ಕೊರೊನಾ: ಬದುಕಿದ್ದರೆ ತಾನೇ ನೂರು ಯುಗಾದಿ, ಆಡಳಿತ ಯಂತ್ರ ನಿಯಂತ್ರಣ ತಪ್ಪದಿರಲಿ
ಒಂದು ದಿನದ ಹಿಂದೆ ಪ್ರಧಾನಿ ಮೋದಿ, ಲಾಕ್ ಡೌನ್ ಇದ್ದರೂ ಸಾರ್ವಜನಿಕರು ಇದನ್ನು ಸೀರಿಯಸ್ ಆಗಿ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಸಾಮಾಜಿಕ ತಾಣ, ಇತರ ಮೂಲಗಳನ್ನು ಬಳಸಿಕೊಂಡು, ವೈರಸ್ ತೀವ್ರತೆಯನ್ನು ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರು.
ಪ್ರಜ್ಞಾವಂತರಾದಿಯಾಗಿ ಎಲ್ಲರೂ, ರಸ್ತೆಗಿಳಿದಾಗ, ಕೊನೆಯ ಅಸ್ತ್ರವಾಗಿ, ಪೊಲೀಸರು ದಂಡಂ ದಶಗುಣಂ ಎನ್ನುವಂತೆ ಕಾರ್ಯೋನ್ಮುಖರಾದಾಗ ಒಂದು ಹಂತಕ್ಕೆ ಸಾರ್ವಜನಿಕರ ತಿರುಗಾಟ ನಿಯಂತ್ರಣಕ್ಕೆ ಬಂದಿತ್ತು.
ಆದರೆ, ಈ ಎಲ್ಲಾ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತೆ, ಯುಗಾದಿ ಮುನ್ನಾದಿನ ಮುಖ್ಯಮಂತ್ರಿಗಳು ಹೊರಡಿಸಿದ ಆದೇಶ, ಕೊರೊನಾ ನಿಯಂತ್ರಿಸುವ ಸರಕಾರದ ನಿಯತ್ತನ್ನೇ ಪ್ರಶ್ನಿಸುವಂತೆ ಮಾಡಿದೆ. ಮುತ್ಸದ್ದಿ ರಾಜಕಾರಣಿಯೊಬ್ಬರಿಂದ ಇಂತಹ ನಿರ್ಧಾರವೇ ಎಂದು ಬೇಸರಿಸುವಂತಾಗಿದೆ.
"ಹೋಗುವವರು ಹೋಗಿ, ಬರುವವರು ಬನ್ನಿ, ನಾಳೆಯಿಂದ ಲಾಕ್ ಡೌನ್" ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ, ಎರಡು ದಿನಗಳಿಂದ ಅಯ್ಯೋ ಪಾಪ ಎನಿಸುವಂತೆ ಒದ್ದಾಡುತ್ತಿದ್ದ ಅಧಿಕಾರಿಗಳ ಬುಡವನ್ನೇ ಅಲ್ಲಾಡುವಂತೆ ಮಾಡಿದೆ.

ನೀವು ಎಲ್ಲಿದ್ದರೋ ಅಲ್ಲೇ ಹಬ್ಬ ಮಾಡಿ
ನೀವು ಎಲ್ಲಿದ್ದರೋ ಅಲ್ಲೇ ಹಬ್ಬ ಮಾಡಿ, ಎಲ್ಲಾ ವರ್ಷದಂತೆ ಈ ವರ್ಷದ ಯುಗಾದಿಯಲ್ಲ. ಕುಟುಂಬದ ಜೊತೆ ಕಾಲ ಕಳೆಯಿರಿ, ಚೆನ್ನಾಗಿ ಹೊಬ್ಬಟ್ಟು ತಿನ್ನಿ, ಬ್ಯಾಚುಲರ್ ಗಳು ಅಡ್ಜಸ್ಟ್ ಮಾಡಿಕೊಳ್ಳಿ, ಮನೆಯಿಂದ ಹೊರಗೆ ಬರಬೇಡಿ. ಊರಿಗೆ ಹೋದವರು ಅಲ್ಲೇ ಇರಿ, ಬೇರೆ ಊರಿನಲ್ಲಿ ಇರುವವರು ಕದಲಬೇಡಿ ಎನ್ನುವ ಆದೇಶ ರಾಜ್ಯ ಸರಕಾರದಿಂದ ಖಡಾಖಂಡಿತವಾಗಿ ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಇಬ್ಬರು ಸಚಿವರ ನಡುವೆ ಸಂವಹನದ ಕೊರತೆ
ಇದಕ್ಕೆ ಇಂಬು ನೀಡುವಂತೆ, ಕೊರೊನಾ ವಿಚಾರವನ್ನು ನಿಭಾಯಿಸುತ್ತಿರುವ ಇಬ್ಬರು ಸಚಿವರ ನಡುವೆ ಸಂವಹನದ ಕೊರತೆಯಿರುವುದು ಗೊತ್ತಿರುವ ವಿಚಾರ. ಹಬ್ಬದ ಮುನ್ನಾದಿನ ಇದರ ಸಂಪೂರ್ಣ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಂದ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಯಡಿಯೂರಪ್ಪ ವಹಿಸಿದ್ದರು. ಆಡಳಿತಾತ್ಮಕವಾಗಿ ಇದೊಂದು ಅತ್ಯುತ್ತಮ ನಿರ್ಧಾರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನಾಳೆಯಿಂದ ಕಂಪ್ಲೀಟ್ ಶಟ್ ಡೌನ್
ಆದರೆ, ಹಬ್ಬದ ಮುನ್ನಾದಿನ ಬರುವವರು ಬರಬಹುದು, ಹೋಗುವವರು ಹೋಗಬಹುದು, ನಾಳೆಯಿಂದ ಕಂಪ್ಲೀಟ್ ಶಟ್ ಡೌನ್ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ, ಮನೆಯೇ ಮಂತ್ರಾಲಯ ಎನ್ನುವುದನ್ನು ಜಾರಿಗೆ ತರಲು ಅಧಿಕಾರಿಗಳು ನಡೆಸುತ್ತಿರುವ ಹರಸಾಹಸಕ್ಕೆ ಕೃಷ್ಣಾರ್ಪಣ ಬಿಟ್ಟ ಹಾಗೇ ಆಯಿತು. ಇದಾ ಲಾಕ್ ಡೌನ್ ಮಾಡುವ ಪರಿ. ಯಡಿಯೂರಪ್ಪನವರಂತಹ ರಾಜಕಾರಣಿಯಿಂದ ಇಂತಹ ನಿರ್ಧಾರವೇ ಎನ್ನುವುದು, ವೈರಸ್ ನಿಂದ ಮುಂದೆ ಎದುರಾಗಬಹುದಾದ ತೀವ್ರತೆಯನ್ನು ಅರ್ಥಮಾಡಿಕೊಂಡವರಿಗೆ ಗೊತ್ತಾಗಬಹುದು.

ವೈರಸ್ ಏನಾದರೂ ನಾಳೆ ಯುಗಾದಿ ಹಬ್ಬ ಎಂದು ಒಂದು ದಿನ ಬಿಟ್ಟು ಬರುತ್ತಾ
ವೈರಸ್ ಏನಾದರೂ ನಾಳೆ ಯುಗಾದಿ ಹಬ್ಬ ಎಂದು ಒಂದು ದಿನ ಬಿಟ್ಟು ಬರೋಣ ಎನ್ನುವ ಟೈಮ್ ಶೆಡ್ಯೂಲ್ ಹಾಕಿಕೊಂಡಿರುತ್ತಾ ಎನ್ನುವ ಸಿಂಪಲ್ ಕಾಮನ್ ಸೆನ್ಸ್ ಇಲ್ಲದಾಯಿತೇ ಎನ್ನುವುದಿಲ್ಲಿ ಪ್ರಶ್ನೆ. ಎಂತಹಾ ತುರ್ತು ಎಮರ್ಜೆನ್ಸಿಯಲ್ಲಿ ದೇಶವಿದೆ ಎನ್ನುವುದನ್ನು ಸರಕಾರಕ್ಕೇ ಅರ್ಥವಾಗದಿದ್ದರೆ, ಜನಸಾಮಾನ್ಯರಿಗೆ ಇನ್ನೆಲ್ಲಿಂದ ಅರ್ಥವಾದೀತು. ಹಬ್ಬದ ದಿನವಾದರೆ ಏನು, ಇನ್ನೊಂದಾದರೆ ಏನು, ಬದುಕಿದ್ದರೆ ತಾನೇ ಇನ್ನೂ ನೂರು ಯುಗಾದಿ ಎಂದು ಬಿಎಸ್ವೈ ಸರಕಾರ ಡೈನಾಮಿಕ್ ನಿರ್ಧಾರ ತೆಗೆದುಕೊಳ್ಲಬೇಕಾಗಿತ್ತು. ಇನ್ನೂ ಸಮಯ ಮಿಂಚಿಲ್ಲ.












Click it and Unblock the Notifications