'ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ', ಯುಗಾದಿ ತನಕ ಎಚ್ಚರ: ಕೋಡಿಶ್ರೀಗಳ ಭವಿಷ್ಯ
ಜಗತ್ತು ಈಗ ಎದುರಿಸುತ್ತಿರುವ ಅಶಾಂತಿ, ಕಾಯಿಲೆಗಳಿಗೆ ಜನರಿಗೆ ದೇವರ ಮೇಲಿನ ನಂಬಿಕೆ, ಭಕ್ತಿ ಕಮ್ಮಿಯಾಗುತ್ತಿರುವುದೇ ಕಾರಣ ಎಂದು ಪುನರುಚ್ಚಿಸಿರುವ ಕೋಡಿಮಠದ ಶ್ರೀಗಳು, ಇನ್ನೂ ಮೂರ್ನಾಲ್ಕು ತಿಂಗಳು ಎಚ್ಚರದಿಂದ ಇರಬೇಕೆನ್ನುವ ಭವಿಷ್ಯವನ್ನು ನುಡಿದಿದ್ದಾರೆ.
Recommended Video
ದಾವಣಗೆರೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, "ಜಗತ್ತಿನಲ್ಲಿ ವಿವೇಕಯುಳ್ಳ, ಶ್ರೇಷ್ಠ, ತಿಳುವಳಿಕೆ, ಬುದ್ದಿ ಇರುವವನು ಯಾರು ಎಂದರೆ ಅದು ಮನುಷ್ಯ. ಅಂತಹ ಮನುಷ್ಯ ಅವಿವೇಕ, ಆಚಾರ ವಿಚಾರವನ್ನು ಕಳೆದುಕೊಂಡರೆ, ಅವನನ್ನು ಎಚ್ಚರಿಸಲು ಕಾಲಕಾಲಕ್ಕೆ ಅನೇಕ ಕಾಯಿಲೆಗಳು ಬರುತ್ತಿರುತ್ತವೆ. ಈ ರೀತಿ ಬರುವಂತಹ ಕಾಯಿಲೆಗಳು ಜನರಿಗೆ ತಿಳುವಳಿಕೆಯನ್ನು ಮೂಡಿಸುತ್ತದೆ"ಎಂದು ಶ್ರೀಗಳು ಹೇಳಿದ್ದಾರೆ.
"ಇದೇ ರೀತಿ ಬಂದಿರುವಂತಹ ಕಾಯಿಲೆಯೇ ಕೊರೊನಾ, ಇದೇನು ಹೊಸದೇನಲ್ಲ. ಹಿಂದೆಯೂ, ಗಂಟಲುಬೇನೆ, ಶೀತ ಎಂದು ಬರುತ್ತಿತ್ತು. ಇಂತಹ ಕಾಯಿಲೆಗಳು ಯಾಕೆ ಬರುತ್ತಿದೆ ಎಂದರೆ, ಮನುಷ್ಯ ಸ್ವಚ್ಚತೆಯನ್ನು ಕಳೆದುಕೊಳ್ಳುತ್ತಿದ್ದಾನೆ"ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಕೆಲವು ತಿಂಗಳ ಹಿಂದೆಯೇ, ನಾಡಿನ ಕೆಲವು ಭಾಗದಲ್ಲಿ ಅತಿವೃಷ್ಟಿಯಾಗಲಿದೆ ಎನ್ನುವ ಭವಿಷ್ಯವನ್ನು ಕೋಡಿಶ್ರೀಗಳು ನುಡಿದಿದ್ದರು. ಅದರಂತೆಯೇ, ಕಲಬುರಗಿ, ವಿಜಯಪುರ ಮುಂತಾದ ಕಡೆ ಸುರಿದ ಬೀಭತ್ಸ ಮಳೆ, ಜನರ ಜೀವನವನ್ನು ನರಕಸದೃಶವನ್ನಾಗಿ ಮಾಡಿತ್ತು. ಕಂಡು ಕೇಳರಿಯದ ಮಳೆಗೆ ಜನರ ಜೀವನ ಮೂರಾಬಟ್ಟೆಯಾಗಿತ್ತು. ಕೊರೊನಾ ಹೆಚ್ಚಾಗಲಿದೆ, ಮುಂದೆ ಓದಿ..

ಮನೆಯೊಳಗೆ ಮತ್ತು ಹೊರಗೆ, ಸ್ವಚ್ಚ ವಾತಾವರಣ
ಮನೆಯೊಳಗೆ ಮತ್ತು ಹೊರಗೆ, ಸ್ವಚ್ಚ ವಾತಾವರಣ ಇಲ್ಲದೇ ಇರುವುದರಿಂದ ಮತ್ತು ಅಸಡ್ಡೆಯಿಂದಾಗಿ, ಇಂತಹ ವೈರಸ್ ಘೋರ ರೀತಿಯಲ್ಲಿ ಮುನ್ನುಗ್ಗುತ್ತಿದೆ. ಕೇವಲ ಒಂದು ಗ್ರಾಂ ಇರುವ ವೈರಸ್ ಇಂದು ಜಗತ್ತನ್ನೇ ಹೆದರಿಸುತ್ತಿದೆ. ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಈ ವೈರಸಿನ ಹಾವಳಿ ಜಗತ್ತಿನಾದ್ಯಂತ ಇನ್ನೂ ಇರಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಸಂಪದ್ಬರಿತ ರಾಜ್ಯ, ಸನ್ಯಾಸಿ ದಾನ ಕೊಟ್ಟಿದ ರಾಜ್ಯವೆಂದರೆ ಅದು ಅಮೆರಿಕ
"ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ದವಿಲ್ಲದ ಮಡಿಯೇ, ಪುರವಿಲ್ಲದೇ ಕೂಳಾದೀತು ಎಂದು ಹಿಂದೆ ನುಡಿದಿದ್ದೆ. ಮುನಿಪುರ ಎಂದರೆ ಅದು ಅಮೆರಿಕ, ವಿಷ್ಣು ವಾಮನಾವತಾರದಲ್ಲಿ ಅಲ್ಲಿಯೇ ಭೂಮಿ ತುಳಿದಿದ್ದು. ಅದು ಸಂಪದ್ಬರಿತ ರಾಜ್ಯ, ಸನ್ಯಾಸಿ ದಾನ ಕೊಟ್ಟಿದ ರಾಜ್ಯವೆಂದರೆ ಅದು ಅಮೆರಿಕ. ಯುದ್ದವಿಲ್ಲದೇ ಆ ದೇಶ ಹಾಳಾದೀತು" ಎನ್ನುವ ಭವಿಷ್ಯವನ್ನು ಶ್ರೀಗಳು ನುಡಿದಿದ್ದಾರೆ.

ಕಾರ್ತಿಕ ಮತ್ತು ಅಶ್ವಯುಜ ಮಾಸದಲ್ಲಿ ಕೊರೊನಾ ಜಾಸ್ತಿ
"ಹಿಂದೆಯೂ ಹೇಳಿದ್ದೆ, ಕಾರ್ತಿಕ ಮತ್ತು ಅಶ್ವಯುಜ ಮಾಸದಲ್ಲಿ ಕೊರೊನಾ ಜಾಸ್ತಿಯಾಗುತ್ತದೆ ಎಂದು. ಜನವರಿ, ಫೆಬ್ರವರಿಯಲ್ಲಿ ಇದು ಹೇಳುವುದಕ್ಕೆ ಬರುವುದಿಲ್ಲ. ಯುಗಾದಿಯವರೆಗೆ ಸಾರ್ವಜನಿಕರು ಎಚ್ಚರದಿಂದ ಇರುವುದು ಸೂಕ್ತ. ಇನ್ನೂ ಮಳೆ ಹೆಚ್ಚಾಗುವ ಆ ಮೂಲಕ ಜನರಲ್ಲಿ ಅಶಾಂತಿ ಹೆಚ್ಚಾಗುವ ಘಟನೆಗಳು ಸಂಭವಿಸಲಿವೆ" - ಕೋಡಿಶ್ರೀಗಳು.

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು
"ಜನರು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಇದೆ. ಜನರು ಎಚ್ಚರದಿಂದ ಇದ್ದು, ಆರೋಗ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಂಡು ಬರಬೇಕು. ಗ್ರಹಣ ಸಂಭವಿಸಿದ್ದರಿಂದ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗುತ್ತದೆ. ಯುಗಾದಿಯ ನಂತರ ಮುಂದೇನಾಗುತ್ತದೆ ಎಂದು ಹೇಳುತ್ತೇನೆ"ಎಂದು ಅರಸೀಕರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.












Click it and Unblock the Notifications