ ಶಿಫಾರಸು ಮಾಡಿದ್ದರು. ಅದಕ್ಕೆ, ರಾಜ್ಯಪಾಲರಿಂದ ಅನುಮೋದನೆಯನ್ನೂ ಸಿಎಂ ಪಡೆದುಕೊಂಡಿದ್ದಾರೆ. ಅಸಲಿ ಗೇಂ ಶುರುವಾಗುವುದು ಇನ್ನು ಮುಂದೆನಾ?
Recommended Video
ನಾಮ ನಿರ್ದೇಶನಗೊಂಡ ಐವರಲ್ಲಿ ಎಚ್.ವಿಶ್ವನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಕೂಡಾ ಸೇರಿದ್ದಾರೆ. ಇವರಿಬ್ಬರು, ಈ ಹಿಂದೆನೇ, ಹಲವು ಸುತ್ತಿನ ಪ್ರಯತ್ನ ನಡೆಸಿ, ಕೊನೆಗೂ, ಪರಿಷತ್ತಿಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಇವರಿಬ್ಬರಿಗೆ ಸಚಿವ ಸ್ಥಾನದ ಅಥವಾ ಪಕ್ಷ ಸಂಘಟನೆಯ ಆಯಕಟ್ಟಿನ ಹುದ್ದೆ ಸಿಗುವುದಂತೂ ಬಹುತೇಕ ಖಚಿತ.
ವಲಸೆ ಬಿಜೆಪಿ ನಾಯಕರಿಗೆ ಕೊಟ್ಟ ಮಾತಿನಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಇನ್ನು, ಜವಾಬ್ದಾರಿ ವಹಿಸುವ ಖಾತೆಯ ಮೇಲೆ ಇನ್ನೇನು ತಕರಾರು ಇರುತ್ತೋ ಗೊತ್ತಿಲ್ಲ. ಸದ್ಯದ ಮಟ್ಟಿಗೆ, ಪ್ರಮುಖ ಖಾತೆಯ ಮೇಲೆ ಇವರಿಬ್ಬರು ಕಣ್ಣಿಟ್ಟಿರಲಾರರು. ಗೂಟದ ಕಾರು ಬಂದರೆ ಸಾಕು, ಎನ್ನುವ ನಿರ್ಧಾರಕ್ಕೆ ಬಂದಿರಬಹುದು.
ಎಚ್.ವಿಶ್ವನಾಥ್ ಅವರ ಆಯ್ಕೆಗಿಂತ, ಸೈನಿಕ ಸಿ.ಪಿ.ಯೋಗೇಶ್ವರ್ ಅವರನ್ನು ಆಯ್ಕೆ ಮಾಡಿರುವುದು, ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಯಡಿಯೂರಪ್ಪನವರ ಸರಕಾರದೊಳಗೆ ಇದು ಹೊಸ ಪವರ್ ಗೇಂ ಶುರುವಾಗಲು ನಾಂದಿ ಹಾಡಬಹುದು.

ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ವಲಸೆ ಬಂದಿದ್ದ ನಾರಾಯಣ ಗೌಡ ಜಯಶೀಲ
ಬಿಜೆಪಿಗೆ ಬುನಾದಿಯೇ ಇಲ್ಲದ ಜಿಲ್ಲೆಗಳಲ್ಲಿ ಮಂಡ್ಯ ಕೂಡಾ ಒಂದು. ಕಳೆದ ಅಸೆಂಬ್ಲಿ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ವಲಸೆ ಬಂದಿದ್ದ ನಾರಾಯಣ ಗೌಡ ಜಯಶೀಲರಾಗಿದ್ದರು. ಇವರು ಗೆದ್ದರು ಎನ್ನುವುದಕ್ಕಿಂತ, ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಮತ್ತು ಇವರ ಬೆನ್ನಿಗೆ ನಿಂತಿದ್ದ ಪಕ್ಕದ ಚನ್ನಪಟ್ಟಣದ ಯೋಗೇಶ್ವರ್ ಇವರನ್ನು ಗೆಲ್ಲಿಸಿದ್ದರು ಎನ್ನುವುದೇ ಸೂಕ್ತ.

ವಿಜಯೇಂದ್ರ ಇಲ್ಲಿ ಸ್ಪಷ್ಟ ಮೇಲುಗೈ
ಅಂದು, ಪಕ್ಷಕ್ಕಾಗಿ ದುಡಿದ, ಅದರಲ್ಲೂ, ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ಬಾವುಟ ಹಾರಿಸಲು ಕಾರಣಕರ್ತರಾದ ಯೋಗೇಶ್ವರ್ ಅವರಿಗೆ, ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಮೂಲಕ, ಬಿಜೆಪಿ ಖುಣ ಸಂದಾಯ ಮಾಡಿರಬಹುದು. ಒಂದು ವೇಳೆ, ಈ ಕಾರಣವಾಗಿದ್ದಲ್ಲಿ, ವಿಜಯೇಂದ್ರ ಇಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆಂದು ಹೇಳಬಹುದು. ಅಥವಾ..

ಯೋಗೇಶ್ವರ್ ಮಂತ್ರಿಯಾಗೋದು ಖಚಿತ
ಮಂಡ್ಯ ಭಾಗದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ ಅಲ್ಲ. ಅಲ್ಲಿ ಎರಡೂ ಪಕ್ಷಗಳಿಗೆ ಜೆಡಿಎಸ್ ಎದುರಾಳಿ. ಹೀಗಾಗಿ ಕುಮಾರಸ್ವಾಮಿ ಎದುರು ಸೋತಿರುವ ಯೋಗೇಶ್ವರ್ ಗೆ ಅಧಿಕಾರ ಕೊಡುವ ಮೂಲಕ ಪಕ್ಷ ಸಂಘಟನೆಯ ಗುರಿ ಎದ್ದು ಕಾಣುತ್ತಿದೆ.
ಅಧಿಕಾರ ಕೊಡದೇ ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಹೀಗಾಗಿ ಯೋಗೇಶ್ವರ್ ಮಂತ್ರಿಯಾಗೋದು ಖಚಿತ.

ಬಿಎಸ್ವೈಗೆ ಹಿನ್ನಡೆ ಎಂದೇ ಹೇಳಬಹುದು?
ಕಳೆದ ಬಾರಿ ಪರಿಷತ್ತು ಚುನಾವಣೆಯ ವೇಳೆಯೂ, ಯೋಗೇಶ್ವರ್ ಅಭ್ಯರ್ಥಿಯಾಗಲು ಬಹಳಷ್ಟು ಪ್ರಯತ್ನ ಮಾಡಿದ್ದರು. ರಾಜ್ಯದಿಂದ ಸಾಧ್ಯವಾಗುದಿಲ್ಲ ಎಂದರಿತಾಗ, ಕೇಂದ್ರದ ಬಿಜೆಪಿ ಮುಖಂಡರಿಗೂ ಒತ್ತಡ ಹೇರಿದ್ದರು. ಅಂದು, ರಾಜ್ಯ ಮೂಲದ ಕೇಂದ್ರದ ನಾಯಕರೊಬ್ಬರಿಂದ ಸಿಕ್ಕ ಕಮಿಟ್ಮೆಂಟ್ ಈಗ ವರ್ಕೌಟ್ ಆಗಿರಬಹುದು. ಹಾಗಿದ್ದಲ್ಲಿ, ಇಲ್ಲಿ ಮತ್ತೊಮ್ಮೆ, ಬಿಎಸ್ವೈಗೆ ಹಿನ್ನಡೆ ಎಂದೇ ಹೇಳಬಹುದು.

ಒಕ್ಕಲಿಗ ಸಮುದಾಯದ ಮೂವರು ಪ್ರಭಾವೀ ಮುಖಂಡರು
ಇನ್ನೊಂದು ಆಯಾಮದ ಪ್ರಕಾರ, ಬಿಎಸ್ವೈ ಸಂಪುಟದಲ್ಲಿ ಈಗ ಒಕ್ಕಲಿಗ ಸಮುದಾಯದ ಮೂವರು ಪ್ರಭಾವೀ ಮುಖಂಡರಿದ್ದಾರೆ. ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ ಮತ್ತು ಡಾ.ಸುಧಾಕರ್. ಕೊರೊನಾ ನಿರ್ವಹಣೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಇವರ ನಡುವೆ, ಹೊಂದಾಣಿಕೆಯ ಕೊರತೆ ಕಾಡುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಹಾಗಾಗಿ, ಅದೇ ಸಮುದಾಯದ ಯೋಗೇಶ್ವರ್ ಅವರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ, ಬಿಎಸ್ವೈ ಹೊಸ ತಂತ್ರಗಾರಿಕೆಯನ್ನು ಹಣೆದಿರಬಹುದು.

ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್ ನಡುವಿನ ಸಂಬಂಧ
ಮತ್ತೊಂದು ಆಯಾಮದ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್ ನಡುವಿನ ಸಂಬಂಧ ಸ್ವಲ್ಪವೂ ಸರಿಯಲ್ಲ ಎನ್ನುವುದು ರಾಜ್ಯಕ್ಕೆಲ್ಲಾ ಗೊತ್ತಿರುವ ವಿಚಾರ. ಹಾಗಾಗಿ, ಡಿಕೆಶಿ ವಿರುದ್ದ ಸಟೆದು ನಿಲ್ಲಲು, ಯೋಗೇಶ್ವರ್ ಸೂಕ್ತ ಆಯ್ಕೆ ಎಂದು ಬಿಎಸ್ವೈ ಮತ್ತು ಕೇಂದ್ರದ ಮುಖಂಡರು, ಸೈನಿಕನಿಗೆ ಮಣೆ ಹಾಕಿರಬಹುದು. ಯಾಕೆಂದರೆ, ರಾಜಕೀಯದಲ್ಲಿ ಇದೆಲ್ಲವೂ ಸಾಧ್ಯ.












Click it and Unblock the Notifications