ಕೊರೋನಾ 4ನೇ ಅಲೆ ಗರಿಷ್ಠ ಮಟ್ಟ ಮುಟ್ಟೋದು ಯಾವಾಗ?: ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ
ಬೆಂಗಳೂರು, ಏ. 27: ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇತ್ತೀಚಿನ ಕೆಲ ದಿನಗಳಿಂದ ಗಣನೀಯವಾಗಿ ಏರಿದೆ. ನಿತ್ಯ ಸುಮಾರು ನೂರು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ದೇಶ ವ್ಯಾಪಿ ನಿನ್ನೆ ಒಂದೇ ದಿನ ದಾಖಲಾದ ಪ್ರಕರಣಗಳ ಸಂಖ್ಯೆ 3 ಸಾವಿರ ಗಡಿ ಸಮೀಪಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16 ಸಾವಿರಕ್ಕಿಂತ ಹೆಚ್ಚಿದೆ. ಕೋವಿಡ್ ನಾಲ್ಕನೇ ಅಲೆ ಶುರುವಾಗಿರುವ ಸಾಧ್ಯತೆ ಇದೆ ಎಂದು ಕೆಲವರು ಆತಂಕ ಪಡುತ್ತಿದ್ದಾರೆ. ತಜ್ಞರಿಂದ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲವಾದರೂ ಕೋವಿಡ್ ನಾಲ್ಕನೇ ಅಲೆ ಯಾವಾಗ ಬೇಕಾದರೂ ಶುರುವಾಗಬಹುದು ಎಂಬುದು ಖಾತ್ರಿಯಾಗಿದೆ.
ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಜೂನ್ ಅಂತ್ಯಕ್ಕೆ ಕೋವಿಡ್ ನಾಲ್ಕನೇ ಅಲೆ ಗರಿಷ್ಠ ಮಟ್ಟಕ್ಕೆ ಏರಬಹುದು ಎಂದಿದ್ದಾರೆ. ಐಐಟಿ ಕಾನ್ಪುರದ ಸಂಶೋಧಕರು ನೀಡಿರುವ ವರದಿಯಲ್ಲಿನ ಮಾಹಿತಿ ಆಧರಿಸಿ ಸಚಿವರು ನಾಲ್ಕನೇ ಅಲೆ ಬಗ್ಗೆ ಮಾತನಾಡಿದ್ದಾರೆ.
"ಐಐಟಿ ಕಾನ್ಪುರ್ ನವರು ಕಳುಹಿಸಿರುವ ಒಂದು ವರದಿ ಪ್ರಕಾರ ಕೋವಿಡ್ ನಾಲ್ಕನೇ ಅಲೆ ಜೂನ್ ಅಂತ್ಯಕ್ಕೆ ಆರಂಭವಾಗಬಹುದು. ಆದರೆ ಒಂದು ತಿಂಗಳ ಮುಂಚೆಯೇ ಪ್ರಕರಣಗಳು ಏರಿಕೆ ಕಾಣತೊಡಗಿವೆ. ಅವರ (ಐಐಟಿ) ಪ್ರಕಾರ ಜೂನ್ ನಂತರ ಕೋವಿಡ್ ಅಲೆ ಉತ್ತುಂಗಕ್ಕೆ ಏರಬಹುದು. ಸೆಪ್ಟೆಂಬರ್ ಮತ್ತು ಅಕ್ಟೋಬರ್ವರೆಗೂ ಈ ಅಲೆ ಮುಂದುವರಿಯುವ ಸಾಧ್ಯತೆ ಇದೆ" ಎಂದು ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಸಚಿವ ಸುಧಾಕರ್ ಪ್ರಕಾರ, ಐಐಟಿ ಕಾನ್ಪುರದ ತಜ್ಞರು ಈವರೆಗೆ ಮಾಡಿರುವ ಅಂದಾಜುಗಳು ನಿಖರವಾಗಿವೆ. ಕಳೆದ ಮೂರು ಕೋವಿಡ್ ಅಲೆಗಳ ಬಗ್ಗೆ ಅವರು ನೀಡಿದ್ದ ಮಾಹಿತಿ ಬಹುತೇಕ ನಿಖರವಾಗಿವೆ. ಈಗ ಕಳುಹಿಸಿರುವ ವರದಿ ಕೂಡ ವೈಜ್ಞಾನಿಕ ಮಾಹಿತಿ ಆಧಾರದ ಮೇಲೆ ತಯಾರಾಗಿದೆ. ಇದು ನಿಖರವಾಗಿರುತ್ತದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಮರೆಯಾಗಲ್ಲ, ರೋಗದ ಜೊತೆ ಬದುಕುವುದು ಅನಿವಾರ್ಯ:
"ಕೊರೋನಾ ವೈರಸ್ ಸಂಪೂರ್ಣ ತೊಲಗಿ ಹೋಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ನಾವು ಬದುಕು ನಡೆಸುವುದು ಅನಿವಾರ್ಯ. ಕೋವಿಡ್ ಜೊತೆ ಬದುಕುವುದನ್ನು ನಾವು ಕಲಿಯಲೇ ಬೇಕು. ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಪಾಲಿಸುವುದು, ಸೂಚನೆ ಪ್ರಕಾರ ಲಸಿಕೆ ಹಾಕಿಸಿಕೊಳ್ಳುವುದು ಇವುಗಳನ್ನ ತಪ್ಪದೇ ಮಾಡಬೇಕು. ಕೋವಿಡ್ ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ನಮಗೆ ಅದರ ಅನೇಕ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಅದನ್ನ ಹೇಗೆ ಎದುರಿಸಬಹುದು ಎಂಬುದು ಗೊತ್ತಿದೆ" ಎಂದು ಸಚಿವರು ಹೇಳಿದ್ದಾರೆ.
ಇನ್ನೂವರೆಗೆ ಯಾರಾದರೂ ಲಸಿಕೆ ತೆಗೆದುಕೊಂಡಿಲ್ಲದೇ ಇದ್ದಲ್ಲಿ ತಪ್ಪದೇ ಹಾಕಿಸಿಕೊಳ್ಳಬೇಕು. ಎರಡೂ ಡೋಸ್ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಮೂರನೇ ಡೋಸ್ಗೆ ಸೂಚನೆ ಬಂದರೂ ಅಗತ್ಯವಾಗಿ ಪಡೆದುಕೊಳ್ಳಬೇಕು. ಹೊಸ ಅಲೆ ಬರುವಷ್ಟರಲ್ಲಿ ಪ್ರತಿಯೊಬ್ಬರೂ ಸಂಪೂರ್ಣ ಲಸಿಕೆ ಹಾಕಿಸಿಕೊಂಡು ಸನ್ನದ್ಧರಾಗಿರಬೇಕು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕರೆ ನೀಡಿದ್ದಾರೆ.
ಆದರೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬರೂ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆನ್ನಲಾಗಿದೆ. ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಮೊದಲ ಡೋಸ್ ಅನ್ನು ಶೇ. 105ರಷ್ಟು ಕೊಡಲಾಗಿದೆ. ಎರಡನೇ ಡೋಸ್ ಶೇ. 98ರಷ್ಟು ನೀಡಲಾಗಿದೆ. ಅದರಂತೆ 10-12 ಲಕ್ಷದಷ್ಟು ಜನರು ಎರಡನೇ ಡೋಸ್ ಪಡೆದಿಲ್ಲ ಎನ್ನಲಾಗಿದೆ. ಇನ್ನು, 60 ವರ್ಷ ಮೇಲ್ಪಟ್ಟ ವಯಸ್ಸಿನವರ ಪೈಕಿ ಮೂರನೇ ಡೋಸ್ ಅನ್ನು ಶೇ. 55ರಷ್ಟು ಮಂದಿ ಪಡೆದಿದ್ದಾರೆ.
"ಈಗ 12 ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಲಸಿಕೆ ಕಾರ್ಯ ನಡೆಯುತ್ತಿದೆ. ಪೋಷಕರು ಇದರತ್ತ ಗಮನ ಕೊಟ್ಟು ತಮ್ಮ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಬೇಕು. ಸರಕಾರದಿಂದ ಉಚಿತವಾಗಿ ಈ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು," ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸಂಬಂಧ ನಡೆಸಿದ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಸಚಿವ ಸುಧಾಕರ್ ಕೂಡ ಪಾಲ್ಗೊಂಡಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications