ನಿಮಗೆ ಅಷ್ಟು ಖುಷಿ ಇಲ್ಲ ಅಂದ್ರೆ ನಾನು ರಾಜೀನಾಮೆಗೆ ರೆಡಿ ಇದ್ದೀನಿ!
ಬೆಂಗಳೂರು, ಮೇ. 21: ಕೋವಿಡ್ ಕಷ್ಟದಲ್ಲಿರುವ ಶಿಕ್ಷಕರಿಗೆ ಸ್ಪಂದಿಸಿ ಅಂತ ಮನವಿ ಮಾಡಿದರೆ, ಕೊರೊನಾ ಬಂದ್ರೆ ನಾನೇನು ಮಾಡಲಿ. ಅಷ್ಟು ಇಷ್ಟ ಇಲ್ಲ ಅಂದ್ರೆ ನಾನು ಈಗಲೇ ರಾಜೀನಾಮೆ ನೀಡೋಕೆ ರೆಡಿ ಇದ್ದೀನಿ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶಿಕ್ಷಣ ಸಂಸ್ಥೆಯ ಮಾಲೀಕರೊಬ್ಬರ ಜತೆ ನಡೆಸಿದ ಸಂಭಾಷಣೆಯಲ್ಲಿ ಈ ಸಂಗತಿ ಹೊರ ಬಿದ್ದಿದೆ.
ಕೋವಿಡ್ 19 ನಿಂದ ರಾಜ್ಯದಲ್ಲಿ 3.5 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಶಾಲಾ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಅಂತ ಪರಿಗಣಿಸಬೇಕು. ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಮತ್ತು ಖಾಸಗಿ ಶಾಲಾ ಸಂಸ್ಥೆ ಮಾಲೀಕರ 20 ಕ್ಕೂ ಹೆಚ್ಚು ಸಂಸ್ಥೆಗಳು ಶಿಕಷಣ ಸಚಿವರಿಗೆ ಮನವಿ ಮಾಡಿದ್ದವು. ಮುಖ್ಯಮಂತ್ರಿ ರಾಜ್ಯದಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರೂ ಶಿಕ್ಷಕರನ್ನು ಪರಿಗಣಿಸಲಿಲ್ಲ. ಇದು ಖಾಸಗಿ ಶಾಲಾ ಶಿಕ್ಷಕರ ಸಮುದಾಯದಲ್ಲಿ ಆಕ್ರೋಶ ಹುಟ್ಟು ಹಾಕಿತ್ತು. ಶಿಕ್ಷಕರು ಗಾಂಧಿಗಿರಿ ಅಭಿಯಾನ ಆರಂಭಿಸುತ್ತಿದ್ದಂತೆ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಶೇಷ ಪ್ಯಾಕೇಜ್ ಘೋಷಣೆಗೆ ಮನವಿ ಮಾಡಿದ್ದಾರೆ.
ಮಕ್ಕಳ ಕಲಿಕೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್
ರಾಜೀನಾಮೆ ಕುರಿತು ಮಾತು
ಈ ಕುರಿತು ಶಿಕ್ಷಣ ಸಚಿವರಿಗೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಬಸವರಾಜು ಎಂಬುವರು ಸುರೇಶ್ ಕುಮಾರ್ಗೆ ಕರೆ ಮಾಡಿ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಹಾರಿಕೆ ಉತ್ತರ ನೀಡಿರುವ ಸುರೇಶ್ ಕುಮಾರ್, ಕೊರೊನಾ ಸೋಂಕು ಬಂದ್ರೆ ನಾನೇನು ಮಾಡಲಿ. ನಿಮಗೆ ಅಷ್ಟು ಇಷ್ಟ ಇಲ್ಲ ಅಂದ್ರೆ ಹೇಳಿ ನಾನು ಈಗಲೇ ರಾಜೀನಾಮೆ ನೀಡೋಕೆ ಸಿದ್ದ ಇದ್ದೀನಿ ಎಂದು ಉತ್ತರ ನೀಡಿದ್ದಾರೆ. ನನ್ನ ವಿರುದ್ಧ ದೊಡ್ಡ ಮೂಮೆಂಟ್ ಮಾಡುತ್ತಿದ್ದೀರಿ. ನಿಮ್ಮ ಇದಕ್ಕೆ ಏನು ಮಾಡಲಿ ಅಂತ ಗೊತ್ತಾಗುತ್ತಿಲ್ಲ. ನಾನು ಖುರ್ಚಿಗೆ ಅಂಟಿಕೊಂಡು ಕೂತಿಲ್ಲ. ಒಳ್ಳೆ ಕೆಲಸ ಮಾಡೋಕೆ ಬಂದಿದ್ದೀನಿ ಅಷ್ಟೇ ಎಂದು ಉತ್ತರ ನೀಡಿದ್ದಾರೆ. ಶಿಕ್ಷಣ ಸಚಿವರ ಈ ಅಡಿಯೋ ತುಣುಕು ಶಿಕ್ಷಕರ ವಾಟ್ಸಪ್ ಗ್ರೂಫ್ ಗಳಲ್ಲಿ ವೈರಲ್ ಆಗಿದೆ.
ರಾಜೀನಾಮೆ ಕೊಡಲಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಶಿಕ್ಷಣ ಸಚಿವರು ರಾಜೀನಾಮೆ ನೀಡುತ್ತಾರೆ ಎಂದರೆ ಸಂತೋಷ. ಅವರು ಹೇಳಿಕೆ ನೀಡುವ ಬದಲು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಲಿ. ಈ ಮೂಲಕ ಮುಖ್ಯಮಂತ್ರಿಗಳು ನನಗೆ ಸಹಕಾರ ತೋರುತ್ತಿಲ್ಲ ಎಂದು ಸಮಾಜಕ್ಕೆ ತೋರಿಸಲಿ. ರಾಜೀನಾಮೆ ಕೊಡ್ತೀನಿ ಎನ್ನುವುದು ಹೇಳಿಕೆಗೆ ಸೀಮಿತ ಆಗಬಾರದು. ಶಿಕ್ಷಣ ಸಚಿವರು ರಾಜೀನಾಮೆ ನೀಡಿದರೆ ರಾಜ್ಯಕ್ಕೆ ತಿಳಿಯುತ್ತದೆ. ರಾಜ್ಯದಲ್ಲಿ ಕೊರೊನಾ ಸೋಂಕು ಕಾರಣಕ್ಕೆ ಅನೇಕ ಯೋಜನೆಗಳು ಮೂಲೆಗುಂಪಾಗಿವೆ. ಸಾವಿರಾರು ಕೋಟಿ ಉಳಿದುಕೊಂಡಿದೆ. ಇವರಿಗೆ ಶಿಕ್ಷಕರ ಬಗ್ಗೆ ಕಾಳಜಿ ಇದ್ದಿದ್ದರೆ ಮುಖ್ಯಮಂತ್ರಿಗಳನ್ನು ಕೇಳುವ ಪ್ರಮೇಯವೇ ಇಲ್ಲ. ಸಾವಿರ ಮನವಿ ನೀಡಿದರೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿಲ್ಲ. ಖಾಸಗಿ ಶಾಲಾ ಶಿಕ್ಷಕರು ಅಭಿಯಾನ ಆರಂಭಿಸಿದ ಬಳಿಕ ಮುಖ್ಯಮಂತ್ರಿಗಳಿಗೆ ನೆಪಕ್ಕೆ ಪತ್ರ ಬರೆಯುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಲ್ಲಾ ಕಡೆಯೂ ಭ್ರಷ್ಟಾಚಾರ
ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿವೆ. ಶೇ. 60 ರಷ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಖಾಸಗಿ ಶಿಕ್ಷಣ ವ್ವವಸ್ಥೆ. ಇದು ಗೊತ್ತಿದ್ದರೂ ಆರ್.ಆರ್. ನವೀಕರಣ ಮಾಡಬೇಕಾದರೂ ಲಂಚ ನೀಡಬೇಕು. ಆರ್ ಟಿಇ ಅನುದಾನ ಬಿಡುಗಡೆ ಮಾಡಲು ಭ್ರಷ್ಟಾಚಾರ. ಶಾಲಾ ಸಂಸ್ಥೆಗಳು ಕೋವಿಡ್ ಗಿಂತಲೂ ಹೆಚ್ಚಾಗಿ ಭ್ರಷ್ಟಾಚಾರಕ್ಕೆ ನಲಗುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಷ್ಟ ಕೊಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಅಂಕಿ ಅಂಶ ಏರಿಸುವ ಹುನ್ನಾರ ಎಂಬಂತೆ ಕಾಣಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಬದಲಿಗೆ ಶಿಕ್ಷಣ ಸಚಿವರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Recommended Video
ಖಾಸಗಿ ಶಾಲಾ ವಿರೋಧಿ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಾಸಗಿ ಶಾಲೆಗಳ ವಿರೋಧಿ. ಇವರಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಒಬ್ಬ ವಿಧಾನ ಪರಿಷತ್ ಸದಸ್ಯನಾಗಿ ಹಾಗೂ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ ಮಾಲೀಕನಾಗಿ ಈ ಮಾತು ಹೇಳುತ್ತಿದ್ದೀನಿ. ರಾಜ್ಯದಲ್ಲಿ 2 ಲಕ್ಷ ಮಂದಿ ಇದ್ದಾರೆ. ತಲಾ ಹತ್ತು ಸಾವಿರ ರೂಪಾಯಿ ಕೊಟ್ಟರೂ, 200 ಕೋಟಿ ರೂ. ಆಗುತ್ತೆ. ಇಚ್ಛಾ ಶಕ್ತಿ ಇದ್ದರೆ ಇದು ದೊಡ್ಡ ಸಮಸ್ಯೆ ಅಲ್ಲ. ಅಧಿಕಾರ ಇರುವರಿಗೆ, ಅವಕಾಶ ಇರುವರಿಗೆ ಜ್ಞಾನ ಇಲ್ಲ. ಶಿಕ್ಷಣ ಸಚಿವ ಉದ್ದೇಶ ಪೂರ್ವಕವಾಗಿ ಮಧ್ಯ ಪ್ರವೇಶ ಮಾಡಿ ಇಡೀ ಶಾಲೆ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿ ಮಾಡಿಬಿಟ್ಟರು ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವರು ಮಾಸ್ ಜನಪ್ರಿಯತೆಗಾಗಿ ಬಡಿದಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.