ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಕೃಷ್ಣರಾವ್ ಗುರುತು ಪತ್ತೆ
ಬೆಂಗಳೂರು, ಜೂ.30 : ಕರ್ನಾಟಕ ಲೋಕಾಯುಕ್ತದಲ್ಲಿನ ಹಣದ ಬೇಡಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಣದ ಬೇಡಿಕೆ ಇಟ್ಟಿದ್ದ ಕೃಷ್ಣರಾವ್ ಎಂಬ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಉಪ ಲೋಕಾಯುಕ್ತರ ಆದೇಶದ ಅನ್ವಯ ನಡೆಯುತ್ತಿದ್ದ ತನಿಖೆಗೆ ನ್ಯಾ.ವೈ.ಭಾಸ್ಕರರಾವ್ ತಡೆ ನೀಡಿದ್ದಾರೆ.
ಲಂಚದ ಹಗರಣದಲ್ಲಿ ಮೊದಲು ಬೆಳಕಿಗೆ ಬಂದ ಹೆಸರು ಕೃಷ್ಣರಾವ್. ಅಧಿಕಾರಿಗಳನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಕೃಷ್ಣರಾವ್ ಯಾರು? ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೃಷ್ಣರಾವ್ ಹಾಗೂ ಲೋಕಾಯುಕ್ತ ಜಂಟಿ ಆಯುಕ್ತ (ಪಿಆರ್ಒ) ಸೈಯದ್ ರಿಯಾಜ್ ಅವರ ನಡುವಿನ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಎಎಪಿಯಿಂದ ದೂರು]

ಲೋಕಾಯುಕ್ತ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಆದೇಶದ ಮೇರೆಗೆ ಮೂರು ದಿನಗಳಿಂದ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಪೊಲೀಸರು ಈ ವಿವರಗಳನ್ನು ಸಂಗ್ರಹಣೆ ಮಾಡಿದ್ದರು. ಆದರೆ, ಈ ತನಿಖೆಗೆ ಲೋಕಾಯುಕ್ತರು ತಡೆ ನೀಡಿದ್ದಾರೆ. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]
ತನಿಖೆ ಕೈಗೊಂಡಿದ್ದ ಪೊಲೀಸರು ಕೃಷ್ಣರಾವ್ ಮತ್ತು ಅವರ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ಇನ್ನೂ ಮೂವರ ಗುರುತನ್ನು ಪತ್ತೆ ಹಚ್ಚಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದೂರವಾಣಿ ಕರೆ ಮತ್ತು ಕೆಲವು ಐಷಾರಾಮಿ ಹೋಟೆಲ್ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಆದರೆ, ಈಗ ತನಿಖೆಗೆ ತಡೆ ನೀಡಲಾಗಿದೆ.[ಲೋಕಾಯುಕ್ತ ಪ್ರಕರಣ: ಕೈ ತೊಳೆದುಕೊಂಡ ಸಿದ್ದು]
ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ನ್ಯಾ.ಭಾಸ್ಕರರಾವ್, ಉಪ ಲೋಕಾಯುಕ್ತರು ಆದೇಶಿಸಿದ್ದ ತನಿಖೆಗೆ ತಡೆ ನೀಡಿದ್ದಾರೆ. ಹಗರಣದ ಬಗ್ಗೆ ಯಾರು ತನಿಖೆ ನಡೆಸಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.
ಅತ್ತ ಹಣದ ಬೇಡಿಕೆ ಪ್ರಕರಣದ ಬಗ್ಗೆ ಆಮ್ ಆದ್ಮಿ ಪಕ್ಷ ಹೋರಾಟವನ್ನು ಮುಂದುವರೆಸಿದ್ದು. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಮತ್ತು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿರುವ ಕೃಷ್ಣರಾವ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಇನ್ನೂ ಎಫ್ಐಆರ್ ದಾಖಲಾಗಿಲ್ಲ.












Click it and Unblock the Notifications