ಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ: ಮುಂದಿದೆ ಭಾರೀ ಆತಂಕ
ಬೆಂಗಳೂರು, ನ 19: ಕೊರೊನಾ ಹಾವಳಿ ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ದೀಪಾವಳಿಯ ನಂತರ ಸೋಂಕಿತರ ಪ್ರಮಾಣ ಹೆಚ್ಚಾಗಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿರುವುದು ನೆಮ್ಮದಿ ತರುವ ವಿಚಾರ.
ಆದರೆ, ಕೊರೊನಾ ಸೋಂಕಿತರ ಪ್ರಮಾಣ ದೇಶದ ರಾಜಧಾನಿ ನವದೆಹಲಿಯಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಅಂತರ್ ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲದೇ ಇರುವುದು, ಸಾರ್ವಜನಿಕರು ಎಚ್ಚರಿಕೆಯಲ್ಲಿ ಇರಬೇಕಾದ ವಿಚಾರ.
ಹೊಸ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಬಿಡುಗಡೆಯಾಗುತ್ತಿರುವವರ ಸಂಖ್ಯೆಯ ಗ್ರಾಫ್, ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನು, ಕೊರೊನಾ ಟೆಸ್ಟ್ ವಿಚಾರದಲ್ಲೂ ಇತರ ರಾಜ್ಯಕ್ಕೆ ಹೋಲಿಸಿದರೆ, ರಾಜ್ಯ ಮಂಚೂಣಿಯಲ್ಲಿದೆ.
ಇವೆಲ್ಲದರ ನಡುವೆ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಸಾರ್ವಜನಿಕರಿಗೆ ಎಚ್ಚರಿಕೆಯೊಂದನ್ನು ನೀಡಿ, ಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಅವರು ಹೇಳಿದ್ದು ಹೀಗೆ:

ಕಾಲೇಜು ತೆರೆಯಲು ಸರಕಾರದಿಂದ ಅನುಮತಿ
ಕಾಲೇಜು ತೆರೆಯಲು ಸರಕಾರದಿಂದ ಅನುಮತಿ ಸಿಕ್ಕ ನಂತರ, ನವೆಂಬರ್ ಹದಿನೇಳರಿಂದ ತರಗತಿಗಳು ಆರಂಭವಾಗಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯ ಎಂದು ಯುಜಿಸಿ ಫರ್ಮಾನು ಹೊರಡಿಸಿದ ನಂತರ, ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಬಹುತೇಕ ಎಲ್ಲಾ ಕಡೆ ಎದುರಾಗುತ್ತಿದೆ. ಧೈರ್ಯವಾಗಿ ಕಾಲೇಜಿಗೆ ಬನ್ನಿ ಎನ್ನುವ ಮನವಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಸೊಪ್ಪು ಹಾಕುತ್ತಿಲ್ಲ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್
"ಕೊರೊನಾ ಅಲೆ ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ಕೊನೆಗೊಳ್ಳಲಿದೆ ಎನ್ನುವುದೆಲ್ಲಾ ಸುಳ್ಳು. ಈ ವೈರಸ್ ಹೊಸ ರೂಪದಲ್ಲಿ ಬರುವ ಸಾಧ್ಯತೆಯಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಯಾರೂ ಮೈಮೆರೆಯಬಾರದು. ಸಾರ್ವಜನಿಕರು ಎಚ್ಚರ ತಪ್ಪಬಾರದು" ಎಂದು ಡಾ.ಮಂಜುನಾಥ್ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕೊರೊನಾದಿಂದ ಗುಣಮುಖರಾದವರಿಗೆ ಅಡ್ಡಪರಿಣಾಮಗಳು
"ಕೊರೊನಾದಿಂದ ಗುಣಮುಖರಾದವರಿಗೆ ಅಡ್ಡಪರಿಣಾಮಗಳು ಹೆಚ್ಚಾಗುತ್ತಿರುವ ಕೇಸ್ ಗಳು ಬರಲಾರಂಭಿಸಿದೆ. ರಕ್ತನಾಳ ಹೆಪ್ಪುಗಟ್ಟುವುದು, ಹೃದಯದ ಸಮಸ್ಯೆಯ ಬಗ್ಗೆ ಜನರು ಆಸ್ಪತ್ರೆಯ ಬಳಿ ದೌಡಾಯಿಸುತ್ತಿದ್ದಾರೆ. ಈವರೆಗೆ ಶೀತ, ಜ್ವರ, ಕೆಮ್ಮು, ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು ಕೊರೊನಾದ ಲಕ್ಷಣಗಳಾಗಿದ್ದವು. ಈಗ ಅದು ಬೇರೆ ರೂಪದಲ್ಲಿ ಬರಬಹುದು"ಎಂದು ಡಾ.ಮಂಜುನಾಥ್ ಹೇಳಿದ್ದಾರೆ.

ವ್ಯಾಕ್ಸಿನ್ ಬಂದರೂ ಏನೂ ಪ್ರಯೋಜನವಿಲ್ಲ
ರಾಜ್ಯದಲ್ಲಿ ಮುಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಬಹುದು. ಹಾಗಾಗಿ, ಈ ಬಗ್ಗೆ ಸರಕಾರ ಮತ್ತು ಸಾರ್ವಜನಿಕರು ಈಗಲೇ ಜಾಗೃತಿ ವಹಿಸಿಕೊಳ್ಳುವುದು ಸೂಕ್ತ. ಜೂನ್ ತಿಂಗಳಲ್ಲಿ ವ್ಯಾಕ್ಸಿನ್ ಬಂದರೂ ಏನೂ ಪ್ರಯೋಜನವಿಲ್ಲ"ಎಂದು ಡಾ.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications