ಕೊವಿಡ್ ಸಕ್ರಿಯ ಪ್ರಕರಣ: ಇಳಿಕೆ ಕಂಡ ಕರ್ನಾಟಕದ 2 ಜಿಲ್ಲೆಗಳು
ಬೆಂಗಳೂರು, ಅಕ್ಟೋಬರ್ 08: ಕೊವಿಡ್ 19 ಸಕ್ರಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಇಳಿಕೆ ಕಂಡಿದೆ.
ಮೊದಲನೆಯದು ಬೀದರ್: ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ಕೊವಿಡ್-19 ಬಂದಾಗ ಬೀದರ್ ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳಿದ್ದವು.
6 ತಿಂಗಳು ಕಳೆದ ನಂತರ ಬುಧವಾರ ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳನ್ನು ನೋಡಿದರೆ ರಾಜ್ಯದಲ್ಲಿಯೇ ಅತಿ ಕಡಿಮೆ ಸಕ್ರಿಯ ಕೊರೊನಾ ಪ್ರಕರಣಗಳಿರುವುದು ಬೀದರ್ ಜಿಲ್ಲೆಯಲ್ಲಿ ಎಂಬುದು ತಿಳಿದುಬಂದಿದೆ.
ಅಧಿಕೃತ ಮಾಹಿತಿ ಪ್ರಕಾರ, ನಿನ್ನೆ ಜಿಲ್ಲೆಯಲ್ಲಿ 57 ಮಂದಿಗೆ ಸೋಂಕು ಪತ್ತೆಯಾಗಿದ್ದು, 35 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೇಸುಗಳು ನಿನ್ನೆ 411 ಆಗಿವೆ.

ಕೊರೊನಾ ಹೆಚ್ಚಾಗಲು ಕಾರಣ
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಿಂದ ಹಿಂತಿರುಗಿದ ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡು ಮಾರ್ಚ್ 23ರಂದು ಮೊದಲ ಕೊರೊನಾ ಕೇಸು ವರದಿಯಾಗಿತ್ತು. ಮೊದಲ ಸಾವು ಮೇ 2ರಂದು ಸಂಭವಿಸಿತ್ತು.

ವಲಸೆ ಕಾರ್ಮಿಕರಿಂದ ಸೋಂಕು ಹೆಚ್ಚಳ
ನಂತರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಆಗಮನದಿಂದ ಕೊರೋನಾ ಪ್ರಕರಣ ಹೆಚ್ಚಾಗತೊಡಗಿತು. ಆಗಸ್ಟ್ ಕೊನೆಯವರೆಗೂ ಜಾಸ್ತಿಯಾಗಿತ್ತು. ಜಿಲ್ಲೆಯಲ್ಲಿ ಸದ್ಯ 6 ಸಾವಿರದ 556 ಒಟ್ಟು ಕೊರೊನಾ ಕೇಸುಗಳಿದ್ದು ಒಟ್ಟು 6 ಸಾವಿರದ 005 ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಹೊಂದಿರುವವರ ಸಂಖ್ಯೆ ಶೇಕಡಾ 91.60ಯಷ್ಟಿದೆ ಎಂದು ಬೀದರ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಕೃಷ್ಣರೆಡ್ಡಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
ಸಕ್ರಿಯ ಕೇಸುಗಳು ಇಳಿಕೆ, ವಿಭಾಗವನ್ನು ಮುಚ್ಚಿದ ಹುಬ್ಬಳ್ಳಿಯ ಕಿಮ್ಸ್: ನಗರದ ಕಿಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಾಲ್ಕನೇ ಮಹಡಿ ಕಳೆದೊಂದು ವಾರದಿಂದ ಮುಚ್ಚಿದೆ. ಕೋವಿಡ್ ಸಕ್ರಿಯ ಕೇಸುಗಳು ಇಳಿಕೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.

18 ಸಾವಿರ ಪ್ರಕರಣಗಳಿವೆ
ಇದುವರೆಗೆ ಜಿಲ್ಲೆಯಲ್ಲಿ 18 ಸಾವಿರ ಸಕ್ರಿಯ ಕೇಸುಗಳಿದ್ದು ಕಳೆದ 10 ದಿನಗಳಿಂದೀಚೆಗೆ ಪ್ರತಿದಿನ ಕೊರೋನಾ ಕೇಸುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ 150ಕ್ಕಿಂತ ಕಡಿಮೆಯಾಗುತ್ತಿದೆ.
ಈಗ ಆಸ್ಪತ್ರೆಯಲ್ಲಿ ಸುಮಾರು 320 ರೋಗಿಗಳಿದ್ದು 93 ಮಂದಿ ಐಸಿಯುನಲ್ಲಿದ್ದಾರೆ. ದಾಖಲಾಗುವವರ ಸಂಖ್ಯೆ ಶೇಕಡಾ 20ರಷ್ಟು ಕಡಿಮೆಯಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ ಅಂತರತಾನಿ ಮಾಹಿತಿ ನೀಡಿದ್ದಾರೆ.ಕಿಮ್ಸ್ ಆಸ್ಪತ್ರೆಯಲ್ಲಿ 450 ಸಾಮಾನ್ಯ ಹಾಸಿಗೆಗಳು ಮತ್ತು 120 ಐಸಿಯು ಬೆಡ್ ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ.
ಹಿಂದಿನ ತಿಂಗಳುಗಳಲ್ಲಿ ಎಲ್ಲಾ ಹಾಸಿಗೆಗಳು ಭರ್ತಿಯಾಗಿದ್ದವು. ಕಳೆದ ಕೆಲ ದಿನಗಳಿಂದೀಚೆಗೆ ಕೊರೊನಾ ಸೋಂಕಿತರು ಹೆಚ್ಚು ದಾಖಲಾಗುತ್ತಿಲ್ಲ.












Click it and Unblock the Notifications