Breaking news: ನಟ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಆರೋಪಿಗಳಿಗೆ ಜೈಲೇ ಗತಿ
ಬೆಂಗಳೂರು, ಸೆಪ್ಟಂಬರ್ 13: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ (Darshan Thoogudeepa) ಸೇರಿದಂತೆ 17 ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಗುರುವಾರಕ್ಕೆ ಅಂತ್ಯಗೊಂಡಿದೆ. ಇಂದು ಶುಕ್ರವಾರ ಪ್ರಕರಣ ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಾಲಯ ಮತ್ತೆ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಿತು.
ಹೌದು, ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟಂಬರ್ 17ರವರೆಗೆ ವಿಸ್ತರಣೆ ಮಾಡಿ ಶುಕ್ರವಾರ ಕೋರ್ಟ್ ಆದೇಶ ನೀಡಿದೆ. ಇತ್ತೀಚೆಗಷ್ಟೇ ನಟ ದರ್ಶನ್ಗೆ ಸಂಬಂಧಿಸಿದಂತೆ ಈ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅದಾದ ಬಳಿಕ ಮೂರು ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದ ಕೋರ್ಟ್ ಇದೀಗ ಮತ್ತೊಮ್ಮೆ ವಿಸ್ತರಣೆ ಮಾಡಿ ನಿರ್ಧಾರ ಪ್ರಕಟಿಸಿದೆ.

ಜಾಮೀನು ಅರ್ಜಿ ಹಾಕುವ ತವಕದಲ್ಲಿದ್ದ ನಟ ದರ್ಶನ್ ಮತ್ತವರ ಸಹಚರರಿಗೆ ಕೋರ್ಟ್ ಶಾಕ್ ನೀಡಿದೆ. ನಿಯಮದ ಪ್ರಕಾರ ಪ್ರಕರಣ ದಾಖಲಾಗಿ 90 ದಿನಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಅದರಂತೆ ಪೊಲೀಸ್ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ಜಾಮೀನು ಸಿಗಲಿದೆ ಎಂದು ಆಸೆ ಹೊಂದಿದ್ದ ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಕಳೆದ ಬಾರಿ ಸೆಪ್ಟಂಬರ್ 09 ರಂದು ವಿಚಾರಣೆ ನಡೆಸಿದ್ದ ಕೋರ್ಟ್ ಈ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ.12ರವರೆಗೆ ವಿಸ್ತರಣೆ ಮಾಡಿತ್ತು. ನಂತರ ಮತ್ತೀಗ ವಿಸ್ತರಣೆ ಮಾಡಿದೆ. ಇದೇ ವೇಳೆ ನಟ ದರ್ಶನ್ ತೂಗುದೀಪ ಮಾಧ್ಯಮಗಳು ಚಾರ್ಜ್ಶೀಟ್ನಲ್ಲಿರುವ ಮಾಹಿತಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಲು ಮನವಿ ಮಾಡಿದ್ದರು.
ಇದಕ್ಕೆ ಹೈಕೋರ್ಟ್ ನಟ ದರ್ಶನ್ ಮನವಿ ಪುರಸ್ಕರಿಸಿ, ಚಾರ್ಜ್ಶೀಟ್ಗೆ ಸಂಬಂಧಿಸಿದಂತೆ ಮಾಹಿತಿ ಪ್ರಕಟಿಸಿದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿತು. ಇಂದು ಶುಕ್ರವಾರ ನಟಿ ಹಾಗೂ ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರು ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಮೊದಲು ಅವರ ಜೈಲಿನಿ ಹೊರ ಬರಲು ಜಾಮೀನು ಕೋರಿದ್ದರು. ಆದರೆ ಅವರ ಅರ್ಜಿ ತಿರಸ್ಕೃತಗೊಂಡಿತ್ತು.
ಪ್ರಕರಣದ ಹಿನ್ನೆಲೆ ಏನು?
ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ನಟ ದರ್ಶನ್ ಪ್ರೇಯಸಿ, ನಟಿ ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ. ಈ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಸದಸ್ಯರ ಸಹಾಯದ ಮೇರೆಗೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ತರಲಾಗಿತ್ತು.
ಇಲ್ಲಿ ಶೆಡ್ ನಲ್ಲಿಟ್ಟು ಆತನಿಗೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಆರೋಪಿಗಳು ಹಿಂಸೆ ಕೊಟ್ಟು, ಮನ ಬಂದಂತೆ ಥಳಿಸಿದ್ದರು. ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲಿಸರು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಿ 95 ದಿನ ಕಳೆದಿವೆ.












Click it and Unblock the Notifications